ಅಧಿಕಾರಿಗಳನ್ನು ಬೆದರಿಸುವವರ ವಿರುದ್ಧ ನಾನು ನಿಲ್ಲುವೆ: ಶಾಸಕ ನಾರಾಯಣಸ್ವಾಮಿ ಅಭಯ

KannadaprabhaNewsNetwork |  
Published : Jan 02, 2025, 12:32 AM IST
1ಕೆಬಿಪಿಟಿ.4.ಬಂಗಾರಪೇಟೆ ತಾಪಂನಲ್ಲಿ ನಡೆದ ನೌಕರ ಸಂಘದ ನೂತನ ಕ್ಯಾಲೆಂಡರ್ ಬಿಡುಗೆಡೆ ಸಮಾರಂಭದಲ್ಲಿ ಶಾಸಕ ನಾರಾಯಣಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಇತ್ತೀಚಿಗೆ ಒಬ್ಬ ತಹಸೀಲ್ದಾರರನ್ನು ಉತ್ತಮ ಕಾರ್ಯನಿರ್ವಹಣೆಗಾಗಿ ನೇಮಿಸಿದ್ದೆ. ಆದರೆ ಅವರು ಯಾವುದೇ ರೀತಿ ಸ್ಪಂದಿಸದ ಕಾರಣ, 24 ಗಂಟೆಗಳಲ್ಲಿ ಅವರನ್ನು ವರ್ಗಾವಣೆ ಮಾಡಿಸಿದ್ದೇನೆ. ನಾನು ಯಾರನ್ನೂ ದ್ವೇಷಿಸುವುದಿಲ್ಲ, ಸ್ವಲ್ಪ ಏರು ಧ್ವನಿಯಲ್ಲಿ ಮಾತನಾಡುತ್ತೇನೆ ಅಷ್ಟೇ, ಹಾಗಾಗಿ ಬಂಗಾರಪೇಟೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಇತ್ತೀಚೆಗೆ ಆರ್.ಟಿ.ಐ ಕಾರ್ಯಕರ್ತರು ಹಾಗೂ ಕೆಲವರು ದಲಿತ ಸಂಘಟನೆಗಳ ಹೆಸರು ಹೇಳಿಕೊಂಡು ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ, ಅಧಿಕಾರಿಗಳು ಯಾರೂ ಆತಂಕಪಡಬೇಡಿ, ನಾನು ನಿಮ್ಮ ಪರ ಇರುವವರೆಗೂ ನಿರ್ಭಯದಿಂದ ಕೆಲಸ ಮಾಡಿ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ದಲಿತ ಮುಖಂಡರು ಹಾಗೂ ಆರ್ ಟಿಐ ಕಾರ್ಯಕರ್ತರು ನಿಮಗೆ ಭಯ ಹುಟ್ಟಿಸಿದರೆ. ನೀವು ಯಾವುದೇ ಕಾರಣಕ್ಕೂ ಭಯಪಡಬೇಡಿ, ಅಧಿಕಾರಿಗಳು ಉತ್ತಮ ರೀತಿ ಕಾರ್ಯನಿರ್ವಹಿಸಿ, ನಿಮ್ಮ ರಕ್ಷಣೆಗಾಗಿ ನಾನು ನಿಲ್ಲುತ್ತೇನೆ ಎಂದು ಹೇಳಿದರು.

ಇತ್ತೀಚಿಗೆ ಒಬ್ಬ ತಹಸೀಲ್ದಾರರನ್ನು ಉತ್ತಮ ಕಾರ್ಯನಿರ್ವಹಣೆಗಾಗಿ ನೇಮಿಸಿದ್ದೆ. ಆದರೆ ಅವರು ಯಾವುದೇ ರೀತಿ ಸ್ಪಂದಿಸದ ಕಾರಣ, 24 ಗಂಟೆಗಳಲ್ಲಿ ಅವರನ್ನು ವರ್ಗಾವಣೆ ಮಾಡಿಸಿದ್ದೇನೆ. ನಾನು ಯಾರನ್ನೂ ದ್ವೇಷಿಸುವುದಿಲ್ಲ, ಸ್ವಲ್ಪ ಏರು ಧ್ವನಿಯಲ್ಲಿ ಮಾತನಾಡುತ್ತೇನೆ ಅಷ್ಟೇ, ಹಾಗಾಗಿ ಬಂಗಾರಪೇಟೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಕರ್ನಾಟಕ ನಗರ ಮೂಲ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ಮಂಡಳಿ ವತಿಯಿಂದ ಪಟ್ಟಣಕ್ಕೆ ಒಳಚರಂಡಿ ಕಾಮಗಾರಿ ಮಾಡಲು ಸುಮಾರು 200 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ನಗರವನ್ನು ಸ್ವಚ್ಛವಾಗಿಡಲು ಸಹಕಾರವಾಗುತ್ತದೆ ಹಾಗೂ ಪಟ್ಟಣದ ಗಲ್ಲಿ ಗಲ್ಲಿಗಳಲ್ಲೂ ಚಿಕನ್ ಹಾಗೂ ಮಟನ್ ಅಂಗಡಿಗಳು ತೆರೆದಿರುವುದರಿಂದ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ದೇಶಿಹಳ್ಳಿಯ ಸರ್ವೇ ನಂಬರ್15ರಲ್ಲಿ ಚಿಕನ್, ಮಟನ್, ಮೀನು ಅಂಗಡಿಗಳು ಒಂದೇ ಕಡೆ ಸಿಗುವಂತೆ ನೂತನವಾಗಿ ಮಾರುಕಟ್ಟೆಯನ್ನು ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಪರಾಧ ತಡೆಗಟ್ಟಲು ಸಿಸಿ ಕ್ಯಾಮೆರಾ ಅಳವಡಿಸಲಾಗುವುದು, ಪಟ್ಟಣ ವ್ಯಾಪ್ತಿಯ ಕೋಲಾರ- ಬಂಗಾರಪೇಟೆ ಮುಖ್ಯರಸ್ತೆ ಹಾಗೂ ಬಂಗಾರಪೇಟೆ- ಕೆಜಿಎಫ್ ಮುಖ್ಯರಸ್ತೆಯಲ್ಲಿ ಸಿಗ್ನಲ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪಟ್ಟಣವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಪಣತೊಟ್ಟಿದ್ದೇನೆ ಎಂದು ತಿಳಿಸಿದರು.

ತಾಪಂ ಇಒ ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಮೂರ್ತಿ, ಸಿಡಿಪಿಒ ಮುನಿರಾಜು, ನೌಕರ ಸಂಘದ ಅಧ್ಯಕ್ಷ ರವಿ, ಶಶಿಕಲಾ, ನಾಗಾನಂದ ಕೆಂಪರಾಜ್, ಶಂಕರಪ್ಪ, ಸುಜಾತಾ, ಪಿಡಿಒ ವೇಣು, ಚಿತ್ರ, ಭಾಸ್ಕರ್, ವಾಣಿ, ಮಧು, ಇನ್ನೂ ಮೊದಲಾದವರು ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