ಡಿಸಿಸಿ ಬ್ಯಾಂಕಿನ ಆಯ್ದ ಸದಸ್ಯರು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ

KannadaprabhaNewsNetwork |  
Published : Jun 13, 2024, 12:45 AM IST
52 | Kannada Prabha

ಸಾರಾಂಶ

ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಿಗೆ ಡಿಸಿಸಿ ಬ್ಯಾಂಕಿನ ಆಯ್ದ ಸದಸ್ಯರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಅದೇ ರೀತಿ ವಿವಿಧ ರಾಜ್ಯದ ಡಿಸಿಸಿ ಬ್ಯಾಂಕ್‌ನ ಆಯ್ದ ಸದಸ್ಯರು, ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಸಹಕಾರ ಸಂಘಕ್ಕೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಬನ್ನೂರು

ವಿವಿಧ ರಾಜ್ಯದ ಡಿಸಿಸಿ ಬ್ಯಾಂಕಿನ ಆಯ್ದ ಸದಸ್ಯರು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದನ ಸಹಕಾರ ಸಂಘಗಳಿಗೆ ಭೇಟಿ ನೀಡಿ ಸಂಘದ ಅಭಿವೃದ್ಧಿಯ ಬಗೆಗೆ ಮಾಹಿತಿ ಪಡೆದರು.

ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡ ವಿವಿಧ ರಾಜ್ಯದ ಡಿಸಿಸಿ ಬ್ಯಾಂಕ್‌ನ ಆಯ್ದ ಸದಸ್ಯರು, ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಸಹಕಾರ ಸಂಘಕ್ಕೆ ಭೇಟಿ ನೀಡಿದರು.

ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಅವರನ್ನು ಬರಮಾಡಿಕೊಂಡು ಸದಸ್ಯರಿಗೆ ಸಹಕಾರ ಸಂಘದಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮದ ಬಗೆಗೆ ಮಾಹಿತಿ ನೀಡಿದರು.

ಯಾಚೇನಹಳ್ಳಿ ಗ್ರಾಮದಲ್ಲಿ 2009ರಲ್ಲಿ ಆರಂಭಿಸಲಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭದ ಆದಾಯ 50 ಸಾವಿರಕ್ಕೆ ಸೀಮಿತವಾಗಿದ್ದು, ಇಂದು ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳಿಂದ ಕೋಟಿ ವಹಿವಾಟನ್ನು ಕಾಣುವಂತಾಗಿದೆ ಎಂದರು.

ಸಹಕಾರ ಸಂಘದಲ್ಲಿ ಪ್ರತಿಯೊಬ್ಬ ಸಹಕಾರಿಗಳ ಪಾತ್ರವು ಅತ್ಯಂತ ಪ್ರಮುಖವಾಗಿದ್ದು, ಗ್ರಾಮದ ಪ್ರತಿಯೊಬ್ಬ ಜನರ ಸಹಕಾರದಿಂದ ಇಂದು ಉತ್ತಮ ಸಾಧನೆಯತ್ತ ಸಂಘವು ಹೆಜ್ಜೆಯನ್ನಿಟ್ಟಿದೆ ಎಂದು ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರ ಮಾರಾಟ, ನಂದಿನಿ ಮಳಿಗೆ, ಸೌರ ವಿದ್ಯುತ್ ಮಾರಾಟ, ಅಂತ್ಯ ಸಂಸ್ಕಾರದ ವಾಹನ, ಕುಡಿಯುವ ಶುದ್ಧನೀರಿನ ಪೂರೈಕೆ, ಪಶುಆಹಾರಗಳ ಮಾರಾಟ, ರಿಯಾಯಿತಿ ದರದಲ್ಲಿ ದಿನಬಳಕೆಯ ವಸ್ತುಗಳ ಮಾರಾಟ ಮಾಡುವ ಕೇಂದ್ರ, ಜನೌಷಧ ಕೇಂದ್ರ ಹೀಗೆ ಹಂತ ಹಂತವಾಗಿ ವಿವಿಧ ಮಳಿಗೆಗಳನ್ನು ಆರಂಭಿಸಿ ಇದೀಗ ಪ್ರತಿಯೊಂದರಿಂದಲೂ ಉತ್ತಮ ಆದಾಯದೊರೆಯುತ್ತಿದೆ ಎಂದರು.

ತಾಲೂಕಿನಲ್ಲಿ ಯಾಚೇನಹಳ್ಳಿ ಗ್ರಾಮ ಅಧಿಕ ಪಶುಗಳನ್ನು ಸಾಕುವ ಗ್ರಾಮವಾಗಿದ್ದು, ಇಲ್ಲಿ ನಿತ್ಯ ಹಾಲು ಹಾಕುವವರ ಸಂಖ್ಯೆ ಅಧಿಕವಾಗಿದೆ ಎಂದರು. ಹಾಲಿನ ಪೂರೈಕೆದಾರರಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, 10 ದಿನಗಳಲ್ಲಿಯೇ ಹಾಲಿನ ದರವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎನ್ನುವ ವಿಷಯವನ್ನು ತಿಳಿಸಿದರು.

ನಬಾರ್ಡ್ನಿಂದ ಸಾಲವನ್ನು ಪಡೆದು ಸಾಲವನ್ನು ಮರುಪಾವತಿ ಮಾಡುತ್ತಿರುವುದರಿಂದ ಅವರ ಸಹಕಾರ ಗ್ರಾಮಕ್ಕೆ ಬಹಳಷ್ಟು ದೊರೆಯುತ್ತಿದೆ ಎಂದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಾಲವನ್ನು ಪಡೆಯುವ ಸದಸ್ಯರು ಮರುಪಾವತಿಯಲ್ಲೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದು ಸಂಘದ ಅಭಿವೃದ್ಧಿಗೆ ಪ್ರಮುಖ ಕಾರಣ ಎಂದರು.

ನಬಾರ್ಡ್ ವತಿಯಿಂದ ಭೇಟಿ ನೀಡಿದ ಪ್ರಾದೇಶಿಕ ನಿರ್ದೇಶಕ ನಿಖಿಲ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ವೈ.ಎಂ. ಮಲ್ಲೇಶ್, ವೈ.ಕೆ. ಬೋರೇಗೌಡ, ನಾಗೇಂದ್ರ, ಕಾರ್ಯನಿರ್ವಹಣಾ ಅಧಿಕಾರಿ ವೈ.ಕೆ. ಕ್ಯಾತೇಗೌಡ, ಡಿಸಿಸಿ ಬ್ಯಾಂಕಿನ ನವನೀತ್, ರಾಜಪ್ಪ, ಅಶೋಕ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