ಹಾವೇರಿ: ನಗರದ ಭಗವಾನ್ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ದಶಲಕ್ಷಣ ಮಹಾಪರ್ವದ ಕೊನೆಯ ದಿನ ಭಾನುವಾರ ಬೆಳಗ್ಗೆಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಸಾರೋಟಿನಲ್ಲಿ ಭಗವಾನ್ ಅನಂತನಾಥ ಸ್ವಾಮಿ ಜಿನಬಿಂಬ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜರುಗಿತು.ಮೆರವಣಿಗೆಯಲ್ಲಿ ಭಾಗವಹಿಸಿದ ಸಮಸ್ತ ಶ್ರಾವಕರು ಹಾಗೂ ಶ್ರಾವಕಿಯರು ಶ್ವೇತವರ್ಣದ ವಸ್ತ್ರ ಧರಿಸಿದ್ದರು ಹಾಗೂ ಭಗವಾನಗರ ಜಯಘೋಷಣೆ ಮಾಡುತ್ತ ಸಾಗಿದರು. ಮುನಿಶ್ರೀ 108 ವಿಧಿತಸಾಗರಜಿ ಮಹಾರಾಜರ ಸಾನ್ನಿಧ್ಯದಲ್ಲಿ ಹಾಗೂ ಅವರ ಮಾರ್ಗದರ್ಶನದಲ್ಲಿ ದಶಲಕ್ಷಣ ಮಹಾಪರ್ವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೂಜಾ ಕಾರ್ಯಕ್ರಮಗಳು, ಮುನಿಗಳ ಪ್ರವಚನ, ಉಪನ್ಯಾಸ ಸೇರಿದಂತೆ ಸಂಜೆಯವರೆಗೆ ಕಾರ್ಯಕ್ರಮಗಳು ನಿರಂತರವಾಗಿ ಜರುಗಿದವು. ಸಿದ್ಧಚಕ್ರ ಆರಾಧನೆ: ಮುನಿಶ್ರೀ 108 ವಿಧಿತಸಾಗರಜಿ ಮಹಾರಾಜರ ಸಾನ್ನಿಧ್ಯದಲ್ಲಿ ಮಧ್ಯಾಹ್ನ ನಡೆದ ಧರ್ಮ ಸಭೆಯಲ್ಲಿ ಅ. 29ರಿಂದ ನವೆಂಬರ್ 6ರ ವರೆಗೆ ನಗರದಲ್ಲಿ ಜರುಗುವ ಸಿದ್ಧಚಕ್ರ ಆರಾಧನೆ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇಂದ್ರ- ಇದ್ರಾಣಿ, ಕುಬೇರ ಸೇರಿದಂತೆ ವಿವಿಧ ಪದವಿಗಳ ಹರಾಜು ಕಾರ್ಯಕ್ರಮ ಜರುಗಿತು. ಪ್ರತಿಭಾ ಪುರಸ್ಕಾರ: ಇದೇ ಸಂದರ್ಭದಲ್ಲಿ ಹಾವೇರಿಯ ವೀಣಾ ಚಂದ್ರನಾಥ ಕಳಸೂರ ಚಾರಿಟೇಬಲ್ ಟ್ರಸ್ಟ್ನಿಂದ 2024- 25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲೆಯ 40ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಲಾಯಿತು.ಈ ಎಲ್ಲ ಕಾರ್ಯಕ್ರಮಗಳು ಮುನಿಶ್ರೀ 108 ವಿಧಿತಸಾಗರಜಿ ಮಹಾರಾಜರ ಸಾನ್ನಿಧ್ಯದಲ್ಲಿ ಜರುಗಿದವು. ಪ್ರತಿಷ್ಠಾಚಾರ್ಯರು, ಪ್ರತಿಮಾಧಾರಿಗಳು, ಸಮಾಜದ ಮುಖಂಡರು ಇದ್ದರು. ಲೋಕ ಅದಾಲತ್ ಕುರಿತು ಜಾಗೃತಿ
ಬ್ಯಾಡಗಿ: ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಕಾಯಂ ಲೋಕ ಅದಾಲತ್ ಕುರಿತು ಕಾನೂನು ಜಾಗೃತಿ ಕಾರ್ಯಕ್ರಮ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ ಹಿರೇಕುಡೆ ಮಾತನಾಡಿ, ತಪ್ಪುಗಳನ್ನು ಮಾಡಿದಾಗ ಜುಲ್ಮಾನೆಗಳು ಬೀಳುವುದು ಸಹಜ. ಅದಾಗ್ಯೂ ಸರ್ಕಾರದ ಇತಿಮಿತಿಯಲ್ಲಿ ದಂಡ ಭರ್ತಿ ಮಾಡಲು ವಿಶೇಷ ರಿಯಾಯಿತಿ ನೀಡಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.ಶೇ. 50ರಷ್ಟು ರಿಯಾಯಿತಿ: ಸದಸ್ಯ ಕಾರ್ಯದರ್ಶಿಗಳು ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಜುಲ್ಮಾನೆ ಭರಿಸಲು ಶೇ. 50ರಷ್ಟು ರಿಯಾಯಿತಿ ನೀಡಲು ಸರ್ಕಾರ ಆದೇಶಿಸಿದ್ದು, ಸೆ. 12ರ ವರೆಗೂ ರಿಯಾಯಿತಿ ಅನ್ವಯಿಸುತ್ತದೆ. ಇಂಥದ್ದೊಂದು ಸುವರ್ಣಾವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಕಟಬಾಕಿದಾರರು ತ್ವರಿತ ನ್ಯಾಯಾಲಯ ಅಥವಾ ಲೋಕ ಅದಾಲತ್ನಲ್ಲಿ ದಂಡ ಭರ್ತಿ ಮಾಡಿ ಕೇಸಗಳನ್ನು ಖುಲಾಸೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಸಿ. ಶಿಡೇನೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅಪರ ಸರ್ಕಾರಿ ವಕೀಲರಾದ ಪ್ರಭು ಶೀಗಿಹಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಜಿ.ಬಿ. ಯಲಗಚ್ಚ, ಕಾರ್ಯದರ್ಶಿ ಎಚ್.ಜಿ. ಮುಳುಗುಂದ, ಸಹ ಕಾರ್ಯದರ್ಶಿ ಎಂ.ಎಸ್. ಕುಮ್ಮೂರ, ಹಿರಿಯ ನ್ಯಾಯವಾದಿಗಳಾದ ವಿ.ಎಸ್. ಕಡಗಿ, ಬಿ.ಎಸ್. ಚೂರಿ, ಎಫ್.ಎಂ. ಮುಳುಗುಂದ, ಎಂ.ಆರ್. ಹೊಮ್ಮರಡಿ, ಎಂ.ಜೆ. ಮುಲ್ಲಾ ಇತರರಿದ್ದರು.