ಸರ್ಕಾರಿ ಶಾಲೆ ಶೌಚಾಲಯ ಸ್ವಚ್ಛತೆಗೆ ಹೊಟೇಲ್ ಉದ್ಯಮಿ ಯೋಜನೆ

KannadaprabhaNewsNetwork |  
Published : Dec 11, 2025, 02:45 AM IST
ಶಾಲಾ ಶೌಚಾಲಯ ಸ್ಚಚ್ಛತೆ ಕಾರ್ಯಕ್ಕೆ ನೀಡಿರುವ ನೂತನ ವಾಹನ | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ನಿರಂತರ ಸ್ವಚ್ಛ ಮಾಡಿಕೊಡುವ ಸೇವೆ ಕುಂದಾಪುರದಲ್ಲಿ ಗುರುವಾರ (ಡಿ.11) ಆರಂಭವಾಗೊಳ್ಳಲಿದೆ. ಉದ್ಯಮಿ ಗೋಪಾಡಿ ಶ್ರೀನಿವಾಸ ಅವರು ತಮ್ಮ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ಮೂಲಕ ಪ್ರಾಯೋಗಿಕವಾಗಿ ತಮ್ಮ ಹುಟ್ಟೂರು ಕುಂದಾಪುರ ತಾಲೂಕು ಕೋಟೇಶ್ವರ ಶೈಕ್ಷಣಿಕ ವಲಯದಲ್ಲಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ.

ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ಯೋಜನೆ ಇಂದು ಉದ್ಘಾಟನೆ । ವಿನೂತನ ಪರಿಕಲ್ಪನೆ

ಶ್ರೀಕಾಂತ್ ಹೆಮ್ಮಾಡಿ ಕುಂದಾಪುರ

ಉಡುಪಿ ಜಿಲ್ಲೆಯಲ್ಲಿ ಸುಸಜ್ಜಿತ ಖಾಸಗಿ ಆಂಗ್ಲ ಮಾಧ್ಯಮಗಳ ಜೊತೆ ಸ್ಪರ್ಧಿಸಲಾಗದೇ ಸೋಲುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹೊಟೇಲ್ ಉದ್ಯಮಿಯೊಬ್ಬರು ವಿನೂತನವಾದ ಅಪರೂಪದ ಪರಿಕಲ್ಪನೆ ರೂಪಿಸಿದ್ದಾರೆ. ಸಿಬ್ಬಂದಿ ಕೊರತೆ, ಅನುದಾನದ ಅಲಭ್ಯತೆ ಇತ್ಯಾದಿ ಕಾರಣಗಳಿಂದ ಬಳಲುತ್ತಿರುವ ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ನಿರಂತರ ಸ್ವಚ್ಛ ಮಾಡಿಕೊಡುವ ಸೇವೆ ಕುಂದಾಪುರದಲ್ಲಿ ಗುರುವಾರ (ಡಿ.11) ಆರಂಭವಾಗೊಳ್ಳಲಿದೆ.

ಬೆಂಗಳೂರಿನಲ್ಲಿ ಉದ್ಯಮಿ ಗೋಪಾಡಿ ಶ್ರೀನಿವಾಸ ಅವರು ತಮ್ಮ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ಮೂಲಕ ಪ್ರಾಯೋಗಿಕವಾಗಿ ತಮ್ಮ ಹುಟ್ಟೂರು ಕುಂದಾಪುರ ತಾಲೂಕು ಕೋಟೇಶ್ವರ ಶೈಕ್ಷಣಿಕ ವಲಯ ವ್ಯಾಪ್ತಿಯ 6 ಗ್ರಾಮಗಳ 24 ಸರ್ಕಾರಿ ಶಾಲೆಗಳ ಶೌಚಾಲಯ ನಿರಂತರ ಸ್ವಚ್ಛವಾಗಿಡುವ ಶಾಶ್ವತ ಯೋಜನೆ ರೂಪಿಸಿದ್ದಾರೆ. ಅವರ ಕನಸಿನ ಈ ಯೋಜನೆ ಗುರುವಾರ ಕಾರ್ಯರೂಪಕ್ಕೆ ಬರುತ್ತಿದೆ.ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಗಂಭೀರ ಪರಿಸ್ಥಿತಿ ಎದುರಿಸುತಿದ್ದಾರೆ. ಶೌಚಾಲಯಗಳ ನಿರ್ಮಾಣ - ನಿರ್ವಹಣೆಗೆ ಸರ್ಕಾರದ ಅನುದಾನ ಒದಗುತ್ತಿಲ್ಲ, ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳೇ ಸ್ಥಳೀಯ ಸಂಪನ್ಮೂಲ ಬಳಸಿ ಶೌಚಾಲಯ ಸ್ವಚ್ಛತೆ ಕೈಗೊಳ್ಳಬೇಕು. ಎನ್‌ಜಿಒಗಳು, ಸ್ಥಳೀಯ ಉದ್ಯಮಗಳ ಸಿಎಸ್‌ಆರ್ ನಿಧಿಗಳಿಂದ ಈ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯವೇನೂ ನಿರ್ಮಾಣವಾಗುತ್ತದೆ, ಆದರೇ ಈ ಶೌಚಾಲಯಗಳ ದೈನಂದಿನ/ನಿರಂತರ ನಿರ್ವಹಣೆಗೆ ಸರ್ಕಾರ ಅನುದಾನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.ಈ ಸಮಸ್ಯೆಗಳನ್ನು ಮನಗಂಡ ಗೋಪಾಡಿ ಶ್ರೀನಿವಾಸ್ ಅವರು ರಾಜ್ಯಕ್ಕೆ ಮಾದರಿಯಾಗುವಂತಹ ಈ ಯೋಜನೆ ಅನುಷ್ಠಾನಗೊಳಿಸುತಿದ್ದಾರೆ. ಆರಂಭದಲ್ಲಿ 24 ಶಾಲೆಗಳು ಮುಂದೆ ಇನ್ನಷ್ಟು ಶಾಲೆಗಳಿಗೆ ಈ ಯೋಜನೆ ರೂಪಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಆಶಯ ಅವರದ್ದು.

