ಡಾ.ಅಂಬೇಡ್ಕರ್‌ ಆಶಯದಂತೆ ನಡೆದ ತೃಪ್ತಿ ನನ್ನಗಿದೆ

KannadaprabhaNewsNetwork | Published : Apr 30, 2025 12:31 AM

ಸಾರಾಂಶ

ಅಂಬೇಡ್ಕರ್ ಹೇಳಿದಂತೆಯೇ ಕ್ಷೇತ್ರದಲ್ಲಿ ಸಮಾನತೆ ತರಲಾಗಿದ್ದು, ಎಲ್ಲ ಜಾತಿ, ಧರ್ಮದವರನ್ನು ಸರಿಸಮಾನವಾಗಿ ಕಾಣಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ಡಾ.ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನ ಸಮಾನತೆಯ ಪಂಕ್ತಿ ಹಾಗೂ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕ್ಷೇತ್ರದಲ್ಲಿ ಸದಾ ಕೆಲಸ ಮಾಡುತ್ತಿದ್ದು, ಎಲ್ಲ ಜಾತಿ, ಜನಾಂಗದವರಿಗೂ ಸರಿಸಮಾನವಾಗಿ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಅವರ ಕೆಲಸ ಕಾರ್ಯಗಳನ್ನು ಕೂಡ ಸರಿಸಮಾನ ದೃಷ್ಟಿಯಿಂದ ಮಾಡಿರುವ ತೃಪ್ತಿ ನನ್ನದಾಗಿದೆ ಎಂದು ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಕುಲಗೋಡ ಗ್ರಾಮದ ಎನ್ಎಸ್ಎಫ್ ಶಾಲಾ ಆವರಣದಲ್ಲಿ ಡಾ.ಅಂಬೇಡ್ಕರ್ 134ನೇ ಜನ್ಮದಿನೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ದಲಿತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಎಲ್ಲ ಸಮಾಜವನ್ನು ಒಂದುಗೂಡಿಸುವ ಮೂಲಕ ಸಾಮಾಜಿಕ ನ್ಯಾಯದಡಿ, ಡಾ.ಅಂಬೇಡ್ಕರ್ ಸಂವಿಧಾನದ ತತ್ವದಡಿ ಕೆಲಸ ಮಾಡುತ್ತಿರುವೆ. ಅದರಂತೆಯೇ ಡಾ.ಅಂಬೇಡ್ಕರ್ ಸಾಮಾಜಿಕ ನ್ಯಾಯವನ್ನು ಇಲ್ಲಿ ಕಲ್ಪಿಸಲಾಗಿದ್ದು, ಇವರ ಮಾರ್ಗದರ್ಶನಗಳೇ ಇಲ್ಲಿ ಕಾರ್ಯನಿರ್ವಹಣೆಗೆ ದಾರಿದೀಪವಾಗಿವೆ ಎಂದು ಹೇಳಿದರು.

