ಈ ಬುಡಕಟ್ಟು ಜನತೆಗೆ ಕುದುರೆಯೇ ದೇವರು

KannadaprabhaNewsNetwork |  
Published : Feb 18, 2024, 01:40 AM IST
ಸಿಂಗಾರ ಸಿರಿಯೇ ಅಂಗಾಲಿನಲ್ಲಿ ಆಭರಣ ಹಾಕುವ ಮಾಯೇ... ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಗೌಡರ ಮನೆಯಿಂದ ಕಂಪಳದೇವರ ಕುದುರೆಯನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಂಪಳದೇವರಹಟ್ಟಿ ಗ್ರಾಮದಲ್ಲಿ ನಡೆಯುವ ಕಂಪಳರಂಗಸ್ವಾಮಿ ಜಾತ್ತೆಗೆ ಸಿಂಗರಿಸಿಕೊಂಡು ಹೊರಟಿರುವ ಕುದುರೆ.  =========== | Kannada Prabha

ಸಾರಾಂಶ

ಹುಡೇಂ ಗ್ರಾಮದ ಈಶ್ವರಗೌಡ ಸೇರಿ ಅವರ ಸಹೋದರರ ಮುಂದಾಳತ್ವದಲ್ಲಿ ಗ್ರಾಮಸ್ಥರು ಕುದುರೆಯನ್ನು ಭಕ್ತಿಯಿಂದ ಶೃಂಗರಿಸಿ, ಪೂಜಿಸಿ ವಾದ್ಯಮೇಳಗಳಿಂದ ಮೆರವಣಿಗೆ ಮಾಡಿದರು. ಹುಡೇಂ ಗ್ರಾಮದ ಗೌಡರ ಮನೆಯಿಂದ ಕುದುರೆಯನ್ನು ಶ್ರೀಕಂಪಳರಂಗಸ್ವಾಮಿ ದೇವಸ್ಥಾನದ ಬಳಿಗೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು

ಭೀಮಣ್ಣ ಗಜಾಪುರ ಕೂಡ್ಲಿಗಿ

ಬುಡಕಟ್ಟು ಆಚರಣೆಯೇ ಹಾಗೇ.. ಪ್ರಾಣಿ, ಪಕ್ಷಿ, ಗಿಡಮರ ಸೇರಿದಂತೆ ಪ್ರಕೖತಿಯನ್ನು ಆರಾಧಿಸುವ ಆರಾಧಕರು ಇವರು. ಇದಕ್ಕೆ ಇಂಬು ನೀಡುವಂತೆ ತಾಲೂಕಿನ ಗಡಿ ಗ್ರಾಮ ಹುಡೇಂನಲ್ಲಿ ಶುಕ್ರವಾರ ನಡೆದ ಕಂಪಳರಂಗಸ್ವಾಮಿ ಬುಡಕಟ್ಟು ಆಚರಣೆಯಲ್ಲಿ ಮೊದಲ ಪೂಜೆ, ಪ್ರಾಶಸ್ತ್ಯ ಕುದುರೆಗೆ ನೀಡಿದ್ದರು. ಕುದುರೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಕಂಪಳದೇವರಹಟ್ಟಿ ಗ್ರಾಮಕ್ಕೆ ಭಕ್ತಿ ಭಾವದಿಂದ ಕರೆದೊಯ್ಯುತ್ತಾರೆ. ಕುದುರೆ ಹೋಗುವ ದಾರಿಯುದ್ದಕ್ಕೂ ಹಳ್ಳಿಗಳ ಭಕ್ತರು ಕುದುರೆಗೆ ಪೂಜಿಸಿ ನಮಿಸಿ ಧನ್ಯತಾಭಾವ ಮೆರೆಯುವ ದೖಶ್ಯ ಆಶ್ಚರ್ಯವನ್ನುಂಟು ಮಾಡಿತು.

