ಕನ್ನಡಪ್ರಭ ವಾರ್ತೆ ರಾಯಚೂರುಬೆಂಗಳೂರಿನ ವಿಕಾಸಸೌಧದಲ್ಲಿ ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವುದರ ಕುರಿತು ಹಲವಾರು ತೀರ್ಮಾನಗಳನ್ನು ಗುರುವಾರ ಕೈಗೊಳ್ಳಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ, ಐಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಬರುವ ಮುಖ್ಯ, ಎಡ ಮತ್ತು ಬಲದಂಡೆ ಕಾಲುವೆಗಳು ಹಾಗೂ ಇತರೆ ಕೆಲಸ-ಕಾರ್ಯಗಳಿಗೆ ನೀರು ಹರಿಸುವುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.ಸಭೆಯಲ್ಲಿ ತುಂಗಭದ್ರಾ ಜಲಾಶಯ ಅಣೆಕಟ್ಟು ಪ್ರದೇಶದ ಎರಡನೇ ಬೆಳೆಗಾಗಿ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ. ಇದೇ ಡಿಸೆಂಬರ್ ಪೂರ್ಣ ಅವಧಿಯವರೆಗೆ ಕಾಲುವೆಗಳಿಗೆ 2500 ಕ್ಯೂಸೆಕ್, ಅದೇ ರೀತಿ 2025 ಜ.1 ರಿಂದ ಮಾ.31, 2025ರ ವರೆಗೆ ಸುಮಾರು 90 ದಿನಗಳ ಕಾಲ 3850 ಕ್ಯೂಸೆಕ್ ನೀರು ಹರಿಸಲು ನಿರ್ಧರಿಸಲಾಯಿತು.ನಿಗದಿತ ದಿನಾಂಕಗಳಂದು ಎಡದಂಡೆ ಕಾಲುವೆಗಳಲ್ಲಿ ನೀರು ಬಿಡಲಾಗುವುದು. 97 ಟಿಎಂಸಿ ತುಂಗಭದ್ರ ಜಲಾಶಯದಲ್ಲಿ ನೀರು ಲಭ್ಯವಿದ್ದು, ನೀರು ಬಿಡಲು ತೀರ್ಮಾನಿಸಲಾಗಿದೆ. ಮಾನ್ವಿ, ಸಿರವಾರ, ರಾಯಚೂರು ಕೆಳಭಾಗಕ್ಕೆ ನೀರು ಸಮರ್ಪಕವಾಗಿ ಸರಬರಾಜು ಮಾಡಲು ಎಲ್ಲಾ ಮೆಲ್ಭಾಗದ ಮೈಲ್ ಗಳಲ್ಲಿ ಅಧಿಕಾರಿಗಳು ನೀರಿನ ಪ್ರಮಾಣವನ್ನು ಕಾಯ್ದಿರಿಸಲು ಪ್ರಯತ್ನಿಸಬೇಕೆಂದು ತಿಳಿಸಲಾಗಿದೆ.ಸಭೆಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್ ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್, ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಬಸನಗೌಡ ತುರ್ವಿಹಾಳ, ಡಾ. ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಪರಿಷತ್ ಸದಸ್ಯರಾದ ಎ. ವಸಂತ ಕುಮಾರ, ಬಸನಗೌಡ ಬಾದರ್ಲಿ, ಎಚ್.ಆರ್. ಗವಿಯಪ್ಪ, ಶರಣಗೌಡ ಬಯ್ಯಾಪುರ, ಶಾಸಕ ನಾಗರಾಜ ಸೇರಿ ಸೇರಿ ವಿವಿಧ ರೈತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಅಧಿಕಾರಿ, ಸಿಬ್ಬಂದಿ ಹಾಗೂ ರೈತರು ಪಾಲ್ಗೊಂಡಿದ್ದರು.ನೀರು ಒದಗಿಸುವ ಕಾಲಾವಧಿತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ 2024 ಡಿ.1 ರಿಂದ 15 ವರೆಗೆ 1500 ಕ್ಯುಸೆಕ್, 16 ರಿಂದ 31 ವರೆಗೆ 2,000 ಕ್ಯುಸೆಕ್, 2025 ಜ.1 ರಿಂದ ಜ.31 ವರೆಗೆ, ಫೆ.1 ರಿಂದ ಫೆ.28 ವರೆಗೆ, ಮಾ.1 ರಿಂದ ಮಾ.31 ವರೆಗೆ ತಲಾ 3,800 ಕ್ಯುಸೆಕ್ ನೀರನ್ನು ಹರಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ 2025 ಏ.1 ರಿಂದ ಏ.10 ವರೆಗೆ 1,650 ಕ್ಯುಸೆಕ್ ಇಲ್ಲವೇ ಕಾಲುವೆಯಲ್ಲಿ ನೀರಿನ ಲಭ್ಯತೆಗನುಸಾರ ನೀರು ಬಿಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.