ಕನ್ನಡಪ್ರಭ ವಾರ್ತೆ ಬೆಳಗಾವಿ
ಗಡಿನಾಡ ಬೆಳಗಾವಿ ನಮ್ಮ ಕನ್ನಡಿಗರ ಬಲು ದೊಡ್ಡ ಅಸ್ಮಿತೆ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.ಪಟ್ಟಣದ ರಾಮತೀರ್ಥ ನಗರದ ಕೆಪಿಎಸ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಜರುಗಿದ ಕೆ.ಎಸ್.ನರಸಿಂಹಸ್ವಾಮಿ ಮಕ್ಕಳ ಮನದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿ ಗಂಡು ಮೆಟ್ಟಿನ ನಾಡು. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ, ಪರಿಸರ ಉಳಿವಿಗಾಗಿ ಅರಿವು, ಜಾಗೃತಿ ಮೂಡಿದರೇ ಭವಿಷ್ಯದಲ್ಲಿ ಬಲು ದೊಡ್ಡ ತಿರುವು ಆಗಲಿದೆ ಎಂದರು.ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿಯುವುದು ಕನ್ನಡ ಶಾಲೆಯಲ್ಲಿ. ಗಡಿ ನಾಡಲ್ಲಿ ನಮ್ಮ ಭಾಷೆ ಉಳಿಯಬೇಕು. ಕವಿಗಳ, ಸಾಹಿತಿಗಳ ಕಿರು ಪರಿಚಯವಾದರೇ ಭಾಷೆ ಗಟ್ಟಿಯಾಗಿ ಉಳಿಯಲಿದೆ. ಮಾತೃಭಾಷೆ ತುತ್ತು ಕೊಡುವ ತೊದಲು ಸುಂದರ ಭಾಷೆ ನಮ್ಮದು. ನಮ್ಮಲ್ಲಿನ ಅನ್ಯ ಭಾಷಿಕರಿಗೆ ಪ್ರೀತಿಯಿಂದ ನಮ್ಮ ಭಾಷೆ ಕಲಿಸಲು ಸುಂದರ ಪರಿಸರ ಸೃಷ್ಟಿಸುವ ಎಂದು ತಿಳಿಸಿದರು.ಬೇಸಿಗೆಯಲ್ಲಿ ಹನಿ ನೀರಿಗೂ ತತ್ವರ ಉಂಟಾಗಿದೆ. ಗಿಡ ಮರ ಉಳಿಸಿ. ರಸ್ತೆ ಬದಿಯಲ್ಲಿ ತಮ್ಮ ಅಜ್ಜ, ಅಜ್ಜಿ, ತಂದೆ, ತಾಯಿ ಹೆಸರಿನಲ್ಲಿ ಗಿಡ ನೆಡಿ, ಹೆಮ್ಮರವಾಗಿ ಬೆಳೆಸಿ, ಇದು ನಿಮ್ಮ ಹಿರಿಯರಿಗೆ, ಪ್ರಕೃತಿ ಮಾತೆಗೆ ಕೊಡುವ ದೊಡ್ಡ ಕಾಣಿಕೆ. ಪ್ರತಿ ಶಾಲೆ, ಕಾರ್ಯಕ್ರಮದಲ್ಲಿ ಗಿಡ ನೆಡುವ ಪ್ರತಿಜ್ಞೆ ಮಾಡಿರುವೆ. ಇದೇ ರೀತಿ ತಮ್ಮ ಸುಂದರ ಘಳಿಗೆ ನೆನಪಿಗೆ ಗಿಡ ನೆಟ್ಟು ಪೋಷಿಸಿ ಎಂದು ವಿನಂತಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಸಂಗೀತಕ್ಕೆ ಭಾಷೆ, ಗಡಿ ಅಂದರ ಇಲ್ಲ. ಎಲ್ಲರ ಮನ ಗಟ್ಟಿಗೊಳಿಸಲು ಸುಗಮ ಸಂಗೀತಾ ಕಲಿಯಲು ಮುಂದಾಗಿ ಎಂದು ತಿಳಿಸಿದರು.ಶಾಲಾ ಆವರಣದಲ್ಲಿ ಗಿಡ ನೆಟ್ಟು ನೀರೆರೆದು ಪರಿಸರ ಉಳಿಸುವುದಾಗಿ ಮಕ್ಕಳು ಪ್ರತಿಜ್ಞೆ ಗಣ್ಯರೊಂದಿಗೆ ಮಾಡಿದರು.
ಗಾಯಕ ಕಿಕ್ಕೇರಿ ಮಕ್ಕಳಿಗೆ ಹತ್ತಾರು ಪರಿಸರ ಗೀತೆ, ಕೆಎಸ್ ನ ಗೀತೆ ಹೇಳಿಕೊಟ್ಟು ಹಾಡಿಸಿ ಪರೀಕ್ಷೆ ವೇಳೆಯಲ್ಲಿ ಮಕ್ಕಳಿಗೆ ಮುದ ನೀಡುವಂತೆ ಟಾನಿಕ್ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಡಾ.ಬಸವರಾಜು ಕಟ್ಟಿಮನಿ ಪ್ರತಿಷ್ಠಾನ ಅಧ್ಯಕ್ಷ ಡಾ.ಎಲ್ಲಪ್ಪ ಇಮ್ಮಡಿ, ಕೆಎಸ್ ನ ಟ್ರಸ್ಟಿ ನಗರ ಶ್ರೀನಿವಾಸ ಉಡುಪ, ಮಾದಾಪುರ ಸುಬ್ಬಣ್ಣ, ಕೆ.ವಿ.ಬಲರಾಮು, ಮುಖ್ಯ ಶಿಕ್ಷಕ ರಾಜಶೇಖರ ಚಳಗೇರಿ, ಬೆಳವಂಕಿ ಮತ್ತಿತರರಿದ್ದರು.