ಮಂಡ್ಯದಲ್ಲಿ ಸಾಫ್ಟ್‌ವೇರ್ ಪಾರ್ಕ್ ಮಾಡೇ ಮಾಡ್ತೇನೆ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Mar 07, 2024, 01:48 AM IST
ಪಿ.ರವಿಕುಮಾರ್‌ | Kannada Prabha

ಸಾರಾಂಶ

ನಾನು ರಾಜಕೀಯ ಲಾಭ ಪಡೆಯುವುದಕ್ಕೆ ಹನಕೆರೆ ಅಂಡರ್‌ಪಾಸ್‌ಗೆ ಹೋರಾಟ ಮಾಡುತ್ತಿಲ್ಲ. ಮೊದಲು ಅಂಡರ್‌ ಪಾಸ್ ಮಾಡುವುದಾಗಿ ಹೇಳಿ ಈಗ ಮೇಲ್ಸೇತುವೆ ಮಾಡುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ನಾನು ಹೋರಾಟ ಮಾಡುತ್ತಿದ್ದೇನೆ. ರೈತರು ಮೇಲ್ಸೇತುವೆ ಮೇಲೆ ಹೇಗೆ ಓಡಾಡಲು ಸಾಧ್ಯ. ಸಂಸದೆ ಸುಮಲತಾ ಅವರಿಗೆ ಜನಪರವಾದ ಕಾಳಜಿ ಇದ್ದರೆ ಬಂದು ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಕೊಡಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಾಲಿ ಮೈಷುಗರ್ ಕಾರ್ಖಾನೆ ಇರುವ ಜಾಗದಲ್ಲೇ ಸಾಫ್ಟ್‌ವೇರ್ ಪಾರ್ಕ್ ಮಾಡೇ ಮಾಡುತ್ತೇನೆ. ಯಾರು ಬಂದು ಹೋರಾಟ ಮಾಡುತ್ತಾರೋ ಮಾಡಲಿ. ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡುವೆ ಪ್ರಶ್ನೆಯೇ ಇಲ್ಲ ಎಂದು ಸಂಸದೆ ಸುಮಲತಾ ಹೇಳಿಕೆಗೆ ಶಾಸಕ ಪಿ.ರವಿಕುಮಾರ್ ತಿರುಗೇಟು ನೀಡಿದರು.

ನನ್ನ ಅನುಕೂಲಕ್ಕೆ ಅಥವಾ ನನ್ನ ಸಂಬಂಧಿಕರಿಗೆ ಕೆಲಸ ಕೊಡಿಸುವುದಕ್ಕೆ ನಾನು ಸಾಫ್ಟ್‌ವೇರ್ ಪಾರ್ಕ್ ಮಾಡುತ್ತಿಲ್ಲ. ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗಬೇಕೆನ್ನುವುದು ನನ್ನ ಮಹತ್ವಾಕಾಂಕ್ಷೆ. ಅಂತೆಯೇ ಹೊಸ ಕಾರ್ಖಾನೆಯನ್ನೂ ಕಟ್ಟಿ ತೋರಿಸುತ್ತೇವೆ. ನಿಮ್ಮಿಂದ ಮಾಡಲು ಸಾಧ್ಯವಾಗದಿರುವುದನ್ನು ನಮ್ಮ ಸರ್ಕಾರ ಮಾಡಿ ತೋರಿಸುತ್ತದೆ. ನಮಗೆ ಕಾಲಾವಕಾಶ ಕೊಡಿ. ಅಭಿವೃದ್ಧಿಗೆ ಅಡ್ಡಗಾಲು ಹಾಕಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

ನಾನು ರಾಜಕೀಯ ಲಾಭ ಪಡೆಯುವುದಕ್ಕೆ ಹನಕೆರೆ ಅಂಡರ್‌ಪಾಸ್‌ಗೆ ಹೋರಾಟ ಮಾಡುತ್ತಿಲ್ಲ. ಮೊದಲು ಅಂಡರ್‌ ಪಾಸ್ ಮಾಡುವುದಾಗಿ ಹೇಳಿ ಈಗ ಮೇಲ್ಸೇತುವೆ ಮಾಡುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ನಾನು ಹೋರಾಟ ಮಾಡುತ್ತಿದ್ದೇನೆ. ರೈತರು ಮೇಲ್ಸೇತುವೆ ಮೇಲೆ ಹೇಗೆ ಓಡಾಡಲು ಸಾಧ್ಯ. ಸಂಸದೆ ಸುಮಲತಾ ಅವರಿಗೆ ಜನಪರವಾದ ಕಾಳಜಿ ಇದ್ದರೆ ಬಂದು ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಕೊಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಅವರು ಕರೆ ಮಾಡಿದರೆ ಕೇಂದ್ರ ಮಂತ್ರಿಗಳು ಪ್ರತಿಕ್ರಿಯಿಸುತ್ತಾರೆ. ನಾನೊಬ್ಬ ಸಣ್ಣ ಶಾಸಕ. ನನಗೆ ಯಾರು ಪ್ರತಿಕ್ರಿಯಿಸುತ್ತಾರೆ. ನಾಳೆ ರಾಮನಗರದ ಹೆದ್ದಾರಿ ಪ್ರಾಧಿಕಾರದ ಎದುರು ನನ್ನ ಹೋರಾಟ ಶುರುವಾಗಲಿದೆ. ಸುಮಲತಾ ಅವರೂ ಬಂದು ಕ್ರೆಡಿಟ್ ತೆಗೆದುಕೊಳ್ಳಲಿ ಎಂದು ನಯವಾಗಿಯೇ ಜರಿದರು.

