ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ : ಶಾಸಕ ಕಂದಕೂರು

KannadaprabhaNewsNetwork | Published : Aug 6, 2024 12:31 AM

ಸಾರಾಂಶ

ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯ ಯಾದಗಿರಿ ತಾಲೂಕಿನ ಯಡ್ಡಳ್ಳಿ (ಹೊನಗೇರಾ) ಮಧ್ಯೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ₹10 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ 110/11 ಕೆ.ವಿ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಗುರುಮಠಕಲ್ ಮತಕ್ಷೇತ್ರದಲ್ಲಿ ಕಳೆದ 6 ವರ್ಷಗಳಲ್ಲಿ ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು. ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯ ಯಾದಗಿರಿ ತಾಲೂಕಿನ ಯಡ್ಡಳ್ಳಿ (ಹೊನಗೇರಾ) ಮಧ್ಯೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ₹10 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ 110/11 ಕೆ.ವಿ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ರೈತರು ಕೃಷಿ ಪಂಪ್‌ಸೆಟ್‌ ಹಾಗೂ ವಿದ್ಯುತ್ ಅವಲಂಬಿಸಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಹಲವಾರು ವರ್ಷಗಳಿಂದ ಅವರಿಗೆ ಸೂಕ್ತ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂಬುದನ್ನು ಅರಿತು ಮಾಜಿ ಶಾಸಕ ದಿ. ನಾಗನಗೌಡ ಕಂದಕೂರ ಅವಧಿಯಲ್ಲಿ ಕ್ಷೇತ್ರಕ್ಕೆ 6 ವಿದ್ಯುತ್ ಉಪ ಕೇಂದ್ರಗಳನ್ನು ಮಂಜೂರು ಮಾಡಲಾಗಿದ್ದು ಈಗ ಅವು ಸಿದ್ಧವಾಗಿವೆ. ಇನ್ನು ಗ್ರಾಮೀಣ ಭಾಗದ ರೈತರಿಗೆ ವಿದ್ಯುತ್ ಸಮಸ್ಯೆ ದೂರವಾಗಲಿದೆ ಎಂದು ತಿಳಿಸಿದರು.

ಈ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್‌ಡಿಕೆ ಅವಧಿಯಲ್ಲಿ ರೈತರ ಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಿರಂತರ 10 ಗಂಟೆಗಲ ಕಾಲ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ, ಇಂದು 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಹತ್ತಿಕುಣಿ ಜಲಾಶಯಗಳು ಇದ್ದರೂ ಅವುಗಳ ನಿರ್ವಹಣೆಗೆ ಸರ್ಕಾರ ಸಕಾಲಕ್ಕೆ ಅನುದಾನ ಒದಗಿಸುತ್ತಿಲ್ಲ. ಅಲ್ಲದೇ ಸಿಬ್ಬಂದಿಗಳ ಕೊರತೆ ನನ್ನ ಗಮನದಲ್ಲಿದೆ. ಬರುವ ದಿನಗಳಲ್ಲಿ ಆ ಭಾಗದ ರೈತರ ಸಮಸ್ಯೆ ದೂರ ಮಾಡುತ್ತೇನೆ ಎಂದು ಹೇಳಿದರು.ಗಡಿ ಭಾಗದ ಗಾಜರಕೋಟ್ ಗ್ರಾಮದಲ್ಲಿರುವ ವಿದ್ಯುತ್ ಸರಬರಾಜು ಮಾಡುವ ಉಪಕೇಂದ್ರವನ್ನು ದಯವಿಟ್ಟು ಅಧಿಕಾರಿಗಳು ಮೇಲ್ದರ್ಜೆಗೆರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ, ಹಿರಿಯ ಅಧಿಕಾರಿಗಳಾದ ಗಿರಿಧರ ಕುಲಕರ್ಣಿ, ಚಂದ್ರಕಾಂತ ಪಾಟೀಲ್, ರಾಜೇಶ ಹಿಪ್ಪರಗಿ, ದಯಾನಂದ, ಬಸಂತಕುಮಾರ, ಗುತ್ತಿಗೆದಾರ ಪ್ರಕಾಶ ಹುಬ್ಬಳ್ಳಿ, ಸಂಜೀವಕುಮಾರ, ಬಂದಳ್ಳಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹೊನಗೇರಾ, ಗ್ರಾಪಂ ಅಧ್ಯಕ್ಷ ಅಧ್ಯಕ್ಷ ನಾಗಪ್ಪ ದೊಡ್ಡಮನಿ, ತಹಸಿಲ್ದಾರ ಸುರೇಶ ಅಂಕಲಗಿ, ತಾಪಂ ಅಧಿಕಾರಿ ಬಸವರಾಜ ಶರಬೈ, ಪಿಎಸ್‌ಐ ಹಣಮಂತ ಬಂಕಲಗಿ, ಸಂಗೀತಾ ಚವ್ಹಾಣ, ಮುಖಂಡರಾದ ಬೋಜಣ್ಣಗೌಡ ಯಡ್ಡಳ್ಳಿ, ಜಿ. ತಮ್ಮಣ್ಣ, ಮಲ್ಲರಡ್ಡಿಗೌಡ ಹತ್ತಿಕುಣಿ, ಸುಭಾಶ್ಚಂದ್ರ ಹೊನಗೇರಾ, ಸೋಮನಗೌಡ ಬೆಳಗೇರಾ, ರಾಮಣ್ಣ ಕೊಟಗೇರಾ ಇತರರಿದ್ದರು.

Share this article