ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಎಲ್ಲ ಪ್ರಯತ್ನ ಮಾಡಿದ್ದೆ

KannadaprabhaNewsNetwork |  
Published : Nov 13, 2024, 12:52 AM IST
 ಕಾಗವಾಡ ಪಟ್ಟಣದಲ್ಲಿ ನಡೆಯುತ್ತಿರುವ ವಕೀಲರ ಮುಷ್ಕರ ಸ್ಥಳಕ್ಕೆ ಮಾಜಿ ಸಚಿವ ಶ್ರೀಮಂತ ಪಾಟೀಲ ಭೇಟಿ ನೀಡಿ, ಬೆಂಬಲ ಸೂಚಿಸಿ ಮಾತನಾಡಿದರು. | Kannada Prabha

ಸಾರಾಂಶ

ವಕೀಲರ ಅನಿರ್ದಿಷ್ಠಾವಧಿ ಮುಷ್ಕರದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ನ್ಯಾಯಾಲಯ ಕಟ್ಟಡಕ್ಕೆ ಪ್ರಯತ್ನಿಸಿದ್ದೆ ಎಂದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಿಸಲು ನನ್ನ ಅವಧಿಯಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ದೆ. ಆಗಿನ ಎಪಿಎಂಸಿ ಸಚಿವ ಬಂಡೆಪ್ಪ ಕಾಶಂಪೂರ ಅನುಮತಿ ನೀಡಿದ್ದರು. ಆದರೆ ಕೆರೆಪಕ್ಕದ ಜಾಗ ಬಫರ್ ಝೋನ್ ಎಂದು ಪರಿಗಣಿಸಿ ನ್ಯಾಯಾಲಯ ನಿರ್ಮಾಣಕ್ಕೆ ಅಡ್ಡಿ ಉಂಟಾಗಿ ನನೆಗುದಿಗೆ ಬಿದ್ದಿದ್ದು, ಈಗಲೂ ನಾನು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿ, ಸಮಸ್ಯೆ ಪರಿಹಾರಕ್ಕೆ ಶ್ರಮಿಸುವುದಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಮಂಗಳವಾರ ಪಟ್ಟಣದಲ್ಲಿ ತಾಲೂಕು ವಕೀಲರ ಸಂಘದ ಸದಸ್ಯರು ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ, ಬೆಂಬಲ ಸೂಚಿಸಿ ಮಾತನಾಡಿದರು. ಕಾಗವಾಡ ಕ್ಷೇತ್ರದ ಬಹುಭಾಗ ಕಬ್ಬು ಬೆಳೆಯುವ ಪ್ರದೇಶವಾಗಿದ್ದು, ಇಲ್ಲಿ ಎಪಿಎಂಸಿಯ ಅವಶ್ಯಕತೆ ಅಷ್ಟೇನೂ ಇಲ್ಲ. ಆದ್ದರಿಂದ ಎಪಿಎಂಸಿ ಬಳಿ ಇರುವ ಹೆಚ್ಚುವರಿ ಜಾಗವನ್ನು ಸರ್ಕಾರ ನ್ಯಾಯಾಲಯ ಕಟ್ಟಡಕ್ಕೆ ನೀಡಬೇಕು. ಅದಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದರು.

ಮುಷ್ಕರ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತಾಲೂಕಿನ ಜುಗೂಳ, ಮಂಗಸೂಳಿ, ಉಗಾರ ಬಿಕೆ, ಕಾಗವಾಡ ಗ್ರಾಮ ಪಂಚಾಯತಿ ಸದಸ್ಯರು, ಪಿಕೆಪಿಎಸ್ ಸಂಘಗಳು, ದಲಿತ ಸಂಘಟನೆಗಳು, ರೈತ ಸೇವಾ ಸೊಸೈಟಿ, ಕಾರ್ಮಿಕ ಸಂಘಟನೆಗಳು, ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೆಂಬಲ ವ್ಯಕ್ತಪಡಿಸಿದವು.

ಮುಷ್ಕರ ನಿರತ ವಕೀಲರ ಸಂಘದ ಅಧ್ಯಕ್ಷ ಪಿ.ಎ. ಮಾನೆ, ಉಪಾಧ್ಯಕ್ಷ ಬಿ.ಎ. ಮಗದುಮ್ಮ,

ರೈತ ಮುಖಂಡ ದಾದಾಗೌಡ ಪಾಟೀಲ, ದಲಿತ ಮುಖಂಡ ಸಂಜಯ ತಳವಳಕರ, ಜುಗೂಳ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ, ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ಉಗಾರ ಬಿಕೆ ಪಿಕೆಪಿಎಸ್ ಅಧ್ಯಕ್ಷ ಶೀತಲ ಪಾಟೀಲ, ಜುಗೂಳ ಗ್ರಾಪಂ ಅಧ್ಯಕ್ಷ ಕಾಕಾಸಾಬ ಪಾಟೀಲ, ಕಾರ್ಮಿಕ ಸಂಘದ ಅಧ್ಯಕ್ಷ ಅರುಣ ಜೋಶಿ, ರೈತ ಸೇವಾ ಸಂಘಟನೆ ಅಧ್ಯಕ್ಷ ಶಾಂತಿನಾಥ ಕರವ, ಸೇರಿದಂತೆ ರಾಯಬಾಗ ವಕೀಲರ ಸಂಘದ ಸದಸ್ಯರು, ಮುಖಂಡರು, ವಕೀಲರಾದ ಎಂ.ಜಿ. ವಡ್ಡರ, ಪಿ.ಎ. ಕಿರಣಗಿ, ಎ.ಎ. ಪಾಟೀಲ, ಅಭಯಕುಮಾರ ಅಕಿವಾಟೆ, ಎಸ್.ಬಿ. ಪಾಟೀಲ, ವೈ.ಬಿ. ಯಡೂರೆ, ಎ.ಆರ್. ಪಾಟೀಲ, ಎಂ.ಎ. ಪಾಟೀಲ, ಎಂ.ಎಸ್. ಹೊನಕಾಂಬಳೆ, ಬಿ.ಎ. ಗಣೆ ಇತರರು ಇದ್ದರು.

PREV