ರಾಮದುರ್ಗ: ಜಲ್ಲಿ ಕಲ್ಲು ತುಂಬಿದ್ದ ಟಿಪ್ಪರ್‌ಗೆ ಆಕಸ್ಮಿಕ ಹೊತ್ತಿಕೊಂಡ ಪರಿಣಾಮ ವಾಹನ ಭಾಗಶಃ ಸುಟ್ಟು ಕರಕಲಾದ ಘಟನೆ ಮುದಕವಿ ಸಮೀಪದ ಇಳಿಜಾರಿನಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಬದಾಮಿ ಮೂಲದ ಸುರೇಶ ಬರಮಗೌಡ ಪಾಟೀಲ ಎಂಬುವರಿಗೆ ಟಿಪ್ಪರ್‌ ಇದಾಗಿದ್ದು, ಬದಾಮಿ ತಾಲೂಕಿನ ನರನೂರಿನಿಂದ ಜಲ್ಲಿ ಕಲ್ಲು ತುಂಬಿಕೊಂಡು ರಾಮದುರ್ಗ ತಾಲೂಕಿನ ಇಡಗಲ್‌ ಗ್ರಾಮಕ್ಕೆ ಬರುತ್ತಿತ್ತು. ಈ ವೇಳೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎನ್ನಲಾಗಿದೆ. ಬಳಿಕ, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಮಲ್ಲಪ್ಪ ಕವಡಿ, ವೆಂಕಟೇಶ ಕಾಡರ, ಚಾಲಕ ಮಹ್ಮದಾರಿಪ್ ಫಿರಜಾದೆ, ಪ್ರಕಾಶ ಮೇಟಿ, ವಿನೋದ ಮುರಗೋಡ, ಆನಂದ ಬಂಡಿವಡ್ಡರ, ಶಂಕರ ಲಮಾಣಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಬಗ್ಗೆ ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಸವಿತಾ ಮುನ್ಯಾಳ ತನಿಖೆ ನಡೆಸಿದ್ದಾರೆ.