ಕನ್ನಡಪ್ರಭವಾರ್ತೆ ಬಸವನಬಾಗೇವಾಡಿಶಿಕ್ಷಕ ಹುದ್ದೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಆ ಹುದ್ದೆಗೆ ನ್ಯಾಯ ಒದಗಿಸಿದರೆ ಅದರಲ್ಲಿಯೇ ಯಶಸ್ಸು ಸಾಧಿಸಬಹುದು ಎಂದು ಧಾರವಾಡ ವಾಣಿಜ್ಯ ತೆರಿಗೆ ಇಲಾಖೆಯ ಉಪಆಯುಕ್ತ ಶಂಕರ ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನಾವು ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರೂ ಆ ಹುದ್ದೆಗೆ ಮೋಸವಾಗದಂತೆ ಕಾರ್ಯನಿರ್ವಹಿಸುವುದು ಮುಖ್ಯ. ಶಿಕ್ಷಕರ ಮೇಲೆ ಸಮಾಜದ ನಿರೀಕ್ಷೆ ಬಹಳಷ್ಟಿದೆ. ಶಿಕ್ಷಕರಲ್ಲಿನ ಅದ್ಭುತ ಶಕ್ತಿಯಿಂದಾಗಿ ಮಕ್ಕಳು ರಾಷ್ಟ್ರಪತಿ, ಪ್ರಧಾನಿ ಹುದ್ದೆ, ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವುದೇ ಹುದ್ದೆಗಳನ್ನು ಪಡೆಯಬಹುದು. ಎಲ್ಲ ವೃತ್ತಿಗಿಂತ ಶಿಕ್ಷಕ ವೃತ್ತಿಯಲ್ಲಿ ಸಂತೃಪ್ತಿ ಸಿಗುತ್ತದೆ ಎಂದರು.ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ಮಾತನಾಡಿ, ತಾನು 7 ವರ್ಷ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದು, ದೇಶದ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸಬೇಕೆಂದರು.ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮನ್ನು ಸೇರಿ ಎಲ್ಲರೂ ಶಿಕ್ಷಕರು ಕಲಿಸಿದ ಅಕ್ಷರದಿಂದಲೇ ಜೀವನದಲ್ಲಿ ದೊಡ್ಡವರಾಗಿದ್ದೇವೆ. ಸ್ವಾರ್ಥರಹಿತ ಶಿಕ್ಷಣ ನೀಡಬೇಕು. ಇಂದು ಎಲ್ಲೆಡೆ ಖಾಸಗಿ ಶಾಲೆಗಳ ಪ್ರಭಾವ ಹೆಚ್ಚಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರು ಉತ್ತಮ ಶಿಕ್ಷಣ ನೀಡುವ ಮೂಲಕ ಖಾಸಗಿ ಶಾಲೆಗಳ ಪ್ರಭಾವ ಕಡಿಮೆಯಾಗುವಂತೆ ಕೆಲಸ ಮಾಡುವಂತೆ ತಿಳಿಸಿದರು.ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬಿಇಒ ವಸಂತ ರಾಠೋಡ, ಕರವೇ ಮುಖಂಡ ಅಶೋಕ ಹಾರಿವಾಳ ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ ಸ್ವಾಗತಿಸಿದರು. ಎಸ್.ಎಸ್.ಅಂಬಲಿ, ಭಾರತಿ ಪಾಟೀಲ, ಮಹೇಶ ಪೂಜಾರಿ ನಿರೂಪಿಸಿದರು. ಶರಣು ದಳವಾಯಿ ವಂದಿಸಿದರು. ಅಖಂಡ ತಾಲೂಕಿನಲ್ಲಿ ನಿವೃತ್ತ ಶಿಕ್ಷಕರನ್ನು, ಸಮಾರಂಭಕ್ಕೆ ಸಹಕಾರ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು.