ಗ್ರಾಮಾಂತರಕ್ಕೆಸಾಧನೆಗೆ ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಅಗತ್ಯ

KannadaprabhaNewsNetwork | Published : Sep 2, 2024 2:10 AM

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇ

ಕನ್ನಡಪ್ರಭ ವಾರ್ತೆ ಹುಣಸೂರು

ಸಾಧನೆ ಎನ್ನುವುದು ನಿರಂತರವಾಗಿರಬೇಕು. ಸಾಧಿಸಿದೆನೆಂಬ ಸಂತೃಪ್ತಿಪಡುವುದು ಸಾಧನಕ ಗುಣವಲ್ಲ. ವಿದ್ಯಾರ್ಥಿಗಳು ಸಾಧಕರಂತೆ ನಿರಂತರ ಪರಿಶ್ರಮದತ್ತ ಗಮನಹರಿಸಬೇಕು ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಅಭಿಪ್ರಾಯಪಟ್ಟರು.

ಭಾನುವಾರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು. ಈ ಸಾಲಿನಲ್ಲಿ ತಾಲೂಕಿನ ಒಕ್ಕಲಿಗ ಸಮಾಜದ ಮೂವರು ವಿಶಿಷ್ಟ ಸಾಧನೆಗೈದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗಿರೀಶ್ ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಯುಪಿಎಸ್ ಪರೀಕ್ಷೆಯಲ್ಲಿ ತಿಪ್ಪಲಾಪುರ ಲೇಖನ್ ಉತ್ತೀರ್ಣರಾಗುವ ಮೂಲಕ ಸಾಧನೆಗೈದಿದ್ದರೆ, ನಾಗಮಂಗಲದ ಪ್ರೇಮ್ ಕುಮಾರ್ ಥ್ರೋಬಾಲ್ ಕ್ರೀಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹೀಗೆ ಪ್ರತಿಭೆಗಳು ನಮ್ಮಲ್ಲಿವೆ. ಸಾಧಿಸುವ ಛಲ ಅವರಲ್ಲಿದೆ. ಅದನ್ನು ಹುಡುಕಿ ಅವಕಾಶ ನೀಡುವ ಕಾರ್ಯ ಆಗಬೇಕಿದೆ ಎಂದರು.

ನಾಡಪ್ರಭುಗಳು ನಮ್ಮೆಲ್ಲರ ಹೆಮ್ಮೆ

ನಾಡಪ್ರಭು ಕೇಂಪೇಗೌಡ ನಮ್ಮೆಲ್ಲರ ಹೆಮ್ಮೆ. ಅವರೆಂದರೆ ನಮಗೆಲ್ಲರಿಗೂ ಗರ್ವವೂ ಹೌದು. ಎಲ್ಲರನ್ನು ಒಳಗೊಂಡು ಎಲ್ಲರಿಗಾಗಿ ನಾಡು ಕಟ್ಟಿದ ದೇಶಭಕ್ತ ನಾಡಪ್ರಭು ಕೆಂಪೇಗೌಡರು. ತಾಲೂಕಿನಲಿ ಎಲ್ಲ ಸಮಾಜಗಳ ಬೆಂಬಲದಿಂದಾಗಿ ನಾನು ಶಾಸಕನಾಗಿದ್ದೇನೆ. ಅದರಲ್ಲೂ ಒಕ್ಕಲಿಗ ಸಮಾಜದ ಸಂಪೂರ್ಣ ಬೆಂಬಲ ನನಗೆ ಶ್ರೀರಕ್ಷೆಯಾಗಿದ್ದು, ನಿಮ್ಮ ಬೆಂಬಲವನ್ನು ನಾನಿರುವವರೆಗೂ ಮರೆಯುವುದಿಲ್ಲ ಎಂದು ಕೃತಜ್ಞತೆ ಸಲ್ಲಿಸಿದರು.

ಸಮುದಾಯ ಭವನಕ್ಕೆ ನಿವೇಶನ

ಒಕ್ಕಲಿಗರ ಸಂಘದ ಸಮುದಾಯ ಭವನಕ್ಕೆ ಈ ಹಿಂದೆ ಗುರುತಿಸಿದ್ದ ನಿವೇಶನ ಕಾರಣಾಂತರಗಳಿಂದ ಆಗಲಿಲ್ಲ. ಆದರೆ ಇದೀಗ ಮತ್ತೊಂದು ನಿವೇಶನವನ್ನು ಗುರುತಿಸಿದ್ದು, ಇನ್ನೆರಡು ತಿಂಗಳಿನಲ್ಲಿ ನಿವೇಶನದ ನೋಂದಣಿ ಮಾಡಿಸಿ ಗುದ್ದಲಿಪೂಜೆ ಮಾಡಿಸಿಕೊಡುವ ಜವಾಬ್ದಾರಿ ನನ್ನದು ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಸಮಾರಂಭದಲ್ಲಿ ಘೋಷಿಸಿದಾಗ ಸಭಿಕರ ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

ನಿವೃತ್ತ ಪ್ರಾಂಶುಪಾಲ ಸಿದ್ಧರಾಮೇಗೌಡ ಮಾತನಾಡಿ, ಕೆಂಪೇಗೌಡರು ಎಂದರೆ ಸಾಹಸ, ಧೈರ್ಯ ಮತ್ತು ಸಾಧನೆಯ ಪ್ರತೀಕ. ಎಲ್ಲರ ಒಳಿತಿಗಾಗಿ ಅವರು ಆಳಿದರು. ಒಕ್ಕಲಿಗ ಸಮಾಜ ಒಗ್ಗಟ್ಟಿನ ಮೂಲಕ ಸಮುದಾಯವನ್ನು ಮುನ್ನಡೆಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಕೆ. ಗಣೇಶ್ ಗೌಡ ಮಾತನಾಡಿದರು. ಚುಂಚನಗಿರಿ ಕ್ಷೇತ್ರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿಭಾಗದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮುಖಂಡರಾದ ಗೌರಿಶಂಕರ್, ಸೀತಾರಾಮು, ಎಚ್.ಜೆ, ಜಯರಾಮು, ಬಿ.ಎಸ್. ಯೋಗಾನಂದಕುಮಾರ್, ಸತೀಶ್ ಪಾಪಣ್ಣ, ರುದ್ರೇಗೌಡ, ಎಚ್. ಬಾಲಕೃಷ್ಣ, ಎನ್.ಎಸ್. ಚಂದ್ರಶೇಖರ್, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತುಳಸಿರಾಮ, ರಾಮಕೃಷ್ಣೇಗೌಡ, ಗೋವಿಂದೇಗೌಡ, ಪ್ರಸನ್ನ, ಸುನೀತಾ ಜಯರಾಮೇಗೌಡ, ಅಣ್ಣಯ್ಯ, ಸ್ವಾಮಿಗೌಡ ಮೊದಲಾದವರು ಇದ್ದರು.