ಈ ಬುಡಕಟ್ಟು ಆಚರಣೆ ಇಂದು ನಿನ್ನೆಯದಲ್ಲ, ತಲೆ ತಲಾಂತರದಿದ ನಡೆದುಕೊಂಡು ಬಂದಿರುವ ಈ ಭಾಗದ ಬುಡಕಟ್ಟು ಜನತೆಯ ಪಂರಪರೆಯಾಗಿದೆ. ತಾಲೂಕಿನ ಹುಡೇಂ ಗ್ರಾಮದ ಈಶ್ವರಗೌಡ ಸೇರಿ ಅವರ ಸಹೋದರರ ಮುಂದಾಳತ್ವದಲ್ಲಿ ಗ್ರಾಮಸ್ಥರು ಕುದುರೆಯನ್ನು ಭಕ್ತಿಯಿಂದ ಶೃಂಗರಿಸಿ, ಪೂಜಿಸಿ ವಾದ್ಯಮೇಳಗಳಿಂದ ಮೆರವಣಿಗೆ ಮಾಡಿದರು. ಹುಡೇಂ ಗ್ರಾಮದ ಗೌಡರ ಮನೆಯಿಂದ ಕುದುರೆಯನ್ನು ಶ್ರೀಕಂಪಳರಂಗಸ್ವಾಮಿ ದೇವಸ್ಥಾನದ ಬಳಿಗೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಆ ನಂತರ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮಕ್ಕೆ ಕುದುರೆಯನ್ನು ತಮಟೆ, ಉರುಮೆ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಕುದುರೆ ಸಾಗುವ ದಾರಿಯಲ್ಲಿ ಹುಡೇಂ, ತಾಯಕನಹಳ್ಳಿ, ಚಿಕ್ಕೋಬನಹಳ್ಳಿ ಸೇರಿ ಹತ್ತು ಹಲವು ಹಳ್ಳಿಗಳ ಭಕ್ತರು ಕುದುರೆಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಗೌಡರ ವಂಶದ ಈಶ್ವರಗೌಡ, ಮಂಜುನಾಥ ಗೌಡ, ಬಸವರಾಜ ಗೌಡ, ಗ್ರಾಪಂ ಅಧ್ಯಕ್ಷ ಬಿ. ರಾಮಚಂದ್ರಪ್ಪ, ಕೆ.ರಾಜಶೇಖರಪ್ಪ, ಜರುಗು ಬೋರಯ್ಯ, ಕೋಣನವರ ಮಲ್ಲಿಕಾರ್ಜುನ, ಪಾಲಯ್ಯನಕೋಟೆ ಮಂಜುನಾಥ, ಜೊಳ್ಳಜ್ಜರ ಕೆಂಗಣ್ಣ, ದಾಸರೋಬಯ್ಯ, ಪರ‍್ರಪ್ಪರ ಶರಣಪ್ಪ, ತುಡುಮ ಗುರುರಾಜ, ಗ್ರಾಪಂ ಸದಸ್ಯ ಅಜ್ಜಣ್ಣ, ಯಲ್ಲಪ್ಪ, ತಾಪಂ ಮಾಜಿ ಸದಸ್ಯ ಪಾಪನಾಯಕ, ಚಿನ್ನಯ್ಯ, ಎಚ್.ಬಿ.ರುದ್ರಪ್ಪ, ದೇವರಾಜ, ಕಳ್ಳಜ್ಜರ ಮಲ್ಲಿಕಾರ್ಜುನ ಸೇರಿ ಗ್ರಾಮಸ್ಥರು ಇಂತಹ ಅಪರೂಪದ ಆಚರಣೆಗೆ ಸಾಕ್ಷಿಯಾದರು.

