ಹಸಿವು ಮುಕ್ತ ಕರ್ನಾಟಕವೇ ನಮ್ಮ ಕಾಂಗ್ರೆಸ್‌ ಸರ್ಕಾರದ ಗುರಿ: ಸಚಿವ ಎಸ್‌.ಮಧು ಬಂಗಾರಪ್ಪ

KannadaprabhaNewsNetwork |  
Published : Mar 16, 2026, 12:30 AM IST
15ಎಎನ್‌ಟಿ1ಇಪಿ: ಆನವಟ್ಟಿಯ ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಕಾರ್ಯಕರ್ಯರು ಸಚಿವ ಮಧು ಬಂಗಾರಪ್ಪ ಅವರಿಗೆ ಸನ್ಮಾನಿಸಿದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿವು ಮುಕ್ತ ಕರ್ನಾಟಕ ಮಾಡಲು ಕ್ಯಾಂಟೀನ್‌ ಯೋಜನೆ ರೂಪಿಸಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್‌.ಮಧು ಬಂಗಾರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನವಟ್ಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿವು ಮುಕ್ತ ಕರ್ನಾಟಕ ಮಾಡಲು ಕ್ಯಾಂಟೀನ್‌ ಯೋಜನೆ ರೂಪಿಸಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್‌.ಮಧು ಬಂಗಾರಪ್ಪ ತಿಳಿಸಿದರು.

ಭಾನುವಾರ ಆನವಟ್ಟಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ನೂತನ ಇಂದಿರಾ ಕ್ಯಾಟೀನ್‌ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸ್ವಾತಂತ್ರ್ಯ ನಂತರ ದೇಶದಲ್ಲಿ ಬಡತನ ಜನರನ್ನು ಕಿತ್ತು ತಿನ್ನುತ್ತಿತ್ತು. ಜನರ ಕಷ್ಟವನ್ನು ಅರಿತ್ತಿದ್ದ ಇಂದಿರಾಗಾಂಧಿ ಅವರು ಹಸಿವುಮುಕ್ತ ಭಾರತ ಮಾಡುವ ಯೋಜನೆ ಆಗಲೇ ಹಾಕಿಕೊಂಡಿದ್ದರು. ಸಾಕಷ್ಟು ಬಡಜನರ ಪರವಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಹಾಗಾಗಿ ಕರ್ನಾಟಕದಲ್ಲಿ ಬಡವರ ಪರವಾಗಿ ನಿರ್ಮಿಸಿರುವ ಕ್ಯಾಂಟೀನ್‌ಗಳಿಗೆ ಇಂದಿರಾ ಕ್ಯಾಂಟೀನ್‌ ಅಂತಲೇ ಹೆಸರು ಇಟ್ಟಿದ್ದೇವೆ ಎಂದರು.

ಪೌರ ಕಾರ್ಮಿಕರು, ಆಸ್ಪತ್ರೆ ಸಿಬ್ಬಂದಿ, ರೋಗಿಗಳು, ಶ್ರಮಿಕ ವರ್ಗದ ಪ್ರತಿಯೊಬ್ಬರಿಗೂ ಐದು ರುಪಾಯಿಯಲ್ಲಿ ಉಪಹಾರ, ಹತ್ತು ರುಪಾಯಿಯಲ್ಲಿ ಮಧ್ಯಾಹ್ನದ ಊಟ ನೀಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಿ ಎಂದ ಅವರು, ಆಹಾರ ತಯಾರಕರು ಗುಣಮಟ್ಟ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಬಳಕೆ ಮಾಡಿರುವ ನೀರಿನ ಬಾಟಲ್‌, ಟೀ ಕಪ್‌, ಆಹಾರ ಪದಾರ್ಥಗಳ ಪ್ಲಾಸ್ಟಿಕ್‌ ಕವರ್‌ಗಳನ್ನು ನಾವೇ ತೆಗೆದುಕೊಂಡು ಹೋಗಿ, ಡಸ್ಟ್‌ ಬಿನ್‌ಗಳಿಗೆ ಹಾಕುವ ಒಳ್ಳೆಯ ಅಭ್ಯಾಸ ಬೆಳಸಿಕೊಳ್ಳಬೇಕು. ಪೌರ ಕಾರ್ಮಿಕರೇ ಇವುಗಳನ್ನು ಸ್ವಚ್ಛ ಮಾಡಲಿ ಎಂಬ ಮನೋಬಾವ ಬೇಡ, ಪಟ್ಟಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಅವರೊಂದಿಗೆ ನಾವು ಕೈಜೋಡಿಸೋಣ ಎಂದರು.

ಮೂರು ವರ್ಷದಿಂದ ಇಂದಿರಾ ಕ್ಯಾಂಟೀನ್‌ ಉದ್ಘಾಟನೆಗಾಗಿ ಎದುರು ನೋಡುತ್ತಿದ್ದ ಸಾರ್ವಜನಿಕರು, ಕ್ಯಾಂಟೀನ್‌ಗೆ ಆಗಮಿಸಿ ಉಪಹಾರ ಸೇವಿಸಿ ಸಂತಸ ವ್ಯಕ್ತಪಡಿಸಿದರು. ಆಸ್ಪತ್ರೆ ಆವರಣದಲ್ಲೇ ನಿರ್ಮಾಣ ಮಾಡಲು ಕಾರಣರಾದ ಸಚಿವ ಮಧು ಬಂಗಾರಪ್ಪ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ಮಧು ಬಂಗಾರಪ್ಪ ಅವರು ಪೌರ ಕಾರ್ಮಿಕರು, ಕೃಷಿಕರು ಹಾಗೂ ಕಾರ್ಯಕರ್ತರೊಂದಿಗೆ ಆಹಾರ ಸೇವಿಸಿ, ಗುಣಮಟ್ಟವನ್ನು ಪರೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯರಾದ ಅನೀಶ್‌ ಪಾಟೀಲ್‌, ಕೃಷ್ಣಪ್ಪ ತಲ್ಲೂರು, ಮಹ್ಮದ್‌ ಗೌಸ್‌, ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಚೌಟಿ ಚಂದ್ರಶೇಖರ್‌ ಪಾಟೀಲ್‌, ಆನವಟ್ಟಿ ಬ್ಲಾಕ್‌ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಮುಖಂಡರಾದ ಕೆ.ಪಿ ರುದ್ರಗೌಡ, ಶಿವಲಿಂಗೇಗೌಡ, ಮಧುಕೇಶ್ವರ ಪಾಟೀಲ್‌, ಅರುಣಕುಮಾರ್‌ ಸಮನವಳ್ಳಿ, ಮಂಜುನಾಥ ಕುಣೆತೆಪ್ಪ, ಜಿಲ್ಲಾ ಯೋಜನಾ ಅಧಿಕಾರಿ ಕೆ. ರಂಗಸ್ವಾಮಿ, ತಹಸೀಲ್ದಾರ್‌ ಕೆ.ಪುರಂದರ್‌, ಮುಖ್ಯಾಧಿಕಾರಿ ಎನ್‌.ಅರುಣಕುಮಾರ್, ಇಂಜಿನಿಯರ್‌ ಕಿರಣಕುಮಾರ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಿರಿ: ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ಮಾನಸ
ಬಿಜೆಪಿ-ಜೆಡಿಎಸ್ ನಿಂದ ಪಾಠ ಕಲಿಯಬೇಕಿಲ್ಲ: ಶಾಸಕ ಕೆ. ಎಸ್. ಆನಂದ್