ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿರುವ ೬೫೦೦ ಯೋಧರ ಕುಟುಂಬಗಳ ಆರೋಗ್ಯ ತಪಾಸಣೆಗೆ ಅಗತ್ಯವಾದ ಇ.ಸಿ.ಎಚ್.ಎಸ್ ಆಸ್ಪತ್ರೆಗಾಗಿ ಜಿಲ್ಲಾಧಿಕಾರಿ ಸೂಚನೆಯಂತೆ ತಹಸೀಲ್ದಾರ್ ಹರ್ಷವರ್ಧನ್ ತಾಲೂಕಿನ ಅರಾಭಿಕೊತ್ತನೂರಿನಲ್ಲಿ ಸ್ಥಳ ಪರಿಶೀಲನೆ ನಡೆಸಿದರು.ಇತ್ತೀಚೆಗೆ ನಿವೃತ್ತ ಯೋಧರ ಟ್ರಸ್ಟ್ ಅಧ್ಯಕ್ಷ ಜಗನ್ನಾಥನ್ ನೇತೃತ್ವದಲ್ಲಿ ಪದಾಧಿಕಾರಿಗಳು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಮ್ಮ ಬೇಡಿಕೆಗಳು ಈಡೇರದಿದ್ದರೆ ಕಾರ್ಗಿಲ್ ವಿಜಯೋತ್ಸವ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಈ ನಡುವೆ ಜಿಲ್ಲಾಧಿಕಾರಿ ಯೋಧರ ಬೇಡಿಕೆಗಳಿಗೆ ಸ್ಪಂದಿಸಿ ಕೂಡಲೇ ಯೋಧರಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವಾದ ಜಾಗ ಗುರುತಿಸಲು ತಹಸೀಲ್ದಾರ್ರಿಗೆ ಸೂಚಿಸಿದ್ದರು.ಆಸ್ಪತ್ರೆಗೆ ಸ್ಥಳ ಪರಿಶೀಲನೆ
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಹರ್ಷವರ್ಧನ್ ರಾಷ್ಟ್ರೀಯ ಹೆದ್ದಾರಿ-೭೫ಕ್ಕೆ ಹೊಂದಿಕೊಂಡಿರುವ ಅರಾಭಿಕೊತ್ತನೂರು ಗೇಟ್ನಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಹೊಂದಿಕೊಂಡಿರುವ ಸರ್ಕಾರಿ ಜಮೀನನ್ನು ಗುರುತಿಸಿ ಸ್ಥಳ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಸುಮಾರು ೬೫೦೦ ಯೋಧರ ಕುಟುಂಬಗಳಿದ್ದು, ಅವರ ಆರೋಗ್ಯ ನಿರ್ವಹಣೆಗೆಂದು ಕೇಂದ್ರ ಸರ್ಕಾರ ಈಗಾಗಲೇ ೮.೫೦ ಕೋಟಿ ಹಣ ಮಂಜೂರು ಮಾಡಿದೆ, ಆದರೆ ರಾಜ್ಯ ಸರ್ಕಾರ ಜಾಗ ಗುರುತಿಸಿ ಕೊಡುವಲ್ಲಿ ವಿಫಲವಾಗಿದೆ ಎಂದು ಯೋಧರು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಯುದ್ದದಲ್ಲಿ ಮೃತಪಟ್ಟವರ, ನಿವೃತ್ತಿಯಾದವರ, ಕುಟುಂಬದವರ ಜೀವನ ನಿರ್ವಹಣೆಗೆ ಪ್ರತಿಯೊಬ್ಬರಿಗೆ ಕನಿಷ್ಠ ೮ ಎಕರೆ ಕೃಷಿ ಭೂಮಿ ಸರ್ಕಾರ ಮಂಜೂರು ಮಾಡಲು ಕೇಂದ್ರದ ಸೂಚನೆ ಇದ್ದರೂ ಸಹ ನಮ್ಮ ರಾಜ್ಯ ಸರ್ಕಾರದ ಮತ್ತು ಜಿಲ್ಲಾಡಳಿತ ಜಮೀನು ಮಂಜೂರು ಮಾಡಿಲ್ಲ ಎಂಬುದು ಯೋಧರ ಆರೋಪವಾಗಿತ್ತು.ನಿವೃತ್ತ ಯೋಧರಿಗೆ ಜಮೀನು
ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸರ್ಕಾರಿ ಜಮೀನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಆದ್ಯತೆಯ ಮೇಲೆ ಯೋಧರಿಗೆ ಜಮೀನು ಒದಗಿಸಿಕೊಡಲು ಅಗತ್ಯ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ೬೬೫೦ ಮಂದಿ ನಿವೃತ್ತ ವೀರ ಯೋಧರಿದ್ದಾರೆ. ಇದಲ್ಲದೆ ವೀರನಾರಿಯರು ೭೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಾಸವಿದ್ದಾರೆ. ಇವರ್ಯಾರಿಗೂ ಶೇ.೯೮ರಷ್ಟು ಸರ್ಕಾರ ಭೂ ಮಂಜೂರಾತಿ ಮಾಡಿಲ್ಲ, ಈ ಸಂಬಂಧವಾಗಿ ಹಲವು ಬಾರಿ ಸಿಎಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಯೋಧರ ಅಳಲಾಗಿತ್ತು.ಕಳೆದ ೨೦೧೬ರ ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ ಎಲ್ಜಿಬಿ ಕರ್ನಾಟಕ ಸಚಿವಾಲಯದ ೧೯-೧೧-೨೦೧೬ರ ಸುತ್ತೋಲೆಯಲ್ಲಿ ಜಿಲ್ಲಾಧಿಕಾರಿಗೆ ಕೃಷಿಗೆ ಯೋಗ್ಯವಾದ ಜಮೀನು ೩ ರಿಂದ ೬ ತಿಂಗಳ ಒಳಗೆ ಮಂಜೂರು ಮಾಡಲು ಆದೇಶ ನೀಡಿತ್ತು. ಈ ಸಂದರ್ಭದಲ್ಲಿ ವಕ್ಕಲೇರಿ ಕಂದಾಯ ನಿರೀಕ್ಷಕ ಲೋಕೇಶ್, ಭೂಮಾಪಕ ಸಂತೋಷ್ ಇದ್ದರು.