ಮೈಮುಲ್ ಅಧ್ಯಕ್ಷರಾಗಿ ಈರೇಗೌಡ ಅವಿರೋಧ ಆಯ್ಕೆ

KannadaprabhaNewsNetwork |  
Published : Oct 24, 2025, 01:00 AM IST
8 | Kannada Prabha

ಸಾರಾಂಶ

ಪೂರ್ವನಿಗದಿಯ ಒಪ್ಪಂದದಂತೆ ಎರಡನೇ ಅವಧಿ, ಈರೇಗೌಡ ಅವರಿಗೆ ಅವಕಾಶ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ನೂತನ ಅಧ್ಯಕ್ಷರಾಗಿ ಈರೇಗೌಡ ಅವಿರೋಧವಾಗಿ ಆಯ್ಕೆಯಾದರು.ಪೂರ್ವನಿಗದಿಯ ಒಪ್ಪಂದದಂತೆ ಎರಡನೇ ಅವಧಿಯನ್ನು ಈರೇಗೌಡ ಅವರಿಗೆ ಅವಕಾಶ ನೀಡಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಅಣತಿಯಂತೆ ಸದಸ್ಯರು ಅವಿರೋಧ ಆಯ್ಕೆಗೆ ಸಹಕರಿಸಿದರು.ಚುನಾವಣಾಧಿಕಾರಿ ಶ್ರೀಧರ್ ನಿಯಮದಂತೆ ಗುರುವಾರ ಬೆಳಗ್ಗೆ 10.30ಕ್ಕೆ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದರು. ಈ ವೇಳೆ ಈರೇಗೌಡ ಅವರೊಬ್ಬರ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆವರೆಗೂ ನಾಮಪತ್ರ ಸಲ್ಲಿಕೆ ಅವಕಾಶ ನೀಡಲಾಗಿತ್ತಾದರೂ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಬಳಿಕ ಚುನಾವಣಾಧಿಕಾರಿಗಳು ಈರೇಗೌಡರ ನಾಮಪತ್ರ ಪುರಸ್ಕರಿಸಿ, ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಈ ವೇಳೆ ಎಲ್ಲಾ ನಿರ್ದೇಶಕರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.ಬಳಿಕ ಈರೇಗೌಡ ಮಾತನಾಡಿ, ನನ್ನ ಆಯ್ಕೆಗೆ ಕಾರಣರಾದ ಸಿಎಂ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ‌‌ರಾದ ಅನಿಲ್ ಚಿಕ್ಕಮಾದು, ಜಿ.ಟಿ. ದೇವೇಗೌಡ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.ಸಹಕಾರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಎಚ್.ಡಿ. ಕೋಟೆ ತಾಲೂಕಿಗೆ ಅಧ್ಯಕ್ಷರಾಗುವ ಅವಕಾಶ ನನಗೆ ಸಿಕ್ಕ ಖುಷಿಯಿದೆ‌. ಅತ್ಯಂತ ಹಿಂದುಳಿದ ತಾಲೂಕಾದ ಕಾರಣಕ್ಕಾಗಿ ತಾಲೂಕಿನಲ್ಲಿ ಹೈನುಗಾರಿಕೆ ಬೆಳೆದಿರಲಿಲ್ಲ. 19 ಸಂಘಗಳಿದ್ದ ಸಂಘಗಳ‌ಸಂಖ್ಯೆ ಈಗ 186ಕ್ಕೆ ಹೆಚ್ಚಳವಾಗಿದೆ. ನಾಲ್ಕನೇ ಬಾರಿ ನಿರ್ದೇಶಕನಾಗಿ ಅಧ್ಯಕ್ಷನಾಗಿರುವ ಖುಷಿ ನನಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೈನೋದ್ಯಮ ಬೆಳೆಸಲು ಶ್ರಮಿಸುತ್ತೇನೆ. ಹಿಂದುಳಿದ ಸಮುದಾಯ ಹೆಚ್ಚು ಹೈನೋದ್ಯಮಕ್ಕೆ ಬರಬೇಕಿದೆ ಎಂದು ಅವರು ಹೇಳಿದರು.ರೈತನ ಮಗನಾಗಿ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯವನ್ನು ನಿರ್ದೇಶಕರೆಲ್ಲರ ಸಹಕಾರದಿಂದ ಕಲ್ಪಿಸಲು ಬದ್ಧನಾಗಿದ್ದೇನೆ. ಮೈಮುಲ್ ಪನ್ನೀರ್ ಘಟಕ ಹಾಗೂ ಹಾಲು ಶೇಖರಣಾ ಘಟಕ ಸ್ಥಾಪನೆ ಪ್ರಕ್ರಿಯೆಯಲ್ಲಿದೆ. ಇದನ್ನು ನನ್ನ ಅವಧಿಯಲ್ಲಿ ಉದ್ಘಾಟಿಸುವವರೆಗೂ ಹಿಂದುಳಿದ ತಾಲೂಕಿನಿಂದ ಬಂದ ತಮಗೆ ಅವಕಾಶ ನೀಡಿ ಎಂದು ಮುಖ್ಯಮಂತ್ರಿ ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.ಮೈಮುಲ್ ನಿರ್ದೆಶಕರಾದ ಎ.ಟಿ. ಸೋಮಶೇಖರ, ಕೆ.ಜಿ. ಮಹೇಶ್, ಕೆ. ಉಮಾಶಂಕರ್, ಸಿ. ಓಂಪ್ರಕಾಶ್, ಪಿ.ಎಂ. ಪ್ರಸನ್ನ, ಆರ್‌. ಚೆಲುವರಾಜು, ಕೆ.ಎಸ್. ಕುಮಾರ್, ದಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ. ಗುರುಸ್ವಾಮಿ, ಬಿ.ಎ. ಪ್ರಕಾಶ್, ಎ.ಬಿ. ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್ ಮೊದಲಾದವರು ಇದ್ದರು. ಇದೇ ವೇಳೆ ಜಿಪಂ ಮಾಜಿ ಸದಸ್ಯ ಮಾದೇಗೌಡ ಸೇರಿ ಅನೇಕರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.---- ಬಾಕ್ಸ್-- -- ಐದು ತಿಂಗಳ ಅವಧಿ--ಈರೇಗೌಡರು ಮೈಸೂರು ಜಿಲ್ಲೆಯ ಹಿಂದುಳಿದ ಎಚ್.ಡಿ. ಕೋಟೆ ತಾಲೂಕಿನಿಂದ ಆಯ್ಕೆಯಾದ ಪ್ರಥಮ ಅಧ್ಯಕ್ಷರಾಗಿದ್ದು, ಮಾರ್ಚ್ ಗೆ ಇವರ ಅವಧಿ ಪೂರ್ಣಗೊಳ್ಳಲಿದೆ. ಈ ಕುರಿತು ಪ್ರತಿಕ್ರಯಿಸಿದ ಅವರು, ಚುನಾವಣೆ ಸಮೀಪ ಇರುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿಗೆ ದುಡಿಯುತ್ತೇನೆ. ನಾನು ದುಡಿದರೆ ಐದನೇ ಬಾರಿಯೂ ಆಯ್ಕೆ ಮಾಡುತ್ತಾರೆ ಇಲ್ಲವಾದರೆ ಇಲ್ಲ ಎಂದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