ಉಡುಪಿ: ಯಕ್ಷಗಾನ ಒಂದು ದೊಡ್ಡ ಜ್ಞಾನ ಭಂಡಾರವಿದ್ದಂತೆ. ಅದು ಸಮಾಜಕ್ಕೆ ಸಂಸ್ಕಾರವನ್ನು ಕೊಡುವ ಕಲೆ. ಈ ಕಲೆಯನ್ನು ಮಹಿಳೆಯೊಬ್ಬಳು ಕಲಿತರೆ ತನ್ನ ಕುಟುಂಬಕ್ಕೆ, ಆ ಮೂಲಕ ಸಮಾಜಕ್ಕೆ ಉತ್ತಮ ಸಂಸ್ಕಾರದ ದಾರಿಯನ್ನು ತೋರಬಲ್ಲಳು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಇಲ್ಲಿನ ಸಾಲಿಗ್ರಾಮದ ಗುಂಡ್ಮಿ ಸದಾನಂದ ರಂಗ ಮಂಟಪದಲ್ಲಿ ಕಲಾಪೀಠ ಕೋಟ ಸಂಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಪ್ರಾಯೋಜಕತ್ವದಲ್ಲಿ ಕೆ. ನರಸಿಂಹ ತುಂಗ ಅವರ ನಿರ್ದೇಶನದಲ್ಲಿ ಮಹಿಳಾ ಕಲಾವಿದರ ಯಕ್ಷಗಾನ ‘ಶೂರ್ಪನಖಾ ಮಾನಭಂಗ’ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಇಂದಿನ ಶಿಕ್ಷಣದ ಜೊತೆಗೆ ಯಕ್ಷಗಾನವನ್ನು ಕಲಿಸಿದರೆ ಅವರ ಶೈಕ್ಷಣಿಕ ಪ್ರಗತಿಗೂ ಪೂರಕವಾಗುತ್ತಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ತಂದೆ ತಾಯಿ ಯಾವುದೇ ಅಳುಕಿಲ್ಲದೆ ಮಕ್ಕಳಿಗೆ ಯಕ್ಷಗಾನದಂತಹ ಕಲೆಗಳನ್ನು ಕಲಿಯಲು ಪ್ರೋತ್ಸಾಹ ನೀಡಬೇಕು ಎಂದರು. ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ ಆಗಮಿಸಿದ್ದರು, ಭಾಗವತ ಗಣೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕಲಾ ನಿರ್ದೇಶಕ ಕೆ. ನರಸಿಂಹ ತುಂಗ ಸ್ವಾಗತಿಸಿದರು. ಈ ಸಂದರ್ಭ ಮಹಿಳೆಯರಿಂದ ಪ್ರದರ್ಶನಗೊಂಡ ‘ಶೂರ್ಪನಖಾ ಮಾನ ಭಂಗ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಬಿಲ್ಲಾಡಿ ಗಣೇಶ್ ಆಚಾರ್ಯ, ಗಣೇಶ ಶೆಣೈ, ವಾಗ್ವಿಲಾಸ ಭಟ್ಟ ಹಾಗೂ ಮುಮ್ಮೇಳದಲ್ಲಿ ವೃಂದಾ, ಅನುಷಾ, ಮಾನ್ಯ, ನಮನ, ಜಾಹ್ನವಿ, ಸುಜಾತಾ, ಮೇಧಾ, ಧನುಶ್ರೀ, ಇಂಚರ, ಆರಭಿ, ಈಶಾನಿ, ತನಿಷಾ ಪ್ರದರ್ಶನ ನೀಡಿದರು.