- ಚುನಾವಣಾ ಆಯೋಗ, ಬಿಜೆಪಿ ತಿಳಿಸಬೇಕು । ಮತಗಳ್ಳತನ ವಿರುದ್ಧ ರಾಹುಲ್ ಹೋರಾಟಕ್ಕೆ ಯುವ ಕಾಂಗ್ರೆಸ್ ನಿಂದ ಸಹಿ ಸಂಗ್ರಹ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ2014 ರಲ್ಲಿ ಮೋದಿ, ಅಮಿತ್ ಷಾ ಅಧಿಕಾರಕ್ಕೆ ಬಂದ ಮೇಲೆ 13 ಕೋಟಿ ಹೊಸ ಮತದಾರರು ಮತ ಚಲಾಯಿಸಿದ್ದು ಇದು ಹೇಗೆ ? ಎಂಬುದನ್ನು ಚುನಾವಣಾ ಆಯೋಗ ಅಥವಾ ಬಿಜೆಪಿ ಮುಖಂಡರು ಉತ್ತರಿಸಬೇಕು ಎಂದು ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಅರಗಿ ಅಗ್ರಹಿಸಿದರು.
ಬುಧವಾರ ಸಂಜೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರಮೋದಿ ಹುಟ್ಟುಹಬ್ಬವನ್ನು ನಿರುದ್ಯೋಗ ದಿನಾಚರಣೆ ಹಾಗೂ ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದರು.ಭಾರತದ ಇತಿಹಾಸದಲ್ಲಿ ಚುನಾವಣೆ ಪ್ರಾರಂಭವಾದ ನಂತರ 2009 ರವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಐದು ವರ್ಷ ಕ್ಕೊಮ್ಮೆ ಹೊಸ ಮತದಾರರು ಕನಿಷ್ಠ 1.50 ಕೋಟಿಯಿಂದ ಗರಿಷ್ಠ 3 ಕೋಟಿವರೆಗೆ ಮಾತ್ರ ಏರಿಕೆಯಾಗಿತ್ತು. 1989 ರ ಚುನಾವಣೆಯಲ್ಲಿ 6 ಕೋಟಿ ಹೊಸ ಮತದಾರರು ಮತ ಚಲಾಯಿಸಿದ್ದರು. ಇದಕ್ಕೆ ಕಾರಣ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ್ದು. ಅದು ಬಿಟ್ಟರೆ 2014ರ ಚುನಾವಣೆಯಲ್ಲಿ ನರೇಂದ್ರಮೋದಿ ಹಾಗೂ ಅಮಿತ್ ಷಾ ಅಧಿಕಾರಕ್ಕೆ ಬಂದ ನಂತರ ಏಕಾಏಕಿ 13 ಕೋಟಿ ಹೊಸ ಮತದಾರರು ಮತ ಚಲಾಯಿಸುತ್ತಾರೆ. 2014 ರಲ್ಲಿ ಬಿಜೆಪಿ 17 ಕೋಟಿ,17 ಸಾವಿರ ಮತ ಪಡೆದಿದೆ. ಇದು ಅನುಮಾನಾಸ್ಪದವಾಗಿದೆ ಎಂದು ರಾಹುಲ್ ಗಾಂಧಿ ದ್ವನಿ ಎತ್ತಿದ್ದಾರೆ ಎಂದರು. 2014 ರಿಂದಲೇ ಮತಗಳ್ಳತನ ಮಾಡುತ್ತಾ ಬಂದಿರುವುದು ಇದರಿಂದಲೇ ತಿಳಿಯುತ್ತದೆ.1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೇಶದಾದ್ಯಂತ 1 ಕೋಟಿ 82 ಲಕ್ಷ ಮತ ಪಡೆದಿತ್ತು . ಅಲ್ಲಿಂದ 25 ವರ್ಷಗಳ ನಂತರ ಅಂದರೆ 2009ರಲ್ಲಿ ಬಿಜೆಪಿ ಪಡೆದಿದ್ದು 7 ಕೋಟಿ 84 ಲಕ್ಷ ಮಾತ್ರ. ಅಂದರೆ ಈ 25 ವರ್ಷದಲ್ಲಿ 6 ಕೋಟಿ ಎರಡು ಲಕ್ಷ ಮತದಾರರನ್ನು ಮಾತ್ರ ಹೆಚ್ಚಿಸಿಕೊಂಡಿತ್ತು. ಈ ಮತಗಳ ಲೆಕ್ಕಾಚಾರದಿಂದಲೇ ರಾಹುಲ್ ಗಾಂದಿ ಇವಿಎಂ ಮೂಲಕ ಮತಗಳ್ಳತನ ವಿರುದ್ಧ ಲೋಕಸಭೆಯಲ್ಲಿಯೇ ಧ್ವನಿ ಎತ್ತಿದ್ದಾರೆ. ಬಿಜೆಪಿಯವರು ಅವರು ಹಿಂಬಾಗಿಲಿನಿಂದ ಬಂದು ರಾಜಕಾರಣ ಮಾಡುತ್ತಿ ದ್ದಾರೆ ಎಂದು ದೂರಿದರು.
2004, 2009 ರಲ್ಲಿ ಉತ್ತರಪ್ರದೇಶದ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 10 ಸ್ಥಾನ ಪಡೆದಿತ್ತು. 2014 ರಲ್ಲಿ ಅಮಿತ್ ಷಾ ಅಧಿಕಾರಕ್ಕೆ ಬಂದ ಮೇಲೆ ಅಲ್ಲಿ 70 ಸ್ಥಾನವನ್ನು ಬಿಜೆಪಿ ಗೆದ್ದಿದೆ. ನಕಲಿ ವಿಳಾಸ, ವಿಳಾಸ ಇಲ್ಲದವರು ಮತ ನೀಡಿದ್ದಾರೆ ಎಂಬುದು ಕಾಂಗ್ರೆಸ್ ಅನುಮಾನವಾಗಿದೆ ಎಂದರು.ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಮಾತನಾಡಿ, ಮೋದಿಯವರು ಚುನಾವಣೆಯಲ್ಲಿ ಗೆದ್ದರೆ ಯುವಕರಿಗೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದ್ದು ಸುಳ್ಳಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದರಿಂದ ಇಂದು ಕರಾಳ ದಿನ. ಆದ್ದರಿಂದ ಮೋದಿಯವರ ಜನ್ಮ ದಿನಾಚರಣೆಯನ್ನು ಯುವ ಕಾಂಗ್ರೆಸ್ ನಿರುದ್ಯೋಗ ದಿನಾಚರಣೆ ಎಂದು ಆಚರಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಜಿತ್ ಗೌಡ, ಅಭಿಲಾಷ್, ಮಹಮ್ಮದ್ ಕೈದ್, ಮಹಮ್ಮದ್ ಇಲಿಯಾಸ್, ಗೌತಮ್, ನಂದೀಶ, ದೇವರಾಜ್, ನಿತಿನ್, ವಿಜಯ ,ಮಂಜು ಇದ್ದರು.