ರವಿ ಕಾಂಬಳೆ
ಜಿಡ್ಡುಗಟ್ಟಿದ ಅಧಿಕಾರಿ-ಸಿಬ್ಬಂದಿ ಆಡಳಿತ ವ್ಯವಸ್ಥೆಯಿಂದ ಹುಕ್ಕೇರಿ ತಾಲೂಕು ಪಂಚಾಯಿತಿ ಬಹುತೇಕ ನಿಷ್ಕ್ರಿಯಗೊಂಡ ಸ್ಥಿತಿಯಲ್ಲೇ ಸಾಗಿದೆ. ಇಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ದುಡ್ಡಿದ್ದರೂ ಬಳಸುವ ಮನಸ್ಸು ಇಲ್ಲದೆ ಇಡೀ ವ್ಯವಸ್ಥೆಯೇ ಕುಸಿದಿದೆ.
ಗ್ಯಾರಂಟಿ ಯೋಜನೆಗಳ ಹೊಡೆತದಿಂದ ಸೊರಗಿರುವ ತಾಲೂಕು ಪಂಚಾಯಿತಿಗೆ ಇದೀಗ ಕೆಲ ಯೋಜನೆಗಳಲ್ಲಿ ಅಗತ್ಯ ಅನುದಾನವಿದ್ದರೂ ಬಳಸಿಕೊಳ್ಳುವಂಥ ಅಧಿಕಾರಿ-ಸಿಬ್ಬಂದಿ ಬರ ಎದುರಾಗಿದೆ. ಈ ಮೊದಲೇ ಚುನಾಯಿತ ಪ್ರತಿನಿಧಿಗಳಿಲ್ಲದೇ ಗರ ಬಡಿದಂತಿರುವ ತಾಪಂ ಇದ್ದ ಅನುದಾನವನ್ನೂ ಉಪಯೋಗಿಸಿಕೊಳ್ಳದೇ ಅಕ್ಷರಶಃ ಕಳಾಹೀನವಾಗಿದೆ.ತಾಪಂನಲ್ಲಿ ನಿಧಾನವೇ ಪ್ರಧಾನ ಎಂಬ ಪರಿಸ್ಥಿತಿಯಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಆಮೆ ನಡಿಗೆ ಎನ್ನುವ ವಾತಾವರಣವಿದ್ದು ನಿಧಾನವಾಗಿ ಸರ್ಕಾರಕ್ಕೆ ಅಧಿಕಾರಿಗಳನ್ನು ಬಿಳಿಯಾನೆ ಸಾಕಿದ ಅನುಭವವಾಗುತ್ತಿದೆ. ಹಾಗಾಗಿ ಹುಕ್ಕೇರಿ ತಾಲೂಕು ಪಂಚಾಯಿತಿ ಎಂದರೆ ಮೂಗು ಮುರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸಕ್ತ ಆರ್ಥಿಕ ಹಣಕಾಸು ವರ್ಷ ಪೂರ್ಣಗೊಳ್ಳಲು ಕೇವಲ ಮೂರು ತಿಂಗಳು ಬಾಕಿ ಉಳಿದಿದೆ. ಆದರೆ, ತಾಪಂ ಅಧಿಕಾರಿಗಳು ಇನ್ನೂ ಈ ಅನಿರ್ಬಂಧಿತ ಅನುದಾನದ ಕ್ರಿಯಾ ಯೋಜನೆ ರೂಪಿಸುವ ಹಂತದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಈ ಅತ್ಯಲ್ಪ ಅವಧಿಯಲ್ಲಿ ಕಾಮಗಾರಿಗಳನ್ನು ಮುಗಿಸುವುದು ಕಷ್ಟದಾಯಕವಾಗಿದೆ.
ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯಬೇಕು. ಬಳಿಕ ಅಂದಾಜು ಪತ್ರಿಕೆಗಳನ್ನು ಸಿದ್ಧಪಡಿಸಿ ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆದು ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ಪತ್ರ ವಿತರಿಸಬೇಕು. ನಂತರ ಕಾಮಗಾರಿ ಪೂರ್ಣಗೊಳಿಸಿ ಖಜಾನೆಗೆ ಬಿಲ್ ಸಲ್ಲಿಸಬೇಕು. ಇಷ್ಟೆಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿ ವಲಯಕ್ಕೆ ಮೂರು ತಿಂಗಳಲ್ಲಿ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
ತುಕ್ಕು ಹಿಡಿದಂತಿರುವ ಇಲ್ಲಿನ ತಾಲೂಕು ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸವನ್ನು ಸಂಬಂಧಿಸಿದ ಸಚಿವರು, ಶಾಸಕರು ಮತ್ತು ಹಿರಿಯ ಮೇಲಧಿಕಾರಿಗಳು ಮಾಡಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
--- ಕೋಟ್ ---
-ಪ್ರವೀಣ ಕಟ್ಟಿ, ಇಒ ತಾಪಂ