ಶಾಶ್ವತ ಸ್ವಚ್ಛತೆಗೆ ವ್ಯವಸ್ಥೆ:ವಾರದಲ್ಲಿ ಎರಡು ದಿನ ಈ 24 ಸರ್ಕಾರಿ ಶಾಲೆಯ ಶೌಚಾಲಯಗಳನ್ನು ವಾರಕ್ಕೆ 2 ದಿನಗಳಂತೆ ಸ್ವಚ್ಛಗೊಳಿಸಲು ತಂಡ ಸಿದ್ಧಪಡಿಸಿ ಮಾರ್ಗದರ್ಶನ ನೀಡಲಾಗಿದೆ. ಒಂದೆರಡು ಬಾರಿಯಲ್ಲ, ಒಂದೆರಡು ವರ್ಷಕ್ಕೆ ಈ ಯೋಜನೆ ನಿಲ್ಲುವುದಿಲ್ಲ. ಅದು ನಿರಂತರವಾಗಿ ಮುಂದುವರಿಯಲು ಬೇಕಾದ ಆರ್ಥಿಕ ವ್ಯವಸ್ಥೆ, ಸಂಪನ್ಮೂಲವನ್ನು ಪ್ರತಿಷ್ಠಾನ ಕ್ರೋಢೀಕರಿಸಿದೆ.ಅಗತ್ಯ ಸಿಬ್ಬಂದಿ ನೇಮಿಸುವ ಜೊತೆಗೆ ನೂತನ ವಾಹನವನ್ನು ಪ್ರತಿಷ್ಠಾನ ಕೊಡುಗೆಯಾಗಿ ನೀಡಿದೆ. ಈಗಾಗಲೇ ಈ ಎಲ್ಲಾ ಶಾಲೆಗಳಲ್ಲಿ ಅಧ್ಯಯನದ ರೂಪದಲ್ಲಿ ಸ್ಪಚ್ಚತೆ ನಡೆಸಿ ಲೋಪದೋಷಗಳನ್ನು ಗುರುತಿಸಿ ಅವುಗಳಿಗೆ ಪರಿಹಾರವನ್ನೂ ರೂಪಿಸಲಾಗಿದೆ. ಅದರಂತೆ ನಿಯೋಜಿಸಲಾಗಿರುವ ವಾಹನವು ಸಿಬ್ಬಂದಿ ಸಾಗಾಟದ ಜೊತೆಗೆ, ಶಾಲೆಯಲ್ಲಿ ಸ್ವಚ್ಛತೆಗೆ ಬೇಕಾದ ವಿದ್ಯುತ್ ಸಮಸ್ಯೆ, ಪಂಪ್, ನೀರಿನ ಸಮಸ್ಯೆಗಳಾದಲ್ಲಿ, ಜನರೇಟರ್, ಪಂಪು, ಪೈಪ್, ನೀರು, ರಾಸಾಯನಿಕ ಇತ್ಯಾದಿಗಳಿಂದ ಸುಸಜ್ಜಿತವಾಗಿದೆ.

