ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವದ ಪ್ರಜಾಪ್ರಭುತ್ವದ ಸ್ಥಿತಿಗತಿ ಪರಿಶೀಲಿಸಲು ಹಾಗೂ ಜಾಗತಿಕವಾಗಿ ಪ್ರಜಾಪ್ರಭುತ್ವದ ತತ್ವ ಉತ್ತೇಜಿಸುವ ಉದ್ದೇಶದಿಂದ ಸೆ.1ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಸೆ.15ರಂದು ಜಿಲ್ಲೆಯಲ್ಲಿ ಬೃಹತ್ ಮಾನವ ಸರಪಳಿ ಹಾಗೂ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡು ಬೀದರ್ನಿಂದ ಚಾಮರಾಜನಗರವರೆಗೆ ಬೃಹತ್ ಮಾನವ ಸರಪಳಿ ರಚಿಸಲು ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದ್ದು, ಅದರ ಅಂಗವಾಗಿ ಜಿಲ್ಲೆಯ ಸುಮಾರು 20 ಆಯ್ದ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.ಅಂದು ಬೆಳಗ್ಗೆ 9.30ಕ್ಕೆ ಕಾರೇಹಳ್ಳಿಯಿಂದ ಮಡಿಕೆ ಚೀಲೂರುವರೆಗೆ 60ಕಿ.ಮೀ.ಮಾನವ ಸರಪಳಿ ರಚಿಸಲಾಗುವುದು, ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳುವರು. ಬೆಳಗ್ಗೆ 10ಗಂಟೆಗೆ ಸರಿಯಾಗಿ ಮಾನವ ಸರಪಳಿಯಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಜೈಹಿಂದ್, ಜೈ ಕರ್ನಾಟಕ ಘೋಷಣೆ ಕೂಗುವ ಮೂಲಕ ಸರಪಳಿ ಕಳಚಿ ಸಂಪನ್ನಗೊಳಿಸಲಾಗುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಮತ್ತು ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು, ಸರ್ಕಾರಿ ನೌಕರರು, ಸ್ಥಳೀಯ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಭಾಗವಹಿಸುವರು ಎಂದು ತಿಳಿಸಿದರು.
ಕಾರ್ಯಕ್ರಮ ನಡೆಯುವ ಅಲ್ಪ ಅವಧಿಯಲ್ಲಿ ಮಾನವ ಸರಪಳಿ ನಿರ್ಮಿಸುವ ಸ್ಥಳಗಳಲ್ಲಿ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಸುರಕ್ಷತಾ ಕ್ರಮ ಅನುಸರಿಸಲಾಗುತ್ತಿದೆ. ಅಗತ್ಯವಿರುವಲ್ಲಿ ಲಘು ಉಪಹಾರ ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸಲು ಸೂಚಿಸಲಾಗಿದೆ. ಕಾರ್ಯಕ್ರಮಗಳು ನಡೆಯುವ ಎಲ್ಲಾ 20ಸ್ಥಳಗಳಲ್ಲಿಯೂ ಸ್ಥಳೀಯ ಕಲಾತಂಡಗಳು, ಸಾರ್ವಜನಿಕರು ಭಾಗವಹಿಸಿ, ಗಿಡನೆಡುವ ಮೂಲಕ ಪರಿಸರ ಕಾಳಜಿ ಪ್ರದರ್ಶಿಸಲಿದ್ದಾರೆ ಎಂದು ಹೇಳಿದರು.
ಬೃಹತ್ ಮಾನವ ಸರಪಳಿ- ಆರಂಭ, ಅಂತ್ಯಈ ಮಾನವ ಸರಪಳಿಯು ಜಿಲ್ಲೆಯ ಭದ್ರಾವತಿ ತಾಲೂಕಿನ ಕಾರೇಹಳ್ಳಿಯಿಂದ ಆರಂಭಗೊಂಡು ಕೆಂಪೇಗೌಡ ನಗರ, ಬಾರಂದೂರು, ಮೊಸರಹಳ್ಳಿ, ಸುಣ್ಣದಹಳ್ಳಿ, ಮಾರುತಿನಗರ, ಭದ್ರಾವತಿ ಬಸ್ನಿಲ್ದಾಣ, ಹುತ್ತಾಕಾಲೋನಿ, ಐಟಿಐ ಸ್ಟಾಪ್, ಕಡದಕಟ್ಟೆ, ಬಿಳಿಕಿಕ್ರಾಸ್, ಜೇಡಿಕಟ್ಟೆ, ಮಾಚೇನಹಳ್ಳಿ ಡೈರಿ, ಮಾಚೇನಹಳ್ಳಿ ಕ್ಯಾನ್ಸರ್ ಆಸ್ಪತ್ರೆ, ನಿಧಿಗೆ, ಮಲವಗೊಪ್ಪ, ಹರಿಗೆ, ಎಂ.ಆರ್.ಎಸ್.ಸರ್ಕಲ್, ವಾಲ್ಮೀಕಿ ಸರ್ಕಲ್(ತುಂಗಾಸೇತುವೆ), ಹೊಳೆಬಸ್ ಸ್ಟಾಪ್, ಕರ್ನಾಟಕ ಸಂಘ, ವೀರಮದಕರಿ ವೃತ್ತ, ಅಮೀರ್ ಅಹ್ಮದ್ ಸರ್ಕಲ್, ನೆಹರೂ ರಸ್ತೆ, ಗೋಪಿ ಸರ್ಕಲ್, ಮಹಾವೀರ ಸರ್ಕಲ್, ಜಿಲ್ಲಾಧಿಕಾರಿಗಳ ಕಚೇರಿ, ಕೆ.ಇ.ಬಿ.ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಗೋಂದಿ ಚಟ್ನಳ್ಳಿ, ಮೇಲಿನ ಹನಸವಾಡಿ, ಬೇಡರ ಹೊಸಳ್ಳಿ, ಬುಳ್ಳಾಪುರ, ಸೂಗೂರು, ಹೊಳಲೂರು, ಮಡಿಕೆ ಚೀಲೂರು ಮಾರ್ಗವಾಗಿ ದಾವಣಗೆರೆ ಜಿಲ್ಲೆಗೆ ಸಂಪರ್ಕ ಬೆಸೆಯಲಿದೆ.