ಶಾಸಕರ ಹೋರಾಟಕ್ಕೆ ಕರುನಾಡ ಸೇವಕರು ಸಂಘಟನೆ ಬೆಂಬಲ

ಮಂಡ್ಯ ತಾಲೂಕಿನ ಹನಕೆರೆ ಬಳಿ ಕೆಳ ಸೇತುವೆಗೆ ಆಗ್ರಹಿಸಿ ಮಾ.೭ರಂದು ಮಂಡ್ಯ ಶಾಸಕರು ನಡೆಸುವ ಉಪವಾಸ ಸತ್ಯಾಗ್ರಹಕ್ಕೆ ಕರುನಾಡ ಸೇವಕರು ಸಂಘಟನೆ ಬೆಂಬಲ ಘೋಷಿಸಿದೆ ಎಂದು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ. ನಾಗಣ್ಣಗೌಡ ತಿಳಿಸಿದರು.

ಬೆಂಗಳೂರು-ಮೈಸೂರು ಹೆದ್ದಾರಿಯ ಹನಕೆರೆ ಹಾಗೂ ಮಲ್ಲಯ್ಯನದೊಡ್ಡಿ ಗೇಟ್ ಬಳಿ ಕೆಳ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಪ್ರಾಧಿಕಾರದ ಕಚೇರಿ ಎದುರು ಶಾಸಕ ರವಿಕುಮಾರ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಳ ಸೇತುವೆಗಾಗಿ ಸ್ಥಳೀಯರು ಹೋರಾಟ ನಡೆಸಿದ್ದಾರೆ. ಶಾಸಕರು ಸಹ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೂ ಈವರೆವಿಗೂ ಯಾವುದೇ ಕೆಲಸ ಆಗಿಲ್ಲ ಎಂದು ದೂರಿದರು.

ಮೈಸೂರು-ಬೆಂಗಳೂರು ನಡುವಿನ ಹೆದ್ದಾರಿ ನಿರ್ಮಾಣದಿಂದಾಗಿ ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹೆದ್ದಾರಿ ಆರ್ಥಿಕತೆಯನ್ನೇ ಆಶ್ರಯಿಸಿಕೊಂಡಿದ್ದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳು ತಮ್ಮ ಆರ್ಥಿಕ ಮೂಲಾಧಾರ ಕಳೆದುಕೊಂಡಿವೆ. ಸ್ಥಳೀಯ ವ್ಯಾಪಾರ ನೆಲಕಚ್ಚಿದೆ. ಹೆದ್ದಾರಿ ಬದಿಯ ಭೂಮಿಯ ಮೌಲ್ಯ ಕುಸಿದಿದ್ದು, ಉದ್ಯೋಗ ನಷ್ಟದಿಂದ ಹೆದ್ದಾರಿಯಂಚಿನ ಯುವಕರು ಬೆಂಗಳೂರಿನತ್ತ ಗುಳೇ ಹೋಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹೆದ್ದಾರಿಯಲ್ಲಿ ಸಂಗ್ರಹವಾಗುವ ಟೋಲ್‌ನಲ್ಲಿ ರಾಜ್ಯಕ್ಕೂ ಪಾಲು ನೀಡಬೇಕು. ಹೆದ್ದಾರಿ ನಿರ್ಮಾಣಕ್ಕೆ ಕೇವಲ ಕೇಂದ್ರ ಸರ್ಕಾರ ಮಾತ್ರ ಹಣ ಹೂಡಿಕೆ ಮಾಡಿಲ್ಲ. ರಾಜ್ಯ ಸರ್ಕಾರದ ಪಾಲೂ ಇದೆ. ಹೀಗಾಗಿ ರಾಜ್ಯದ ಪಾಲನ್ನು ನೀಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಚಂದ್ರು, ಮುತ್ತಪ್ಪ, ಶೇಖರ್ ಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಕೆ: ಮುನಿಯಪ್ಪ
ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