ರಾಮನಗರ: ಪೌರಾಡಳಿತ ಸಚಿವ ಬಾಲಕೃಷ್ಣ ಅವರಿಗೆ ತಾಕತ್ತಿದ್ದರೆ ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಪತ್ನಿಯ ಫೋನ್ ಟ್ಯಾಪಿಂಗ್ ಮಾಡಿಸಿರುವ ದಾಖಲೆ ಬಿಡುಗಡೆ ಮಾಡಲಿ ಎಂದು ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.
ಕುಮಾರಸ್ವಾಮಿ ಮನೆಯಲ್ಲಿ ಅನ್ನ ತಿಂದ ನಿಯತ್ತಿಲ್ಲದ ವ್ಯಕ್ತಿಗಳು ಹೇಳಿದ್ದನ್ನು ಕೇಳಿಕೊಂಡು ಬಾಲಕೃಷ್ಣ ವರ್ಗಾವಣೆ ವಿಚಾರವಾಗಿ ಫೋನ್ ಟ್ಯಾಪಿಂಗ್ ಮಾಡಿಸಿದ್ದರೆಂದು ಆರೋಪಿಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಅವರೇ ಉತ್ತರ ಕೊಟ್ಟಿದ್ದಾರೆ. ಅವರ ಬಳಿ ಫೋನ್ ಟ್ಯಾಪಿಂಗ್ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಾಲಕೃಷ್ಣ ಮತ್ತು ನಾನು ಅವರ ಜೊತೆಯಲ್ಲಿ ಕೆಲಸ ಮಾಡಿದವರು. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ತಲೆ ಕೆಡಿಸಿಕೊಂಡು ಕುಮಾರಸ್ವಾಮಿ ಎಂದೂ ತಮ್ಮ ಸಹಿಯನ್ನು ಮಾರಿಕೊಂಡವರಲ್ಲ. ನಿಮ್ಮ ಹಾಗೆ ಸಹಿ ಮಾಡುವುದಕ್ಕೂ ಮುನ್ನ ಅಣ್ಣನನ್ನು ನೋಡು, ತಮ್ಮನನ್ನು ನೋಡು ಆಮೇಲೆ ಸಹಿ ಮಾಡುತ್ತೇನೆಂದು ಸಹಿ ಮಾರಾಟಕ್ಕೆ ಇಟ್ಟಿರಲಿಲ್ಲ ಎಂದು ಟೀಕಿಸಿದರು.ಜೆಡಿಎಸ್ನಲ್ಲಿದ್ದಾಗ ವಸೂಲಿ ರಾಜ:
ಬಿಡದಿಯಲ್ಲಿ ಕುಮಾರಸ್ವಾಮಿ ದಲಿತರ ಜಮೀನು ಕಬಳಿಸಿದ್ದಾರೆಂದು ಹೇಳುತ್ತಿದ್ದಾನೆ. ಹುಲಿಕಟ್ಟೆಯಲ್ಲಿ ನಿನ್ನ ತಾತನ ಆಸ್ತಿ ಎಷ್ಟಿದೆ ಅಂತ ಪಹಣಿ ತೋರಿಸು ನೋಡೋಣ. ಹುಲಿಕಟ್ಟೆಯಲ್ಲಿ ಅರಣ್ಯ ಜಾಗ ಕಬಳಿಸಿರುವ ನಿನಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಎ,ಮಂಜುನಾಥ್, ಲೋಕೋಪಯೋಗಿ ಇಲಾಖೆಯ 600 ಕೋಟಿ ರುಪಾಯಿ ಹಗರಣದಲ್ಲಿ ಗುತ್ತಿಗೆದಾರರನ್ನು ಬಲಿ ಪಶು ಮಾಡಲಾಯಿತು. ಎಂಜಿನಿಯರ್ಗಳು ಆತ್ಮಹತ್ಯೆ ಮಾಡಿಕೊಂಡರು, ತಪ್ಪಿತಸ್ಥರು ಜೈಲಿಗೆ ಹೋದರು, ಆಸ್ತಿ ಮುಟ್ಟುಗೋಲಾಯಿತು. ಈಗಿನ ಮುಖ್ಯಮಂತ್ರಿಗಳ ಸೋದರ ಸಂಬಂಧಿ ಎಕ್ಸಿಕ್ಯುಟಿವ್ ಎಂಜಿನಿಯರ್ ಗಂಗಾಧರ್ ಪರಿಸ್ಥಿತಿ ಏನಾಗಿದೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಆರ್ಎಸ್ಎಸ್ನ ಟೀಕಿಸಿದ್ದರೆಂದು ಬಾಲಕೃಷ್ಣ ಹೇಳುತ್ತಾರೆ. ನೀನು ಜೆಡಿಎಸ್ನಲ್ಲಿದ್ದಾಗ ಕಾಂಗ್ರೆಸ್ ನಾಯಕರನ್ನು ಕೆಟ್ಟ ಶಬ್ದಗಳಿಂದ ಟೀಕೆ ಮಾಡಿರಲಿಲ್ವಾ. ಈಗ ನೀನು ಅವರೊಂದಿಗೆ ಸೇರಿಕೊಂಡು ಏನಾಗಿದ್ದೀಯಾ. ನೀನು ರೌಡಿಶೀಟರ್ಗಳನ್ನು ಜೊತೆಯಲ್ಲಿಟ್ಟುಕೊಂಡು ಬೆದರಿಸಿ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರುವ ಗಿರಾಕಿ ಎಂದು ಮಂಜುನಾಥ್ ಟೀಕಿಸಿದರು.
ಬಾಕ್ಸ್...........
ರಾಮನಗರ: ಮಂತ್ರಿ ಸ್ಥಾನಕ್ಕೆ ಗೌರವ ಕೊಡುತ್ತೇವೆ. ನೀನು ಆ ಮಂತ್ರಿ ಸ್ಥಾನದ ಗೌರವ ಕಾಪಾಡು. ಇಲ್ಲ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಕುಟುಂಬದ ವಿರುದ್ಧ ಉಡಾಫೆಯಾಗಿಯೇ ಮಾತನಾಡುತ್ತೇನೆ ಎನ್ನುವುದಾದರೆ ಪ್ರದೀಪ್ ಈಶ್ವರ್ಗೆ ಆದ ಗತಿ ನಿನಗೂ ಆಗುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.
ಮಂತ್ರಿ ಆಗಿರುವುದೇ ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬದವರನ್ನು ಬಯ್ಯಲು, ಆ ರೀತಿ ಮಾಡಿದರೆ ಕನಕಪುರದವರು ಕಿರೀಟ ಕೊಡುತ್ತಾರೆಂದು ಭಾವಿಸಿದ್ದರೆ ಅದು ಮೂರ್ಖತನ. ಆ ಭ್ರಮೆಯಿಂದ ಹೊರಗೆ ಬರದಿದ್ದರೆ ಕಾರ್ಯಕರ್ತರೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಾಲಕೃಷ್ಣರಿಗೆ ಮಂಜುನಾಥ್ ಎಚ್ಚರಿಸಿದರು.
ರಾಮನಗರದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.