ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಮುಂಬರುವ ಡಿಸೆಂಬರ್ನಲ್ಲಿ ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಸಂಭ್ರಮ ಮಹೋತ್ಸವವನ್ನು ಅತ್ಯಂತ ವಿಧಾಯಕವಾಗಿ ಅಚರಿಸಲಾಗುವುದು ಎಂದರು.
ಹಾವೇರಿ: ನಗರದ ಹುಕ್ಕೇರಿಮಠ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಸಂಭ್ರಮದ ಕಾರ್ಯಾಲಯವನ್ನು ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಉದ್ಘಾಟಿಸಿದರು.ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಮುಂಬರುವ ಡಿಸೆಂಬರ್ನಲ್ಲಿ ನಡೆಯಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಸಂಭ್ರಮ ಮಹೋತ್ಸವವನ್ನು ಅತ್ಯಂತ ವಿಧಾಯಕವಾಗಿ ಅಚರಿಸಲಾಗುವುದು. ಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿಗಳನ್ನು ಆಹ್ವಾನಿಸಲಾಗುವುದು.
ಉಚಿತ ಆರೋಗ್ಯ ಶಿಬಿರ, ಉಚಿತ ಔಷಧ ವಿತರಣೆ, ರಕ್ತದಾನ ಶಿಬಿರ, ಉದ್ಯೋಗ ಮೇಳ ಸೇರಿದಂತೆ ಹಲವಾರು ಕಾರ್ಯಕ್ರಮ ಹಾಕಿಕೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಹಳೆಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಸಹಕಾರ ನೀಡಬೇಕೆಂದು ಕೋರಿದರು.ಬಿಇಒ ಎಂ.ಎಚ್. ಪಾಟೀಲ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳು ಹೆಚ್ಚು ಸವಾಲುಗಳನ್ನು ಎದುರಿಸುತ್ತಿವೆ. ಗುಣಾತ್ಮಕ ಶಿಕ್ಷಣ, ಫಲಿತಾಂಶದ ಸುಧಾರಣೆ ಅವಶ್ಯಕ. ಹುಕ್ಕೇರಿಮಠದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಇಂದಿಗೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದ್ದು, ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು. ಹಿರಿಯ ವಿದ್ಯಾರ್ಥಿ ವೈದ್ಯ ಡಾ. ಬಸವರಾಜ ವೀರಾಪುರ ಮಾತನಾಡಿ, ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಮೂಲ ಸೌಕರ್ಯಗಳನ್ನು ನೀಡಲು ಹಿರಿಯ ವಿದ್ಯಾರ್ಥಿಗಳು ಮುಂದೆ ಬಂದಿದ್ದು, ಶಾಲೆಯ ಆಧುನೀಕರಣಕ್ಕೆ ಶ್ರಮ ವಹಿಸಲಾಗುವುದು ಎಂದರು. ವಿಶ್ರಾಂತ ಮುಖ್ಯೋಪಾಧ್ಯಾಯ ಬಿ. ಬಸವರಾಜ ಮಾತನಾಡಿದರು. ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ ಎಸ್.ಎಸ್. ಮುಷ್ಠಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ವೀರಣ್ಣ ಅಂಗಡಿ, ಸುವರ್ಣ ಸಂಭ್ರಮದ ಅಧ್ಯಕ್ಷ ಮಹೇಶ ಚಿನ್ನಿಕಟ್ಟಿ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕಾರ್ಯದರ್ಶಿ ಜಗದೀಶ ತುಪ್ಪದ, ನಿರಂಜನ ತಾಂಡೂರ, ಅಶೋಕ ಮಾಗನೂರ, ತಮ್ಮಣ್ಣ ಮುದ್ದಿ, ಶಿವರಾಜ ಮರ್ತೂರ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಮಹಾಂತೇಶ ಮಳಿಮಠ, ಅಶೀಕ ಹೇರೂರ, ಆರ್.ಎಸ್. ಮಾಗನೂರ, ಗಣೇಶಪ್ಪ ಹೂಗಾರ, ಶಿವಯೋಗಿ ವಾಲಿಶೆಟ್ಟರ, ಸಿ.ಎಸ್. ಮರಳಿಹಳ್ಳಿ, ವಿ.ವಿ. ಬನ್ನಿಮಟ್ಟಿ, ಪಿ.ಆರ್. ಭಗವಂತಗೌಡರ, ಎಸ್.ಎನ್. ದೊಡ್ಡಗೌಡರ, ಮಂಜುನಾಥ ಕಡತಿ, ಚನ್ನಮ್ಮ ಅಂತರವಳ್ಳಿ ಇತರರು ಇದ್ದರು.ಶಿವಬಸವ ಮರಳಿಹಳ್ಳಿ ಸ್ವಾಗತಿಸಿದರು. ಎಸ್.ಎನ್. ಮಳೆಪ್ಪನವರ ನಿರೂಪಿಸಿದರು. ಎಚ್.ಕೆ. ಆಡಿನ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.