ಆರೋಗ್ಯಾಧಿಕಾರಿ, ಸಿಬ್ಬಂದಿ ತೆರಳಿ ಪರೀಕ್ಷೆ, ಶಾಸಕ ಬಸವಂತಪ್ಪ ಭೇಟಿ
ತೀವ್ರ ಶೀತ, ಜ್ವರದಿಂದ ಗ್ರಾಮಸ್ಥರು ಬಳಲುತ್ತಿದ್ದಾರೆಂಬ ವಿಷಯ ತಿಳಿದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಬುಧವಾರ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮಕ್ಕೆ ಆರೋಗ್ಯಾಧಿಕಾರಿ, ಸಿಬ್ಬಂದಿ ಸಮೇತ ತೆರಳಿ, ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಬಸವಂತಪ್ಪಗೆ ಗ್ರಾಮಸ್ಥರು ಕಳೆದ ಕೆಲವು ದಿನಗಳಿಂದ ಅನೇಕರು ಅನಾರೋಗ್ಯಕ್ಕೆ ತುತ್ತಾಗಲು ಕಾರಣ ಏನೆಂಬುದೇ ಗೊತ್ತಾಗುತ್ತಿಲ್ಲ, ಜ್ವರಬಾಧೆ ಕಾಡಲು ಏನು ಕಾರಣವೆಂಬುದೇ ತಿಳಿಯದಾಗಿದೆ ಎಂದು ಅಳಲು ತೋಡಿಕೊಂಡರು.ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ನೆರೆಯ ಕೇರಳದಲ್ಲಿ ಕೊರೋನಾ ಉಪತಳಿ ಜೆಎನ್1 ಎಂಬ ಸೋಂಕು ಕಾಣಿಸಿದ್ದು, ಅಲ್ಲಲ್ಲಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಜಿಲ್ಲಾಡಳಿತವೂ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವತ್ತ ಗಮನ ಹರಿಸಿದೆ ಎಂದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಗ್ರಾಮಕ್ಕೆ ದೌಡಾಯಿಸಿ ಜ್ವರದಿಂದ ಬಳಲುತ್ತಿರುವವರ ಪರೀಕ್ಷೆಗೊಳಪಡಿಸಿದ್ದು, ಮೇಲ್ನೋಟಕ್ಕೆ ಚಿಕೂನ್ ಗುನ್ಯಾ ಅಥವಾ ಡೆಂಘೀ ಜ್ವರ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಗ್ರಾಮಸ್ಥರ ಅನಾರೋಗ್ಯದ ಕುರಿತಂತೆ ಗ್ರಾಪಂ ಪಿಡಿಒ ನಾಗರಾಜ ಶಾಸಕರಿಗೆ ವಿವರಿಸಿದರು.
ಮಾರ್ಗ ಮಧ್ಯೆ ತಾಲೂಕಿನ ಎಚ್.ಕಲ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಶಿಕ್ಷಕರು ಮತ್ತು ಮಕ್ಕಳ ಹಾಜರಾತಿ ಪರಿಶೀಲಿಸಿದರು. ಈ ವೇಳೆ ಶಿಕ್ಷಕರು ಬೆಳಗ್ಗೆ ಮತ್ತು ಮಧ್ಯಾಹ್ನ ಹಾಜರಿ ಪುಸ್ತಕದಲ್ಲಿ ಸಹಿ ಮಾಡುವುದನ್ನು ಎರಡೂ ಬೆಳಿಗ್ಗೆ ಮಾಡಿರುವುದನ್ನು ಕಂಡು ತರಾಟೆಗೆ ತೆಗೆದುಕೊಂಡರು.
ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಕೊಳೆತ ತರಕಾರಿ ಕಂಡು ಕೆಂಡಾಮಂಡಲರಾದ ಶಾಸಕ ಬಸವಂತಪ್ಪ ಬಿಸಿಯೂಟ ನಿರ್ವಹಿಸುವ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೇಲಧಿಕಾರಿಗಳಿಗೆ ಸೂಚಿಸುವುದಾಗಿ ಎಚ್ಚರಿಸಿದರು. ಇಂತಹ ಲೋಪಗಳು ಮರುಕಳಿಸದಂತೆ ಜಾಗ್ರತೆ ವಹಿಸಿ. ನಾನು ಯಾವಾಗ ಬೇಕಾದರೂ, ಯಾವುದೇ ಶಾಲೆಗಾದರೂ ಭೇಟಿ ನೀಡುತ್ತೇನೆ. ಮಕ್ಕಳಿಗೆ ನೀಡುವ ಆಹಾರ ಗುಣಮಟ್ಟದ್ದಾಗಿರಬೇಕು ಎಂದು ತಾಕೀತು ಮಾಡಿದರು. ಸ್ವಚ್ಛತೆ ಕಾಪಾಡಿ, ಫಾಗಿಂಗ್ ಮಾಡಿಸಿ