ಹೊಸಪೇಟೆ ಸೌಂದರ್ಯ ವೃದ್ಧಿಗೆ ಆದ್ಯತೆ: ರೂಪೇಶ್‌ ಕುಮಾರ್‌

KannadaprabhaNewsNetwork |  
Published : Sep 17, 2024, 12:51 AM IST
ಹೊಸಪೇಟೆ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹೊಸಪೇಟೆ ನಗರದಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗುವುದು. ಮುಖ್ಯರಸ್ತೆಗಳಲ್ಲಿ ಬಿದ್ದಿದ್ದ ಗುಂಡಿ ಮುಚ್ಚುವುದು, ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ನಗರಸಭೆ ನೂತನ ಅಧ್ಯಕ್ಷ ಎನ್. ರೂಪೇಶ್ ಕುಮಾರ್ ಹೇಳಿದರು.

ಹೊಸಪೇಟೆ: ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಐತಿಹಾಸಿಕ ಹೊಸಪೇಟೆ ನಗರದ ಸೌಂದರ್ಯ ವೃದ್ಧಿಗೆ ಒತ್ತು ನೀಡಲಾಗುವುದು. ಜತೆಗೆ ಅಭಿವೃದ್ಧಿಗಾಗಿ ತೆರಿಗೆ ಸಂಗ್ರಹಕ್ಕೂ ಆದ್ಯತೆ ನೀಡಲಾಗುವುದು ಎಂದು ನಗರಸಭೆ ನೂತನ ಅಧ್ಯಕ್ಷ ಎನ್. ರೂಪೇಶ್ ಕುಮಾರ್ ಹೇಳಿದರು.

ಇಲ್ಲಿನ ನಗರಸಭೆ ಕಚೇರಿಯಲ್ಲಿ ಸೋಮವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷ ಪದಗ್ರಹಣ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿಖ್ಯಾತ ಹಂಪಿಯಿಂದಾಗಿ ಹೊಸಪೇಟೆ ಪ್ರವಾಸಿಗರ ಕೇಂದ್ರವಾಗಿದೆ. ಪ್ರತಿನಿತ್ಯ ಸಾವಿರಾರು ಜನರು ಹಂಪಿಗೆ ಭೇಟಿ ನೀಡುತ್ತಿದ್ದು, ಅವರ ಅನುಕೂಲಕ್ಕಾಗಿ ನಗರದ ಹೃದಯ ಭಾಗದಲ್ಲಿ ಯಾತ್ರಿ ನಿವಾಸ ನಿರ್ಮಿಸಲು ಉದ್ದೇಶಿಸಲಾಗಿದೆ. ಹಂಪಿ ಪ್ರವಾಸಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ನಗರದ ಪ್ರಮುಖ ಸ್ಥಳದಲ್ಲಿ ಇ-ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಲಾಗುವುದು ಎಂದರು.

ನಗರದಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗುವುದು. ಮುಖ್ಯರಸ್ತೆಗಳಲ್ಲಿ ಬಿದ್ದಿದ್ದ ಗುಂಡಿ ಮುಚ್ಚುವುದು, ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ನಗರದ ಎಲ್ಲ ೩೫ ವಾರ್ಡ್‌ಗಳಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಶೀಘ್ರ ಕ್ರಮ ವಹಿಸಲಾಗುವುದು ಎಂದರು.

ಸರ್ಕಾರದ ಯಾವುದಾದರೊಂದು ಯೋಜನೆಯಡಿ ಅನುದಾನ ಲಭ್ಯವಾದರೆ, ನಗರದ ಹೃದಯ ಭಾಗದಲ್ಲಿ ನಗರಸಭೆ ಮಾಲೀಕತ್ವದ ಜಾಗದಲ್ಲಿ ಶಾಪಿಂಗ್ ಮಾಲ್, ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಿ, ನಗರಸಭೆಗೆ ಆದಾಯ ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ೧೧೨ ಪೌರಕಾರ್ಮಿಕರ ನೇಮಕಾತಿಗಾಗಿ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ, ತಂತಿ ಬೇಲಿ ಹಾಕಲಾಗುವುದು. ನಗರಸಭೆಯಲ್ಲಿ ನಡೆಯುವ ಅನಧಿಕೃತ ವ್ಯವಹಾರಗಳಿಗೆ ಕಡಿವಾಣ ಹಾಕಲಾಗುವುದು. ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ಸಮನ್ವಯತೆ ಕೊರತೆ ಉಂಟಾಗದಂತೆ ಕ್ರಮ ವಹಿಸುವೆ ಎಂದರು.

ಸಮೀಪದ ಕೊಂಡನಾಯಕನಹಳ್ಳಿಯ ಶಿವಜ್ಯೋತಿ ನಗರ ಸೇರಿದಂತೆ ೪೩ ಬಡಾವಣೆಗಳ ನಿವೇಶನದಾರರಿಗೆ ಫಾರಂ ನಂ. ೩ ಸಮಸ್ಯೆಯಾಗಿದೆ. ಅವುಗಳು ಅಗತ್ಯ ಮೂಲ ಸೌಕರ್ಯಗಳಿಲ್ಲದ ಕಾರಣಕ್ಕೆ ಅಪೂರ್ಣ ಬಡಾವಣೆ ಎಂದು ಪರಿಗಣಿಸಿದ್ದರಿಂದ ಫಾರಂ ನಂ. ೩ ನೀಡಲಾಗುತ್ತಿಲ್ಲ. ಇದರಿಂದ ಅಲ್ಲಿನ ನಿವೇಶನಗಳ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ. ಅದನ್ನು ತಪ್ಪಿಸಲು ನಿವೇಶನ ಮಾಲೀಕರಿಂದ ಡೆವಲಪ್‌ಮೆಂಟ್‌ ಚಾರ್ಜ್ ತುಂಬಿಸಿಕೊಂಡು, ನಗರಸಭೆಯಿಂದ ಬಡಾವಣೆ ಪೂರ್ಣಗೊಳಿಸಿ, ಫಾರಂ ನಂ. ೩ ಒದಗಿಸಲು ಚಿಂತನೆ ನಡೆಸಿದೆ. ಈ ಕುರಿತು ನಗರಸಭೆಯಲ್ಲಿ ಮತ್ತೊಮ್ಮೆ ಠರಾವು ಮಾಡಿ, ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ಜೆ.ಎಸ್. ರಮೇಶ ಗುಪ್ತಾ, ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಜೀವರತ್ನಂ, ಎಲ್.ಎಸ್. ಆನಂದ, ಹನುಮಂತಪ್ಪ (ಬುಜ್ಜಿ) ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!