ಬಂಗಾರಪೇಟೆ: ಟಿಪ್ಪರ್ ಲಾರಿಗಳ ಹಾವಳಿಯ ಧೂಳಿನಿಂದ ನಷ್ಟವಾಗಿರುವ ರೈತರ ಬೆಳೆಗಳಿಗೆ ಪರಿಹಾರ ನೀಡಲು ನಿರಾಕರಿಸುತ್ತಿರುವ ಡಿಬಿಎಲ್ ಗುತ್ತಿಗೆದಾರರ ಕ್ಯಾಂಪಸ್ ಗೇಟ್ನ್ನು ನಷ್ಟವಾದ ಬೆಳೆ ಸಮೇತ ಬಂದ್ ಮಾಡಿ ಪರಿಹಾರ ವಿತರಿಸುವಂತೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆಯ ಬಿಸಿ ಮುಟ್ಟಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಶ್ರೀಮಂತರಿಗೆ ಅನುಕೂಲವಾಗುವ ಚೆನ್ನೈ ಕಾರಿಡಾರ್ ರೈತರ ಬೆವರ ಹನಿಯನ್ನು ಕಸಿದು ಸಾಲಗಾರರನ್ನಾಗಿ ಮಾಡುತ್ತಿದೆ. ಜೊತೆಗೆ ಬಂಡವಾಳ ಹಾಕಿ ಬೆಳೆದಿರುವ ರೈತರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಭೂಮಿ ಕೊಟ್ಟ ತಪ್ಪಿಗೆ ರೈತರು ತಮ್ಮ ಜಮೀನುಗಳಿಗೆ ಹಾದು ಹೋಗಲು ೧೦-೧೫ ಕಿಮೀ ಸುತ್ತು ಹಾಕಿಕೊಂಡು ಬರಬೇಕಾದ ಪರಿಸ್ಥಿತಿ ಇದೆ, ವಾರದೊಳಗೆ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡುವ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ಹಿಂಪಡೆದರು.
ಹೋರಾಟದಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ಹರೀಶ್, ರಾಮಪ್ಪ, ಯಲ್ಲಣ್ಣ, ವೆಂಕಟೇಶಪ್ಪ, ವೆಂಕಟಪ್ಪ, ಎಂ.ಎಸ್.ಆನಂದ್ ಇದ್ದರು.