ಪೊಲೀಸ್ ಇನ್ಸ್ಪೆಕ್ಟರ್ ಗಂಗಾಧರ್ ಕಳವಳ । ಬೀದಿ ನಾಟಕ ಮೂಲಕ ಪರಿಸರ ಜಾಗೃತಿ
ಕನ್ನಡಪ್ರಭ ವಾರ್ತೆ ಆಲೂರುಪರಿಸರ ಹಾಗೂ ಪ್ರಕೃತಿಯನ್ನು ರಕ್ಷಿಸಲು ಮುಂದಾಗದಿದ್ದರೆ ಭವಿಷ್ಯದಲ್ಲಿ ಮನುಷ್ಯ ಮತ್ತು ಪ್ರಾಣಿ ಸಂಕುಲದ ಜೀವಕ್ಕೆ ಅಪಾಯ ಎದುರಾಗಲಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಗಂಗಾಧರ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಆಟೋ ನಿಲ್ದಾಣದ ಎದುರು ವಿಶ್ವೇಶ್ವರಯ್ಯ ಐಟಿಐ ಮತ್ತು ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆ ವತಿಯಿಂದ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವ ಆಹಾರ ತಯಾರಿಕೆ ಮತ್ತು ಇನ್ನಿತರೆ ಉಪಯೋಗಗಳಿಗೆ ಕಟ್ಟಿಗೆಯನ್ನು ಬಳಸುವ ಕಾಲದಲ್ಲಿ ಒಂದು ಮರ ಕಡಿಯುವ ಮುನ್ನ ಹತ್ತಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದರು. ಕಾಲ ಬದಲಾದಂತೆ ನಾಡು ಕಾಂಕ್ರೀಟ್ ಆಗುತ್ತಿದೆ. ಪಟ್ಟಣದ ಹತ್ತಾರು ಕಿ.ಮೀ. ಸುತ್ತಳತೆಯಲ್ಲಿ ಕೃಷಿ ಜಮೀನನ್ನು ಪರಿವರ್ತಿಸಿ ನಿವೇಶನ ಮಾಡುತ್ತಿರುವುದರಿಂದ ಭವಿಷ್ಯದಲ್ಲಿ ಪರಿಸರ ಕಲ್ಮಶವಾಗುವ ಜತೆಗೆ ಆಹಾರ ಕೊರತೆ ಎದುರಿಸಬೇಕಾಗುತ್ತದೆ. ಭೂಮಿ ಮೇಲೆ ಖಾಲಿ ಇರುವ ಜಾಗಕ್ಕೆಲ್ಲ ಗಿಡಗಳನ್ನು ನೆಟ್ಟು ಪೋಷಿಸಲು ಮುಂದಾಗಬೇಕು ಎಂದು ಹೇಳಿದರು.ಸಬ್ ಇನ್ಸ್ಪೆಕ್ಟರ್ ಜನಬಾಯಿ ಕಡಪಟ್ಟಿ ಮಾತನಾಡಿ, ‘ವರ್ಷಗಳು ಕಳೆದಂತೆ ಬಿಸಿಲಿನ ತಾಪದಿಂದ ಭೂಮಿ ತಾಪಮಾನ ಹೆಚ್ಚಾಗುತ್ತಿದೆ. ತಂಪಾದ ವಾತಾವರಣದಲ್ಲಿ ಬದುಕಬೇಕಾದರೆ ಗಿಡಮರಗಳ ಮದ್ಯದಲ್ಲಿ ನಾವು ಬದುಕಬೇಕು. ನಾವು ಆಚರಿಸುವ ಹಬ್ಬ, ಇನ್ನಿತರೆ ಶುಭ ದಿನಗಳ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲು ಮುಂದಾಗಬೇಕು. ಇಲ್ಲದಿದ್ದರೆ ನೆಲದಲ್ಲಿ ಜಲವಿಲ್ಲದೆ ನರಳುವ ಕಾಲ ದೂರವಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಪ್ರಾಂಶುಪಾಲ ಎಚ್.ವಿ.ನಾಗಭೂಷಣ್, ಮುಖ್ಯೋಪಾಧ್ಯಾಯಿನಿ ಪೂರ್ಣಿಮ ಅವರು ಶಿಕ್ಷಣ, ಪೊಲೀಸ್ ಇಲಾಖೆಗೆ ಗಿಡಗಳನ್ನು ವಿತರಿಸಿದರು. ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಪರಿಸರ ದಿನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.ಈ ವೇಳೆ ಶಾಲೆಯ ಶಿಕ್ಷಕರು, ಪೊಲೀಸ್ ಅಧಿಕಾರಿಗಳು, ಶಾಲೆಯ ಸಿಬ್ಬಂದಿ, ಇತರರು ಇದ್ದರು.