ಕನ್ನಡಪ್ರಭ ವಾರ್ತೆ ಬೇಲೂರುಜಿಲ್ಲೆಯಲ್ಲಿ ಅರಸೀಕೆರೆ ಕ್ಷೇತ್ರಕ್ಕೆ ವಿಶೇಷ ಅನುದಾನ ಬಿಡುಗಡೆಯಾದ ಬಗ್ಗೆ ಕೇಳಿದ ಪ್ರಶ್ನೆಗೆ ಮಾಜಿ ಸಚಿವ ಬಿ.ಶಿವರಾಂ ಪ್ರತಿಕ್ರಿಯೆ ನೀಡುತ್ತಾ, ಒಂದು ವೇಳೆ ನಾನು ಗೆದ್ದಿದ್ದರೆ ಅರಸೀಕೆರೆ ಕ್ಷೇತ್ರಕ್ಕೆ ನೀಡಿದಷ್ಟೇ ಅನುದಾನವನ್ನು ಬೇಲೂರು ಕ್ಷೇತ್ರಕ್ಕೂ ತರುತ್ತಿದ್ದೆ. ಈ ಬಗ್ಗೆ ಇಲ್ಲಿನ ಮತದಾರರು ತಿಳಿದುಕೊಳ್ಳಬೇಕಿತ್ತು ಎಂದು ತಮ್ಮ ಸೋಲಿನ ಬಗ್ಗೆ ವ್ಯಾಖ್ಯಾನ ಮಾಡಿದರು.ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಯಾವ ಶಾಸಕರಿಗೂ ತಾರತಮ್ಯ ನೀತಿ ಮಾಡಿಲ್ಲ, ಇಲ್ಲಿನ ಶಾಸಕರು ಸರ್ಕಾರದೊಂದಿಗೆ ಬೆರೆತು ಅಭಿವೃದ್ಧಿಪಡಿಸಲಿ. ಪುರಸಭೆಯ ನಗರೋತ್ಥಾನ ಅನುದಾನದಲ್ಲಿ ಪಟ್ಟಣದ ರಸ್ತೆಗಳನ್ನು ಸರಿಪಡಿಸಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಶಾಸಕರು ಪುರಸಭೆಯ ಅಧ್ಯಕ್ಷರನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡಿದ್ದು ಬಿಟ್ಟರೆ ಬೇರೇನು ಕೆಲಸ ಮಾಡಿಲ್ಲ. ತಮ್ಮದೇ ಸರ್ಕಾರವಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ವರ್ಗಾವಣೆಗಾಗಿ ಇತರ ಕೆಲಸಗಳಿಗಾಗಿ ಬರುತ್ತಾರೆ. ನಾನು ತಮ್ಮ ಕೈಲಾದ ಸಹಾಯವನ್ನು ಮಾಡುತ್ತೇನೆ. ಇದನ್ನೇ ವರ್ಗಾವಣೆ ದಂಧೆ ಎಂದು ಬಿಂಬಿಸಿದರೆ ಏನು ಮಾಡಲು ಸಾಧ್ಯ ಎಂದರು.
ತಾಲೂಕಿನ ಗೆಂಡೇಹಳ್ಳಿಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅಂದಾಜು 622 ಕೋಟಿ ವೆಚ್ಚ 1*20 ಕೆ.ವಿ ಅಧಿಕ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಕಾಮಗಾರಿಗೆ ಟೆಂಡರ್ ಆಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ.ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕದಿಂದ ಗೆಂಡೆಹಳ್ಳಿ ಭಾಗದಲ್ಲಿನ ಸುತ್ತಮುತ್ತ ಗ್ರಾಮಗಳಿಗೆ ಗುಣಮಟ್ಟದ ಮತ್ತು ನಿರಂತರ ವಿದ್ಯುತ್ ಸರಬರಾಜು ಮಾಡಲು ಸಹಕಾರಿಯಾಗಲಿದೆ. ಬಹಳ ವರ್ಷದಿಂದ ನೆನಗುದಿಗೆ ಬಿದ್ದ ಹನಿಕೆ ಮತ್ತು ಬಿಕ್ಕೋಡು ವಿದ್ಯುತ್ ವಿತರಣಾ ಕೇಂದ್ರಕ್ಕೂ ಟೆಂಡರ್ ಅನುಮೋದನೆಯಾಗಿದೆ. ಗೆಂಡೇಹಳ್ಳಿ ಭಾಗದ ಮರೂರು ಸಾಮಿಲ್ನಲ್ಲಿ ವಿದ್ಯುತ್ ಕಳ್ಳತನವಾಗುತ್ತಿರುವ ಬಗ್ಗೆ ಉತ್ತರಿಸಿ ಈ ಬಗ್ಗೆ ಜಿಲ್ಲಾ ವಿಚಕ್ಷಣಾ ದಳಕ್ಕೆ ತನಿಖೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬೇಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ನಿಶಾಂತ್, ಕಸಬಾ ಹೋಬಳಿ ಅಧ್ಯಕ್ಷ ಶ್ರೀನಿವಾಸ್, ಕಿಸಾನ್ ಘಟಕದ ಉಪಾಧ್ಯಕ್ಷ ಮಲ್ಲೇಶ್, ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ಸಚಿನ್ ಹಾಜರಿದ್ದರು.