ಬಡವರು, ನಿರ್ಗತಿಕರು ನಿವೇಶನಕ್ಕಾಗಿ ಕಾಯುತ್ತಿರುವ ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆ
ಕನ್ನಡಪ್ರಭ ವಾರ್ತೆ, ಬೀರೂರು
ಬಡವರ ಪರ ಕಾಳಜಿ ವಹಿಸಿ ಎಲ್ಲಾ ಸೌಲಭ್ಯ ಕಲ್ಪಿಸುವ ಕನಸಿನ ಆಶಾ ಗೋಪುರ ಕಟ್ಟಿ ಮತಗಳಿಸಿ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಜನಪ್ರತಿನಿಧಿಗಳಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸುವ ಇರಾದೆ ಇಲ್ಲದಿರುವುದಕ್ಕೆ ನಿದರ್ಶನವೆಂಬಂತಿದೆ ಈ ಎಸ್.ಆರ್.ಲಕ್ಷ್ಮಯ್ಯ ಬಡಾವಣೆ.ಬೀರೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಈ ಆಶ್ರಯ ಬಡಾವಣೆ, ಶಾಸಕರಾಗಿದ್ದ ದಿ.ಎಸ್.ಆರ್.ಲಕ್ಷ್ಮಯ್ಯ ಅವರ ಹೆಸರಿನಲ್ಲಿ ಶಾಸಕರಾಗಿದ್ದ ಪುತ್ರ ಧಮ್ಮೇಗೌಡ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಕಡು ಬಡವರಿಗೆ 15 ವರ್ಷಗಳ ಹಿಂದೆಯೇ 500 ಕ್ಕೂ ಹೆಚ್ಚಿನ ನಿವೇಶನಗಳು ನಾನಾ ಕಾರಣಗಳಿಗೆ ಬಳ್ಳಾರಿ ಜಾಲಿ ಬಡಾವಣೆ ಯಾಗಿ ರೂಪುಗೊಂಡಿದ್ದು ಜಾಲಿ ಕಡಿಯಲು ಟೆಂಡರ್ ಕರೆಯಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವೇ ಸರಿ.
ಆರಂಭದಲ್ಲಿ 15ಎಕರೆ ವಿಸ್ತೀರ್ಣ ವಿದ್ದ ಈ ಬಡಾವಣೆ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಹಾದುಹೋದ ಪರಿಣಾಮ 9ಎಕರೆ3ಗುಂಟೆ ಮಾತ್ರ ಉಳಿದು ಅದರಲ್ಲೂ ಮೂರು ಭಾಗವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಬಡಾವಣೆಗೆ ಪುರಸಭೆ ಸ್ವಚ್ಛತೆ ನಿರ್ವಹಿಸದ ಹಿನ್ನಲೆಯಲ್ಲಿ ಮನೆ ಕೆಡವಿದ ಕಸ, ಹಾಸಿಗೆ ಬಟ್ಟೆ ಗಳು ಸೇರಿದಂತೆ ಮಧ್ಯಪ್ರಿಯರ ಕುಡಿತದ ಖಾಲಿ ಬಾಟಲಿ ಗಳನ್ನು ಈ ಆಶ್ರಯ ನಿವೇಶನದಲ್ಲಿ ತುಂಬಿಸಿದ್ದು ಇದು ಬೀರೂರು ಅಡಕೆ ನಾಡಿನ ಪ್ರವಾಸಿಗರಿಗೆ ಬಳ್ಳಾರಿ ಜಾಲಿ ಜೊತೆ ತ್ಯಾಜ್ಯ ಸಹ ಸ್ವಾಗತಿಸುತ್ತಿವೆ.
