ದಾಬಸ್ಪೇಟೆ: ಸೋಂಪುರ ಹೋಬಳಿಯ ಹೊಸಹಳ್ಳಿ ಗ್ರಾಮದ ಶ್ರೀ ನಾರಾಯಣಸ್ವಾಮಿ ದೇವಾಲಯದಲ್ಲಿ ಕಳ್ಳರು ಬಾಗಿಲು ಬೀಗ ಮುರಿದು, ಹುಂಡಿ ಕಳವು ಮಾಡಿದ್ದಾರೆ. ಮಂಗಳವಾರ ಮಧ್ಯರಾತ್ರಿ ಶ್ರೀ ನಾರಾಯಣಸ್ವಾಮಿ ದೇವಾಲಯದಲ್ಲಿ ಹುಂಡಿ ಕಳವು ಮಾಡಿದ್ದು ಹುಂಡಿಯಲ್ಲಿ 50-60 ಸಾವಿರ ರು. ಅಪಹರಿಸಿದ್ದಾರೆ. ಅದೇ ಆವರಣದಲ್ಲಿರುವ ಶ್ರೀ ಕಟ್ಟೇಮನೆ ಲಕ್ಷ್ಮೀ ದೇವಾಲಯದಲ್ಲೂ ವಿಫಲ ಯತ್ನ ನಡೆದಿದೆ. ಈ ಮುಂಚೆಯೂ ಗ್ರಾಮದ ಮಧ್ಯ ಭಾಗದಲ್ಲಿರುವ ಶ್ರೀ ಗಣೇಶ, ನಾರಾಯಣಸ್ವಾಮಿ ಮತ್ತು ಕಟ್ಟೇಮನೆ ಲಕ್ಷ್ಮೀ ದೇವಾಲಯಗಳಲ್ಲಿ ಹುಂಡಿ ಮಾಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ ಎಂದು ದೇವಾಲಯದ ಅಧ್ಯಕ್ಷ ಟಿ.ಗೋವಿಂದಯ್ಯ ತಿಳಿಸಿದ್ದಾರೆ. ದೇವಾಲಯದ ಕಾರ್ಯದರ್ಶಿ ಗೋವಿಂದರಾಜು ಮಾತನಾಡಿ, ಇತ್ತೀಚೆಗೆ ಸೋಂಪುರ ಹೋಬಳಿಯ ನರಸೀಪುರ ಗ್ರಾಪಂ ವ್ಯಾಪ್ತಿಯ ಮೂರು ದೇವಾಲಯ, ಟಿ.ಬೇಗೂರು ಸೇರಿದಂತೆ ಹಲವಾರು ದೇವಾಲಯಗಳಲ್ಲಿ ಕಳವಾಗಿದೆ. ಹಳ್ಳಿಗಳಿಗೆ ರಾತ್ರಿ ವೇಳೆ ಪೊಲೀಸರ ಗಸ್ತು ಹೆಚ್ಚಿಸಬೇಕು ಎಂದರು. ಘಟನೆ ಸಂಬಂಧ ದಾಬಸ್ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.