ಲಿಂಗ, ವರ್ಗ, ವರ್ಣ ಭೇದವಿಲ್ಲದ ಬಸವಾದಿ ಶರಣರ ವಚನ ಸಾಹಿತ್ಯ, ಮನೆ ಮತ್ತು ಮನ ಪರಿವರ್ತನೆಗೆ ಮನೆ ಮದ್ದಾಗಿದೆ. ವಚನ ಸಾಹಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬಾಳಿದರೆ ಬದುಕು ಪಾವನ.
ಯಲಬುರ್ಗಾ:
ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ, ಯುವಘಟಕ ಹಾಗೂ ಅಕ್ಕನಾಗಲಾಂಬಿಕೆ ಮಹಿಳಾ ಗಣದಿಂದ ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತ ಹಮ್ಮಿಕೊಂಡಿರುವ ಮನೆಯಿಂದ ಮನೆಗೆ ವಚನ ಜ್ಯೋತಿ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಸಂಜೆ ವೇಳೆ ವಿಶ್ವಗುರು ಬಸವ ಮಂಟಪದಿಂದ ಶರಣ ಮಂಜುನಾಥ ಮಂತ್ರಿ ಇವರ ಮನೆಗೆ ಗುರು ಬಸವ ಸ್ತೋತ್ರ ಪಠಣ ಮಾಡುತ್ತಾ, ವಚನ ಕಟ್ಟು ಹಾಗೂ ಬಸವೇಶ್ವರ ಭಾವಚಿತ್ರ ಮತ್ತು ಜ್ಯೋತಿ ಹೊತ್ತು ಬರಲಾಯಿತು.
ವನಜಭಾವಿಯ ರಾಷ್ಟ್ರೀಯ ಬಸವದಳ ಗೌರವಾಧ್ಯಕ್ಷ ದೇವಪ್ಪ ಕೋಳೂರು ಮಾತನಾಡಿ, ವರ್ಷಕ್ಕೊಮ್ಮೆ ಬರುವ ಶ್ರಾವಣ ಮಾಸ ಶಿವನನ್ನು ಒಲಿಸಿಕೊಳ್ಳುವ, ಸಂಸ್ಕೃತಿ ಕಲಿಯುವ ಮಾಸವಾಗಿದೆ. ಬಸವಪರ ಸಂಘಟಕರು ಮಾಡುವ ಕಾರ್ಯ ಶ್ಲಾಘನೀಯ. ಲಿಂಗ, ವರ್ಗ, ವರ್ಣ ಭೇದವಿಲ್ಲದ ಬಸವಾದಿ ಶರಣರ ವಚನ ಸಾಹಿತ್ಯ, ಮನೆ ಮತ್ತು ಮನ ಪರಿವರ್ತನೆಗೆ ಮನೆ ಮದ್ದಾಗಿದೆ. ವಚನ ಸಾಹಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬಾಳಿದರೆ ಬದುಕು ಪಾವನರಾಗುತ್ತೇವೆ ಎಂದರು.
ರಾಷ್ಟ್ರೀಯ ಬಸವದಳ ಉಪಾಧ್ಯಕ್ಷ ಶರಣಪ್ಪ ಹೊಸಳ್ಳಿ ಹಾಗೂ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ಬಸವಾದಿ ಶರಣರ ಸಂಸ್ಕಾರ, ಸಂಸ್ಕೃತಿಯನ್ನು ಜನ ಮನಕ್ಕೆ ಮುಟ್ಟಿಸುವ ಕಾರ್ಯವೇ ಈ ಕಾರ್ಯಕ್ರಮದ ಉದ್ದೇಶ ಆಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.