ಇನ್ನಾದರೂ ಕಳೆದ ಅನೇಕ ವರ್ಷಗಳಿಂದ ಈ ಬಡಾವಣೆಯಲ್ಲೆ ಸೂರು ದೊರಕಿ ಸ್ವಂತ ಮನೆ ನಿರ್ಮಾಣ ಮಾಡಿ ಕೊಳ್ಳು ವುದೊ, ಅಥವಾ ಸರ್ಕಾರವೇ ಮನೆಕಟ್ಟಿಸಿಕೊಟ್ಟು ಬಡವರಿಗೆ ಸೂರು ಕಲ್ಪಿಸುವುದೋ ಶಾಸಕ ಆನಂದ್ರ ಶೀಘ್ರ ಆಶ್ರಯ ನಿವೇಶನಕ್ಕೆ ಇತಿಶ್ರೀ ಹಾಡಿ ನಿವೇಶನ ನೀಡುತ್ತಾರೆಂಬ ಆಶಾಭಾವನೆಯಲ್ಲಿ ಕಾಯುತ್ತಿದ್ದಾರೆ.
ಪುರಸಭೆಗೆ ಅರ್ಜಿ ನೀಡಿ ಅನೇಕ ವರ್ಷ ಕಳೆದರೂ ನಿವೇಶನ ನೀಡಿಲ್ಲ, 15 ವರ್ಷಗಳಿಂದ ನಾವು ಬಾಡಿಗೆ ಮನೆ ಯಲ್ಲಿ ವಾಸಿಸುತ್ತಿದ್ದು, ಬಾಡಿಗೆ ಕಟ್ಟಲು ಆಗುತ್ತಿಲ್ಲ. ಜೊತೆಗೆ ಕುಟುಂಬ ನಿರ್ವಹಣೆ ಕಷ್ಟ. ಶಾಸಕರು ಆದಷ್ಟು ಬೇಗ ಆಶ್ರಯ ಬಡಾವಣೆ ನಿವೇಶನ ನೀಡುತ್ತಾರೆಂಬ ನಂಬಿಕೆ ಇದೆ.
--
- ಬಿ.ಟಿ.ಚಂದ್ರಶೇಖರ್, ಪುರಸಭೆ ಆಶ್ರಯಕಮಿಟಿ ಸದಸ್ಯ.
--ಪುರಸಭೆ ಆಶ್ರಯ ಬಡಾವಣೆ ನಿವೇಶನವನ್ನು ಸ್ವಚ್ಚವಾಗಿಟ್ಟುಕೊಂಡಿದ್ದರೆ ಸಾರ್ವಜನಿಕರು ಯಾಕೆ ಇಲ್ಲಿಗೆ ಕಸ ತಂದು ಸುರಿಯುತ್ತಾರೆ. ಇದು ಪುರಸಭೆ ನಿರ್ಲಕ್ಷ್ಯ ತೋರಿಸುತ್ತದೆ. ಖಾಸಗಿ ಲೇಔಟ್ ಮಾದರಿಯಲ್ಲಿ ಇದ್ದಿದ್ದರೆ ಯಾರು ಸುರಿಯು ವುದಿಲ್ಲ. ಶಾಸಕ ಆನಂದ್ ರವರ ಕನಸು ಸಹ ಈ ಆಶ್ರಯ ಬಡಾವಣೆಗೆ ಮುಕ್ತಿ ನೀಡಿ ಸಾರ್ವಜನಿಕರಿಗೆ ಒಳಿತು ಮಾಡುವ ಉದ್ದೇಶವಿದೆ.
-ಬಿ.ಎನ್.ಮಲ್ಲಿಕಾರ್ಜುನ್.ತಾಲೂಕು ಮಾದಾರ ಮಹಾಸಭಾ ಅಧ್ಯಕ್ಷ.
24 ಬೀರೂರು1ಬೀರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆಯಲ್ಲಿ ಬಳ್ಳಾರಿ ಜಾಲಿ ಬೆಳೆದು ನಿಂತಿರುವುದು.
24 ಬೀರೂರು 2ಪಟ್ಟಣದ ಕಸವನ್ನೆಲ್ಲ ನಾಗರಿಕರು ಈ ಬಡಾವಣೆ ಜಾಗದಲ್ಲೇ ಸುರಿದಿರುವುದು.