ಕುದುರೆಗೆ ಭರ್ಜರಿ ಶೃಂಗಾರ: ಹುಡೇಂ ಗ್ರಾಮದಿಂದ ಕಂಪಳದೇವರಹಟ್ಟಿ ಗ್ರಾಮಕ್ಕೆ ಹತ್ತಾರು ಕೀಲೋಮೀಟರ್ ಕರೆದುಕೊಂಡು ಹೋಗುವ ದೇವರ ಕುದುರೆಗೆ ಶೃಂಗರಿಸುವ ಇತಿಹಾಸ ಕೇಳಿದರೆ ಚಕಿತರಾಗುತ್ತೀರಿ. 40 ವರ್ಷಗಳ ಹಿಂದೆ ಕುದುರೆಯಿಂದ ಹೊರಲಾಗದಷ್ಟು ಬಂಗಾರವನ್ನು ಮೈಮೇಲೆ ಹಾಕಿ ಶೃಂಗರಿಸುತ್ತಿದ್ದರು ಎಂಬುದು ಈ ಭಾಗದ ಹಿರಿಯರೆಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈಗಲೂ ಸಹ ಬಂಗಾರದಿಂದ ಸಿಂಗರಿಸುತ್ತಾರೆ.ಆದರೆ ಬಂಗಾರ ಕಡಿಮೆ ಇರುತ್ತದೆ. ಲಕ್ಷ್ಮಿಯ ಪ್ರತಿರೂಪವೆಂಬಂತೆ ಹೆಣ್ಣು ಕುದುರೆಯನ್ನು ಇಲ್ಲಿಯ ಬುಡುಕಟ್ಟು ಜನತೆ ಪೂಜಿಸುತ್ತಾರೆ. ಕುದುರೆ ಕಾಲಿಗೆ ಬೆಳ್ಳಿ ಗೆಜ್ಜೆಗಳನ್ನು ಕಟ್ಟಲಾಗುತ್ತದೆ. ಹಣೆಗೆ,ಕಿವಿಗೆ ಬಂಗಾದ ಓಲೆ ಸೇರಿದಂತೆ ಮಹಿಳೆಯರು ತೊಡುವ ಆಭರಣ ಹಾಕಿ ಕುದುರೆ ಸಿಂಗರಿಸುತ್ತಾರೆ. ಇಂತಹ ಅಪರೂಪದ ಆಚರಣೆ ಶುಕ್ರವಾರ ಈ ಭಾಗದ ಭಕ್ತರು ಕಣ್ತುಂಬಿಕೊಂಡರು. ಈ ದೇವರ ಕುದುರೆಯನ್ನು ಊರಲ್ಲಿ ಭಕ್ತರು ಅಡಿಮುಡಿಯಿಂದ ಪೂಜಿಸಿ ಪಾರಂಪರಿಕ ವಾದ್ಯಗಳಿಂದ ಮೆರವಣಿಗೆ ಮಾಡುವ ದೃಶ್ಯ ನಮ್ಮನ್ನು ಪುನಃ ಬುಡುಕಟ್ಟು ಆಚರಣೆಯ ಕಾಲಮಾನಕ್ಕೆ ಕರೆದೊಯ್ಯಿತು.

ಪುರಾತನದಿಂದ ನಡೆದ ಸಂಪ್ರದಾಯ: ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಗೌಡರ ಮನೆಯಿಂದ ಕುದುರೆಯು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ (ಕಂಪಳದೇವರಹಟ್ಟಿ) ಗ್ರಾಮಕ್ಕೆ ವರ್ಷಕ್ಕೊಮ್ಮೆ ಹೊರಡುವುದು ಪುರಾತನದಿಂದ ನಡೆದಿರುವ ಸಂಪ್ರದಾಯ. ತುಡುಮನವರ ಮನೆಯಿಂದ ಕೆಜಿಗಟ್ಟಲೇ ಬಂಗಾರದ ಆಭರಣಗಳಿಂದ ಸಿಂಗಾರಗೊಳಿಸಲಾಗುತ್ತಿತ್ತು. ಆ ವೈಭವ ನೋಡಲು ಸುತ್ತಮುತ್ತಲ ಹಳ್ಳಿಗಳಿಂದ ಸಾಕಷ್ಟು ಜನರು ಆಗಮಿಸುತ್ತಿದ್ದರು. ಆಗ ನಾವಿನ್ನೂ ಚಿಕ್ಕವರಿದ್ದೆವು ಎಂದು ಗ್ರಾಮದ ಅನೇಕ ಹಿರಿಯರು ನೆನಪಿನ ಮೆಲುಕು ಹಾಕಿದರು. ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದಿಂದ ಕುದುರೆ ತೆರಳಿದರೆ ಮಾತ್ರ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮದಲ್ಲಿ ಬುಡಕಟ್ಟು ಆಚರಣೆಯ ಶ್ರೀ ಕಂಪಳರಂಗಸ್ವಾಮಿ ದೇವರ ಜಾತ್ರೆಗೆ ಚಾಲನೆ ಸಿಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!