ಕನ್ನಡಪ್ರಭ ವಾರ್ತೆ ಜಮಖಂಡಿ
ಹಿಂದೂಗಳು ಸಂಘಟಿತರಾಗಬೇಕು, ಇಲ್ಲವಾದಲ್ಲಿ ಉಳಿಗಾಲವಿಲ್ಲ ಎಂದು ಅಂತಾರಾಷ್ಟ್ರೀಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ.ಪ್ರವೀಣಭಾಯ್ ತೊಗಾಡಿಯಾ ಹೇಳಿದರು.ನಗರದ ಎಸ್ಆರ್ಎ ಕ್ಲಬ್ನಲ್ಲಿ ಏರ್ಪಡಿಸಿದ್ದ ಹಿಂದೂ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೂಗಳ ಸಂಘಟನೆಗಾಗಿ ದೇಶ ಸುತ್ತುತ್ತಿರುವುದಾಗಿ ತಿಳಿಸಿದ ಅವರು, 5 ನಿಯಮಗಳನ್ನು ಪ್ರತಿಯೊಬ್ಬ ಹಿಂದೂ ಪಾಲಿಸಬೇಕು. ಹಿಂದೂಗಳಿಂದ ಖರೀದಿ, ಹಿಂದೂಗಳಿಗೆ ನೌಕರಿ, ಎರಡಕ್ಕೂ ಹೆಚ್ಚು ಮಕ್ಕಳನ್ನು ಪಡೆಯುವುದು, ಹಿಂದೂ ಪರ ಕಾನೂನು ತರುವುದು, ಹಿಂದೂಗಳು ಸುರಕ್ಷಿತ, ಸಮೃದ್ಧ, ಸನ್ಮಾನದಿಂದ ಬದುಕಲು ಯೋಜನೆ ರೂಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಹಿಂದೂಗಳು ಅಲ್ಪಸಂಖ್ಯಾತರಾದರೇ ಉಳಿಗಾಲವಿಲ್ಲ. ವಿಶ್ವದಲ್ಲಿ ನೇಪಾಳ ಮತ್ತು ಭಾರತ ಎರಡೇ ದೇಶಗಳು ಹಿಂದೂ ಬಾಹುಳ್ಯ ಹೊಂದಿವೆ. ಹಿಂದೂಗಳ ನಾಡಾಗಿದ್ದ ಅಪ್ಘಾನಿಸ್ತಾನ, ಪಾಕಿಸ್ತಾನಗಳಲ್ಲಿ ಹಿಂದೂಗಳೇ ಇಲ್ಲದಂತಾಗಿದೆ. ಕಾಶ್ಮೀರದಲ್ಲಿ ಹಿಂದೂಗಳು ಅಲ್ಪಸಂಖ್ಯಾತ ಆಗಿದ್ದರಿಂದ ತಮ್ಮ ಸ್ಥಳವನ್ನು ಬಿಟ್ಟು ಓಡಿ ಹೋಗಬೇಕಾಯಿತು. 15 ಲಕ್ಷ ಸೇನೆ ಇದ್ದರೂ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಾಗದಿರುವುದು ದುರಂತ ಎಂದು ಹೇಳಿದರು.ವಿಶ್ವದ 800 ಕೋಟಿ ಜನಸಂಖ್ಯೆಯಲ್ಲಿ ಹಿಂದೂಗಳು ಸಂಖ್ಯೆ ಕೇವಲ 110 ಕೋಟಿ. 1947ರಲ್ಲಿ ದೇಶದ ಶೇ.86ರಷ್ಟು ಹಿಂದೂ ಜನಸಂಖ್ಯೆ ಶೇ.78 ಕುಸಿತವಾಗಿದೆ. ಶೇ.6 ರಷ್ಟಿದ್ದ ಮುಸ್ಲಿಮರು ಶೇ.15ರಷ್ಟಿದ್ದಾರೆ. ಇನ್ನು 75 ವರ್ಷಗಳಲ್ಲಿ 110 ಕೋಟಿಯಿಂದ 50 ಕೋಟಿಗೆ ಹಿಂದೂಗಳ ಜನಸಂಖ್ಯೆ ತಲುಪಲಿದೆ. ಮುಸ್ಲಿಮರು 60 ಕೋಟಿಯಷ್ಟಾಗುತ್ತಾರೆ. ಆಗ ಆಡಳಿತ, ಸೇನೆ, ಅಧಿಕಾರ ಎಲ್ಲವೂ ಅವರ ಬಳಿಯಲ್ಲಿರುತ್ತದೆ. ಆಗ ಹಿಂದೂಗಳಿಗೆ ಉಳಿಗಾಲವಿಲ್ಲ. ಅದಕ್ಕಾಗಿ ಹಿಂದೂ ಸಮಾಜ ಸಂಘಟಿತರಾಗದೇ ಬೇರೆ ಮಾರ್ಗವಿಲ್ಲ ಎಂದು ಹೇಳಿದರು. ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಹಾಕಬೇಕು. ದೇಶವನ್ನು ಹಿಂದೂ ರಾಷ್ಟ್ರವಾಗಿ ಮಾರ್ಪಡಿಸಬೇಕು. ರಾಮಮಂದಿರ ಹೋರಾಟದಲ್ಲಿ ಜಯ ಗಳಿಸಿದ್ದೇವೆ, ಅದರಂತೆ ಹಿಂದೂಗಳಿಗೆ ಬೆಂಬಲಿಸುವುದು, ಸಹಕಾರ ನೀಡುವುದು ಮತ್ತು ತರಬೇತಿ ನೀಡುವ ಕೆಲಸವಾಗಬೇಕಿದೆ ಎಂದರು.
