ಸಹಕಾರಿ ಕ್ಷೇತ್ರದಿಂದ ರೈತರಿಗೆ ನ್ಯಾಯ ಒದಗಿಸಿದ್ದೇನೆ: ಭೀಮ ನಾಯ್ಕ

KannadaprabhaNewsNetwork |  
Published : Nov 22, 2025, 02:30 AM IST
ಸ | Kannada Prabha

ಸಾರಾಂಶ

ಮಾಲವಿ ಜಲಾಶಯಕ್ಕೆ ನೀರು ತರುವ ಕೆಲಸ ಮಾಡಿ ಅಚ್ಚುಕಟ್ಟು ರೈತರ ಬದುಕನ್ನು ಸುಭದ್ರಗೊಳಿಸಿದ ಹೆಮ್ಮೆ ನನಗಿದೆ

ಹಗರಿಬೊಮ್ಮನಹಳ್ಳಿ: ಶಾಸಕನಿದ್ದ ಸಂದರ್ಭದಲ್ಲಿ 50 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಾಲವಿ ಜಲಾಶಯಕ್ಕೆ ನೀರು ತರುವ ಕೆಲಸ ಮಾಡಿ ಅಚ್ಚುಕಟ್ಟು ರೈತರ ಬದುಕನ್ನು ಸುಭದ್ರಗೊಳಿಸಿದ ಹೆಮ್ಮೆ ನನಗಿದೆ ಎಂದು ಎಂದು ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಭೀಮ ನಾಯ್ಕ ಹೇಳಿದರು.ತಾಲೂಕಿನ ತಂಬ್ರಹಳ್ಳಿಯ ವಿವಿದೊದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಹಾಗೂ ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್‌ನಿಂದ ನಡೆದ ಸಹಕಾರ ಸಪ್ತಾಹ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ತಂಬ್ರಹಳ್ಳಿ ಭಾಗಕ್ಕೆ ₹118 ಕೋಟಿ ಸಾಲ ನೀಡಲಾಗಿದೆ. ₹8 ಕೋಟಿ ಸಾಲವನ್ನು ಕೇವಲ ನಾಲ್ಕಾಣೆ ಬಡ್ಡಿ ಲೆಕ್ಕದಲ್ಲಿ ನೀಡಲಾಗಿದೆ. ತಂಬ್ರಹಳ್ಳಿ ಮತ್ತು ಬೆಣಿಕಲ್ಲು ಗ್ರಾಮದ ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ತಲಾ ₹15 ಲಕ್ಷ ಮೊತ್ತದ ಅನುದಾನ ನೀಡಲಾಗಿತ್ತು. ಶೀಘ್ರದಲ್ಲಿ ತಂಬ್ರಹಳ್ಳಿ, ಹಳೇ ಹಗರಿಬೊಮ್ಮನಹಳ್ಳಿಯಲ್ಲಿ ಬಿಡಿಸಿಸಿ ಬ್ಯಾಂಕ್ ನೂತನ ಶಾಖೆಗಳನ್ನು ತೆರೆಯಲಾಗುವುದು.

ಪ್ರತ್ಯೇಕ ಒಕ್ಕೂಟ: ವಿಜಯನಗರ ಜಿಲ್ಲೆಯಲ್ಲಿಯೇ 1.40 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 2 ಲಕ್ಷ ಲೀಟರ್ ಹಾಲಿನ ಗುರಿ ಹೊಂದಿದ್ದು, ಪ್ರತ್ಯೇಕ ಒಕ್ಕೂಟ ಮಾಡುವ ಚಿಂತನೆ ಹೊಂದಲಾಗಿದೆ. ರೈತಸ್ನೇಹಿಯಾಗಿ ಸಾಲ ತಿರುವಳಿಯಲ್ಲಿ ಶೇ.100 ಸಾಧನೆ ಮಾಡಿದೆ ಎಂದು ಭೀಮನಾಯ್ಕ ತಿಳಿಸಿದರು.

ತಂಬ್ರಹಳ್ಳಿ ಕೃಷಿ ಸಹಕಾರಿ ಸಂಘದ ಅಧ್ಯಕ್ಷ, ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸುರೇಶ ಯಳಕಪ್ಪನವರ ಮಾತನಾಡಿ, ಮೊದಲ ಬಾರಿಗೆ ಜಿಲ್ಲೆಯಲ್ಲೇ ಗೋಲ್ಡ್ ಲೋನ್ ಪ್ರಯೋಗದಲ್ಲಿ ಯಶಸ್ಸು ಪಡೆದಿರುತ್ತೇವೆ. ಕೇವಲ 6 ತಿಂಗಳಲ್ಲಿ ಬರೋಬ್ಬರಿ ₹1.5 ಕೋಟಿ ಮೊತ್ತದಷ್ಟು ಗೋಲ್ಡ್ ಲೋನ್ ಒಟ್ಟು 120ಕ್ಕೂ ಹೆಚ್ಚು ಜನರಿಗೆ ವಿತರಿಸಿದ್ದು, ಲೋನ್ ಪಡೆದವರಿಗೆ ನೆರವಾಗಿದೆ. ತಂಬ್ರಹಳ್ಳಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವಂತೆ ಸಹಕಾರಿ ಸಂಘ ಮೊದಲ ಬಾರಿಗೆ ಅತ್ಯಂತ ಜನ ವಿಶ್ವಾಸ ಪಡೆದು, ನಿಶ್ಚಿತ ಠೇವಣಿ ಹೊಂದಲಾಗಿದೆ. ಮಾಸಿಕ ₹20 ಲಕ್ಷಕ್ಕೂ ಹೆಚ್ಚು ಪಿಗ್ಮಿ ಸಂಗ್ರಹಣೆ ಗುರಿ ಸಾಧಿಸಲಾಗಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿದರು.

2024-25ರಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸೊಸೈಟಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಹಿತಿ ಮೇಟಿ ಕೊಟ್ರಪ್ಪ, ಈ.ಪ್ರಕಾಶ್ ಸೇರಿ 8 ವಿಶೇಷ ಸಾಧಕರನ್ನು ಸನ್ಮಾನಿಸಲಾಯಿತು. ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ, ರಾಬಕೋವಿ ನಿರ್ದೇಶಕರಾದ ಮರುಳಸಿದ್ದಪ್ಪ, ರತ್ನಮ್ಮ ಅಶೋಕ್, ತಂಬ್ರಹಳ್ಳಿ ವಿಎಸ್‌ಎಸ್‌ಎನ್ ಉಪಾಧ್ಯಕ್ಷೆ ಹನುಮಂತಮ್ಮ, ಪುರಸಭೆ ಅಧ್ಯಕ್ಷ ಮರಿರಾಮಪ್ಪ, ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಹನುಮೇಶ, ಲಕ್ಷ್ಮೀಬಾಯಿ ಪಾಂಡುನಾಯ್ಕ, ರೆಡ್ಡಿ ಶಾಂತಕುಮಾರ, ಗುರುಬಸವರಾಜ ಸೊನ್ನದ್, ಗಿರೀಶ್ ಗೌರಜ್ಜನವರ, ಹ್ಯಾಟಿ ಆನಂದರೆಡ್ಡಿ, ಬಿಡಿಸಿಸಿ ಕ್ಷೇತ್ರಾಧಿಕಾರಿಗಳಾದ ಪರಮಣ್ಣ ದೊರೆ, ಸುಮಂತ್ ಚಕ್ರಸಾಲಿ, ಮುಖ್ಯ ಕಾರ್ಯ ನಿರ್ವಾಹಕ ಬಾಚಿನಳ್ಳಿ ಬಸವರಾಜ ಇದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಅಕ್ಕಿ ಬಸವರಾಜ, ಹುಸೇನ್‌ಬಾಷ, ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯಕಾರ್ಯನಿರ್ವಾಹಕ ನಾಗರಾಜ ನಿರ್ವಹಿಸಿದರು.

PREV

Recommended Stories

ಕೈ ಸರ್ಕಾರಕ್ಕೆ ಎರಡೂವರೆ, ದುರಾಡಳಿತದ ಹೊರೆ : ಗ್ಯಾರಂಟಿ ಬಿಟ್ಟು ಬೇರೇನೂ ಕೊಟ್ಟಿಲ್ಲ
ರಿಯಾಯ್ತಿಯಿಂದ ಸಂಚಾರ ನಿಯಮ ಬಗ್ಗೆ ಪ್ರಯಾಣಿಕರ ಅಸಡ್ಡೆ