ಇಂದು ಕಾರ್ಯರೂಪಕ್ಕೆ: ಗುರುವಾರ ಸಂಜೆ 4 ಗಂಟೆಗೆ ಇಲ್ಲಿನ ಕೋಟೇಶ್ವರದ ಕೆಪಿಎಸ್ ಪ್ರಾಥಮಿಕ ಶಾಲಾ ವಿಭಾಗದ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಂಗಮಂದಿರದಲ್ಲಿ, ಭೀಮನಕಟ್ಟೆ ಭೀಮಸೇತು ಮುನಿವೃಂದ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ.ಕಿರಣ ಕುಮಾರ್ ಕೊಡ್ಗಿ ಮುಂತಾದ ಅಧಿಕಾರಿಗಳು, ಪ್ರತಿಷ್ಠಾನದ ಸಂಸ್ಥಾಪಕ ಗೋಪಾಡಿ ಶ್ರೀನಿವಾಸ ರಾವ್ ಮತ್ತವರ ಪತ್ನಿ ರುಕ್ಮಿಣಿ ಭಾಗವಹಿಸಲಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ನಿರಂತರ ಕೊಡುಗೆ

ಕೆರೆಯ ನೀರನ್ನು ಕೆರೆಗ ಚೆಲ್ಲಬೇಕು ಎನ್ನುವಂತೆ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಫೌಂಡೇಶನ್ ಈ ಹಿಂದೆಯೂ ಕೋಟೇಶ್ವರ ಸುತ್ತಮುತ್ತಲಿನಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿದಾಯಕವಾಗಿ ತೊಡಗಿಸಿಕೊಂಡಿದೆ. ಗೋಪಾಡಿ ಬಾಲಗೋಪಾಲ ಶಿಶುಮಂದಿರ, ಕೊರೋಡಿ ಶಾಲೆ ಹಾಗೂ ಬೀಜಾಡಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಿಗೆ ಧನಸಹಾಯ, ಕುಂಭಾಶಿ ಸರಕಾರಿ ಶಾಲೆಗೆ ಹೊಸ ತರಗತಿ ಕೊಠಡಿ ನಿರ್ಮಾಣ, 15 ಲಕ್ಷ ರು. ವೆಚ್ಟದಲ್ಲಿ ಡಿಜಿಟಲ್ ಶಿಕ್ಷಣ ನೀಡಲು ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಾಣ, 32 ಲಕ್ಷ ರು. ವೆಚ್ಚದಲ್ಲಿ ಕೋಟೇಶ್ವರ ಶಾಲೆಗೆ ಬಯಲು ರಂಗಮಂದಿರ ನಿರ್ಮಿಸಿ ಕೊಟ್ಟಿದೆ.

ಸ್ವಚ್ಛತೆ ಪಾಠಕ್ಕೆ ಉದ್ಯಮಿ ಮುಂದು

ಹೊಟೇಲ್ ಉದ್ಯಮಿಯಾಗಿರುವ ಗೋಪಾಡಿ ಶ್ರೀನಿವಾಸ ರಾಯರು ಬೆಂಗಳೂರಿನಲ್ಲಿ ಈಶಾನ್ಯ ಸಮೂಹ ಹೋಟೆಲ್ ಗಳನ್ನು ಸ್ಥಾಪಿಸಿ ಕಳೆದ 50 ವರ್ಷಗಳಿಂದ ಶುಚಿ, ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ, ಇದನ್ನೇ ಮಾನದಂಡವಾಗಿಟ್ಟು ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆಗೆ ಮುಂದಾಗಿದ್ದಾರೆ.ಅನೇಕ ಸರ್ಕಾರಿ ಶಾಲೆಗಳ ಶೌಚಾಲಯ ಶುಚಿಯಾಗಿಲ್ಲ. ಸ್ವಚ್ಛತೆಗೆ ಸರ್ಕಾರ ವ್ಯವಸ್ಥೆ ಮಾಡಿಲ್ಲ, ಸಿಬ್ಬಂದಿ ಇಲ್ಲ, ಮಕ್ಕಳು ಶುಚಿಗೊಳಿಸುವಂತಿಲ್ಲ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಅದರಲ್ಲೂ ಆರ್ಥಿಕವಾಗಿ ಬಡತನದ ಮಕ್ಕಳಿಗೆ ಅನಾರೋಗ್ಯ ಉಂಟಾದರೆ ಚಿಕಿತ್ಸೆಗೂ ಕಷ್ಟ, ಶಾಲೆಯನ್ನೇ ಬಿಡುವ ಅಪಾಯವೂ ಇದೆ. ಆದ್ದರಿಂದ ಸರ್ಕಾರಿ ಶಾಲೆಗಳ ಶೌಚಾಲಯ ಶುಚಿಗೊಳಿಸುವ ಮೂಲಕ ಶಾಲೆಗಳಲ್ಲಿ ಸ್ವಚ್ಛತೆಯ ಪಾಠಕ್ಕೆ ಮುಂದಾಗಿದ್ದೇವೆ. ಮಕ್ಕಳಿಗೆ ಸ್ವಚ್ಛತೆಯ ಅರಿವು ಉಂಟಾದರೆ ಜೀವನದಲ್ಲಿ ಅನುಸರಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಶ್ರೀನಿವಾಸ ರುಕ್ಮಿಣಿ ಫೌಂಡೇಶನ್ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೆ ಒತ್ತುವರಿ ಆರೋಪ: ತುರ್ತು ಕ್ರಮಕ್ಕೆ ಸೂಚನೆ
ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ: ಮಂಜುಳಾ ಆರೋಪ