ಅಂಬೇಡ್ಕರ್ ಹೇಳಿದಂತೆಯೇ ಕ್ಷೇತ್ರದಲ್ಲಿ ಸಮಾನತೆ ತರಲಾಗಿದ್ದು, ಎಲ್ಲ ಜಾತಿ, ಧರ್ಮದವರನ್ನು ಸರಿಸಮಾನವಾಗಿ ಕಾಣಲಾಗುತ್ತಿದೆ. ಜೊತೆಗೆ ಅವರ ಆಸೆ ಆಶೋತ್ತರಗಳಿಗೆ ಸ್ಪಂದನೆ ಮಾಡುತ್ತಿದ್ದು, ಸಮಾನತೆಯ ಅಧಿಕಾರ ನೀಡಲಾಗಿದೆ ಎಂದ ಅವರು, ಕಳೆದ 25 ವರ್ಷಗಳಿಂದ ಆರು ಬಾರಿ ಶಾಸಕನಾಗಿ ಇಲ್ಲಿ ಕೆಲಸ ಮಾಡುತ್ತಿರುವೆ. ನಮ್ಮದು ಸಣ್ಣ ಜಾತಿ ಇದ್ದರೂ ಕ್ಷೇತ್ರದಲ್ಲಿರುವ ಎಲ್ಲ ಜಾತಿ ಜನಾಂಗದವರು ಜನರು ನನ್ನನ್ನು ಎಂದಿಗೂ ಕೈಬಿಟ್ಟಿಲ್ಲ. ಹೀಗಾಗಿ ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಬೋಧಿಸಿದ ತತ್ವ ಪರಿಪಾಲನೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲ ಜನಾಂಗದವರು ಇರಲೆಂದು ಆಶಿಸಿದ್ದರು. ಅದರಂತೆಯೇ ಎಲ್ಲ ಜನಾಂಗದವರಿಗೆ ಅವಕಾಶ ಕೊಟ್ಟಿದ್ದರು. ಅಂತೆಯೇ ಈ ಕ್ಷೇತ್ರದಲ್ಲಿಯೂ ಮುಂದುವರಿದ ಜನಾಂಗವಿರಲಿ, ಹಿಂದುಳಿದವರು ಇರಬಹುದು ಎಲ್ಲರಿಗೂ ಸಮಾನ ಅವಕಾಶ ಕೊಡಲಾಗಿದೆ. ಇಲ್ಲಿಯಂತೆಯೇ ಎಲ್ಲ 223 ಕ್ಷೇತ್ರಗಳಲ್ಲಿ ಹೀಗೆ ಅವಕಾಶ ಕೊಟ್ಟರೆ ಅಲ್ಲಿಯೂ ಸಮಾನತೆ ತರಲು ಸಾಧ್ಯವಾಗುತ್ತದೆ. ಜತೆಗೆ ಕ್ಷೇತ್ರಗಳು ಸುಧಾರಣೆಯಾಗುತ್ತವೆ. ಎಲ್ಲರನ್ನು ಸಮಾನತೆಯಡಿ ನಾವು ನೋಡುವಂತೆ ಹೇಳಿದ್ದ ಡಾ.ಅಂಬೇಡ್ಕರ್ ಸಮಾನತೆ ಆಶೋತ್ತರದ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾಸಕರು, ಡಾ.ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕೇವಲ ಮತ ಪಡೆಯುವ ಸಂಬಂಧ ಡಾ.ಅಂಬೇಡ್ಕರ್ ಅವರನ್ನು ಬಳಸಿಕೊಂಡಿದೆ ಹೊರತು, ಅವರ ತತ್ವಗಳನ್ನು ಅವರು ಎಂದಿಗೂ ಅನುಸರಿಸುತ್ತಿಲ್ಲ. ಏಕೆಂದರೆ ಈ ಹಿಂದೆ ಡಾ.ಅಂಬೇಡ್ಕರ್ ಲೋಕಸಭೆ ಸ್ಪರ್ಧೆ ಮಾಡಿದಾಗ ಅವರನ್ನು ಸೋಲಿಸಿದ್ದೆ ಇದೆ ಕಾಂಗ್ರೆಸ್‌ನವರು. ಅವರ ಹೆಸರನ್ನು ಹೇಳಲು ಕೂಡ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಜರಿದರು.

ಎಲ್ಲರೂ ತಮ್ಮ ಧರ್ಮವನ್ನು ಪ್ರೀತಿ ಮಾಡಿದಂತೆ ಬೇರೆ ಧರ್ಮವನ್ನು ಸಮಾನವಾಗಿ, ಗೌರವದಿಂದ ಕಾಣಬೇಕು. ಹೀಗಾದಾಗ ಮಾತ್ರ ಸರ್ವಜನಾಂಗದ ಶಾಂತಿ ತೋಟದಂತೆ ಬಾಳಲು ಸಾಧ್ಯ. ಅದು ಈ ಕ್ಷೇತ್ರದಲ್ಲಿ ಸಾಧ್ಯವಾಗಿದೆ ಎಂಬುದಕ್ಕೆ ನನಗೆ ಬಹಳ ಸಂತೋಷವಿದೆ. ಹೀಗೆ ಎಲ್ಲ ಜನಾಂಗದವರು ಒಂದಾದರೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು. ದೇವರಲ್ಲಿ ನಂಬಿಕೆ ಇರಲಿ. ಭಕ್ತಿ ಇರಲಿ. ಆದರೆ, ಮೂಢನಂಬಿಕೆ ಎಂದಿಗೂ ನಂಬಬೇಡಿ ಎಂದು ಕರೆ ನೀಡಿದ ಅವರು, ಅದಕ್ಕೆ ಡಾ.ಅಂಬೇಡ್ಕರ್ ಸಮಾನತೆಯ ಶಿಕ್ಷಣವನ್ನು ಜಾರಿಗೆ ತಂದರು. ಅಂತಹ ಶಿಕ್ಷಣದಿಂದ ಮೂಢನಂಬಿಕೆ ಹೊಡೆದೋಡಿಸಬಹುದು ಎಂದು ಅವರು ನಂಬಿದ್ದರು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಣಸಿಕೊಳ್ಳ ಪೀಠದ ಸಿದ್ಧ ಬಸವ ದೇವರು ವಹಿಸಿ ಆಶೀರ್ವಚನ ನೀಡಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಸ್ ನಿಲ್ದಾಣದಿಂದ ಕಾರ್ಯಕ್ರಮದ ವೇದಿಕೆಯ ತನಕ ಮಹಿಳೆಯರ ಕುಂಭಮೇಳ, ವಿವಿಧ ವಾದ್ಯ ವೃಂದಗಳೊಂದಿಗೆ 2.50 ಕ್ವಿಂಟಲ್ ಸೇಬು ಹಣ್ಣಿನ ಬೃಹತ್ ಹಾರದೊಂದಿಗೆ ಬರಮಾಡಿಕೊಳ್ಳಲಾಯಿತು.

ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಕುಲಗೋಡ ಗ್ರಾಪಂ ಅಧ್ಯಕ್ಷ ತಮ್ಮಣ್ಣ ದೇವರ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಚ್. ಪಾಟೀಲ್, ಮೂಡಲಗಿ ಪುರಸಭೆಯ ಅಧ್ಯಕ್ಷೆ ಖುರ್ಶದಾ ನದಾಫ್, ಅರಭಾವಿ ಪಪಂ ಅಧ್ಯಕ್ಷೆ ರೇಣುಕಾ ಮಾದರ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ತಾಪಂ ಮಾಜಿ ಸದಸ್ಯ ಸುಭಾಷ ಒಂಟಗೋಡಿ, ಪುಟ್ಟಣ್ಣ ಪೂಜೇರಿ, ಪ್ರಭಾ ಶುಗರ್ಸ್ ನಿರ್ದೇಶಕ ಎಂ.ಆರ್.ಭೋವಿ, ಪರಮೇಶ್ವರ ಹೊಸಮನಿ, ರವೀಂದ್ರ ಪರುಶೆಟ್ಟಿ, ದಲಿತ ಸಂಘಟನೆಗಳ ಮುಖಂಡರಾದ ಸತ್ತೆಪ್ಪ ಕರವಾಡಿ, ರಮೇಶ ಮಾದರ, ಯಮನಪ್ಪ ಕರಬನ್ನವರ, ರಮೇಶ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಲಕ್ಷ್ಮಣ ತೆಳಗಡೆ, ಬಸು ಕಾಡಪುರ, ಬಸು ದೊಡಮನಿ, ಪ್ರಕಾಶ ಹಿರೆಮೇತ್ರಿ, ಶಂಕರ ಹಾದಿಮನಿ, ಯಮನಪ್ಪಸಣ್ಣಮೆತ್ರಿ, ಬಸವರಾಜ ಬಿಲಕುಂದಿ, ಶಂಕರ್ ದೊಡಮನಿ, ಹಾಲಿ - ಮಾಜಿ ಜನಪ್ರತಿನಿಧಿಗಳು, ಡಿಎಸ್‌ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

---

ಕೋಟ್‌... (ಮಸ್ಟ್‌)....

ಬಿಜೆಪಿ ಎಂದಿಗೂ ಡಾ.ಅಂಬೇಡ್ಕರ್ ಅವರಿಗೆ ಗೌರವ ನೀಡುತ್ತಲೇ ಬಂದಿದೆ. ಅವರ ತತ್ವದಡಿಯೇ ಕೆಲಸ ಮಾಡುತ್ತಾ ಬಂದಿದೆ. ಇಂದು ನಾನು ಇಲ್ಲಿ ಶಾಸಕನಾಗಿ ಬಂದು ನಿಮ್ಮೆದುರು ನಿಂತಿದ್ದೇನೆ ಎಂದರೆ ಅದಕ್ಕೆ ಕಾರಣವೇ ಸಂವಿಧಾನ. ಡಾ.ಅಂಬೇಡ್ಕರ್ ಎಲ್ಲ ಜಾತಿ ಜನಾಂಗಕ್ಕೂ ಸಮಾನತೆ ನೀಡಿದ್ದಾರೆ. ಅದನ್ನು ಕ್ಷೇತ್ರದಲ್ಲಿ ನಾವು ಕಾಣಬಹುದು. ಈ ಕ್ಷೇತ್ರದ ಜನರ ಸಹಕಾರ, ಪ್ರೀತಿ ವಿಶ್ವಾಸ ಎಲ್ಲವೂ ಸದಾ ನನ್ನ ಮೇಲಿದೆ. ಅದನ್ನು ನಾನು ಎಂದಿಗೂ ಉಳಿಸಿಕೊಂಡು ಹೋಗುತ್ತೇನೆ.

ಬಾಲಚಂದ್ರ ಜಾರಕಿಹೊಳಿ, ಬೆಮುಲ್ ಅಧ್ಯಕ್ಷ ಹಾಗೂ ಶಾಸಕ

Share this article