ಹೊಳಲ್ಕೆರೆ: ನನ್ನನ್ನು ನಂಬಿ ಬಂದವರಿಗೆ ಯಾವತ್ತೂ ಮೋಸ ಮಾಡುವವನಲ್ಲ. ಹಣದ ವ್ಯಾಮೋಹವಿರುವ ರಾಜಕಾರಣಿಗಳು ನನ್ನಿಂದಲೇ ಬೆಳಕು ಹರಿಯಲಿದೆ ಎಂದು ನಂಬಿಸಿ ಮೋಸ ಮಾಡುತ್ತಾರೆ. ಈ ವಿಭಾಗಕ್ಕೆ ಸೇರಿದವ ನಾನಲ್ಲವೆಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಬೇಕು. ಅದಕ್ಕಾಗಿ ಈ ಬಾರಿಯ ಲೋಕಸಭೆ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಕ್ಷೇತ್ರದ ಜನ ಹಗಲು ರಾತ್ರಿ ಸುತ್ತಾಡಿ ಹೆಚ್ಚಿನ ಮತಗಳನ್ನು ನೀಡಬೇಕು ಎಂದು ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, 2024ರ ಪಾರ್ಲಿಮೆಂಟ್ ಚುನಾವಣೆ ದೇಶಕ್ಕಾಗಿ ಮೋದಿಗಾಗಿ ನಡೆಯುವ ಚುನಾವಣೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ 60 ವರ್ಷಗಳ ಕಾಲ ಕಾಂಗ್ರೆಸ್ ದೇಶವನ್ನಾಳಿದೆ. ನರೇಂದ್ರ ಮೋದಿ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದುಕೊಂಡು ದುಪ್ಪಟ್ಟು ಅಭಿವೃದ್ಧಿ ಮಾಡಿರುವುದನ್ನು ದೇಶದ ಜನ ತುಲನಾತ್ಮಕವಾಗಿ ನೋಡುತ್ತಿದ್ದಾರೆ. ಅದರಲ್ಲೂ ಒಂದೆ ಕುಟುಂಬದವರು 38 ವರ್ಷಗಳ ಕಾಲ ದೇಶವನ್ನು ಆಳಿದ್ದಾರೆ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ದೇಶದ ಕೀರ್ತಿ ಗೌರವ ಹೆಚ್ಚಾಗಿದೆ. ಭಯೋತ್ಪಾದಕರು ಬಿಲ ಸೇರಿದ್ದಾರೆ. ವಿದ್ಯಾವಂತರ ಸಂಖ್ಯೆ ಜಾಸ್ತಿಯಾಗಿದೆ. ಮೋದಿ ಅವರ ಟ್ರಂಪ್ ಕಾರ್ಡ್ ಇಟ್ಟುಕೊಂಡು ಬೇರೆ ಕಡೆ ಅಲೆಯಬೇಕಾಗಿಲ್ಲ. ಸಂತ ನಮ್ಮ ದೇಶದ ಪ್ರಧಾನಿಯಾಗಿರುವುದರಿಂದ ಅವರ ಕೈಬಲಪಡಿಸಲು 26ರಂದು ನಡೆಯುವ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಿ ಎಂದು ಮತದಾರರಲ್ಲಿ ವಿನಂತಿಸಿದರು.ವಿಧಾನಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಲೋಕಸಭಾ ಚುನಾವಣೆ ಸಂಚಾಲಕ ಎಸ್.ಲಿಂಗಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ.ಸಿದ್ದೇಶ್, ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್, ಪುರಸಭೆ ಸದಸ್ಯರು, ಹಿರಿಯ ಮುಖಂಡರುಗಳು, ಪಕ್ಷದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.