ಗುಂಡಿನ ಸದ್ದು ಕೇಳಿ ಅರಣ್ಯ ಅಧಿಕಾರಿಗಳ ದಾಳಿ । ತೆಲಂಗಾಣ ಮೂಲದವರಿಂದ ಕಾಡುಪ್ರಾಣಿ ಬೇಟೆ ಯತ್ನ ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಮೀಸಲು ಅರಣ್ಯಪ್ರದೇಶ ವ್ಯಾಪ್ತಿಯಲ್ಲಿ ಬರುವ ಚಂದ್ರಂಪಳ್ಳಿ ಅರಣ್ಯದಲ್ಲಿ ತೆಲಂಗಾಣ ರಾಜ್ಯದ ಚುನ್ನಾಭಟ್ಟಿ ತಾಂಡಾದ ಕಾಡುಪ್ರಾಣಿಗಳ ಕಳ್ಳಬೇಟೆಗಾರರನ್ನು ಬೆನ್ನಟ್ಟಿ ಓರ್ವನನ್ನು ಬಂಧಿಸಲಾಗಿದೆ ಎಂದು ತಾಲೂಕು ವನ್ಯಜೀವಿಧಾಮ ವಲಯ ಅರಣ್ಯಾಧಿಕಾರಿ ಭಾಗಪ್ಪಗೌಡ ತಿಳಿಸಿದ್ದಾರೆ.ತಾಲೂಕಿನ ಚಂದ್ರಂಪಳ್ಳಿ ಅರಣ್ಯಪ್ರದೇಶ ಸರ್ವೆ ನಂ೨ರಲ್ಲಿ ಬುಧವಾರ ಮಧ್ಯರಾತ್ರಿ ಚುನ್ನಾಬಟ್ಟಿ ತಾಂಡಾದ ಕಾಡುಪ್ರಾಣಿಗಳ ಕಳ್ಳಬೇಟೆಗಾರರು ಪ್ರಾಣಿಗಳ ಮೇಲೆ ಪೈರಿಂಗ್ ಮಾಡಿದ ಸದ್ದು ಕೇಳಿದ ಅರಣ್ಯಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ಮೂವರು ಕಳ್ಳಬೇಟೆಗಾರರು ಎರಡು ಗನ್ಗಳಿಂದ ಕಾಡು ಪ್ರಾಣಿಗಳ ಮೇಲೆ ಫೈರಿಂಗ್ ಮಾಡುತ್ತಿದ್ದರು.
ಆದರೆ ಕಾಡು ಪ್ರಾಣಿಗಳು ಕತ್ತಲಿನಲ್ಲಿ ಓಡಿಹೋಗಿದ್ದವು. ಕಳ್ಳಬೇಟೆಗಾರರು ಓಡಿ ಹೋಗುವ ಸಂದರ್ಭದಲ್ಲಿ ಬೆನ್ನಟ್ಟಿ ಬಾಚು ಪಾಂಡು ಚವ್ಹಾಣ ಚುನ್ನಾಬಟ್ಟಿತಾಂಡಾ ತೆಲಂಗಾಣ ಇತನನ್ನು ಬಂಧಿಸಲಾಗಿದೆ. ಇನ್ನುಳಿದ ಜೈಸಿಂಗ ರೂಪಸಿಂಗ ಮತ್ತು ಸಂಜೀವ ರೂಪಸಿಂಗ ಆರೋಪಿಗಳು ಪರಾರಿಯಾಗಿದ್ದಾರೆ. ಕಳ್ಳರಿಂದ ೨ ಗನ್ಗಳು ಎರಡು ಬ್ಯಾಟರಿ ಮತ್ತು ಗನ್ ಪೌಡರ್, ಚರಾ ಇನ್ನಿತರ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಡಿಸಿಎಫ್ ಸುಮಿತ ಪಾಟೀಲ ಮತ್ತು ಎಸಿಎಫ್ ಮುನಿರ ಅಹೆಮದ ಇವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿದ್ದಾರೂಢ ಹೊಕ್ಕೂಂಡಿ, ಗಜಾನಂದ, ಭಾನುಪ್ರತಾಪಸಿಂಗ, ಹಾಲೇಶ ಕೊರವಾರ, ದೇವಪ್ಪ, ಪ್ರಭು, ರಮೇಶ, ತುಕಾರಾಮ, ನೀಲಪ್ಪ ಇವರೆಲ್ಲರೂ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ತೆಲಂಗಾಣ ರಾಜ್ಯ ಚುನ್ನಾಭಟ್ಟಿ ತಾಂಡಾ, ವಿಟ್ಟು ನಾಯಕ ತಾಂಡಾ ಕಳ್ಳಬೇಟೆಗಾರರ ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ರಾತ್ರಿ ಸಮಯದಲ್ಲಿ ಅರಣ್ಯದಲ್ಲಿ ನುಸುಳಿ ಬೇಟೆಯಾಡುತ್ತಿರುವ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ ಕಲಂ ಪ್ರಕಾರ ವನ್ಯಜೀವಿಧಾಮ ಇಲಾಖೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯಾಧಿಕಾರಿ ಭಾಗಪ್ಪಗೌಡ ತಿಳಿಸಿದ್ದಾರೆ.ಇವರು ಅಂತರಾಜ್ಯ ಹವ್ಯಾಸಿ ಕಳ್ಳಬೇಟೆಗಾರರು ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.