ದೇಶದಲ್ಲಿ ತ್ರಿಶೂಲ ದೀಕ್ಷೆಯಂತಹ ಕಾರ್ಯಕ್ರಮ ಮಾಡಿದ್ದೇನೆ. ಬಡರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸುವ ಕೆಲಸ ಮಾಡುತ್ತಿದ್ದೇನೆ. ಪ್ರತಿ ಕೇರಿಗಳಲ್ಲಿ ಶನಿವಾರ ಹನುಮಾನ ಚಾಲೀಸಾದ ಸಾಮೂಹಿಕ ಪಾರಾಯಣದ ಸಂಕಲ್ಪಮಾಡಬೇಕು. ಇದರಿಂದ ಸಮಾಜ ಜಾಗೃತವಾಗಲಿದೆ. ಹಿಂದೂಗಳ ಜಾಗೃತಿಗಾಗಿ ಕಾರ್ಯಕರ್ತರು ಪ್ರಯತ್ನಿಸಬೇಕು. ಹಿಂದೂ ಸೇವಾ ಅಭಿಯಾನ ಹೆಲ್ಪಲೈನ್ ಸ್ಥಾಪಿಸಬೇಕು ಎಂದು ಕರೆ ನೀಡಿದರು. ಮಹಾಕುಂಭದಲ್ಲಿ 1.25ಕೋಟಿ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೇನೆ ಎಂದ ಅವರು, ಸಂಕಲ್ಪದಿಂದ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ. ಇದಕ್ಕಾಗಿ ದೇಶದಲ್ಲಿ ಉಪಾಯ ಪೂರ್ವಕ ಕೆಲಸಮಾಡಬೇಕಿದೆ ಎಂದು ಹೇಳಿದರು.ವೇದಿಕೆಯ ಮೇಲೆ ವಿಎಚ್ಪಿ ರಾಜ್ಯ ಮುಖಂಡ ರಮೇಶ ಕುಲಕರ್ಣಿ, ಹುಲ್ಯಾಳದ ದುಂಡಯ್ಯ ಸ್ವಾಮೀಜಿ, ಉದಯ ಮಂಕಣಿ, ಸುರೇಶ ಮೀಸಿ, ನಿತಿನ ಮಹಬಳಶೆಟ್ಟಿ ಉಮೇಶ ಆಲಮೇಲಕರ, ಇದ್ದರು. ರಾಯಬಾ ಜಾಧವ ಸ್ವಾಗತಿಸಿ, ವಂದಿಸಿದರು.ಹಿಂದೂಗಳನ್ನು ಸಂಘಟಿಸಿ ಹಿಂದೂಪರ ಕಾನೂನು ತರುವುದು, ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ತರುವುದು, 2 ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಪಡೆದರೆ ಎಲ್ಲಾ ಸರ್ಕಾರಿ ಸೌಲಭ್ಯ ಹಾಗೂ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು, ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲದಂತಹ ಕಠಿಣ ಕಾನೂನು ಜಾರಿಯಾಗಬೇಕು ಎಂಬುದು ತಮ್ಮ ಹೋರಾಟದ ಮುಖ್ಯ ಉದ್ದೇಶ.