ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಪೋಷಕರು ಮಾರುಹೋಗಿದ್ದಾರೆ. ಅವರ ಒತ್ತಡಕ್ಕೆ ಮಕ್ಕಳು ಮಣಿಯಬೇಕಾಗಿದೆ. ಶಾಲೆ ನಡೆಸುವವರು ಪರಿಸರದ ಭಾಷೆಯಾದ ಕನ್ನಡದ ಮೂಲಕ ಉಳಿದ ಭಾಷಾ ಕಲಿಕೆಗೆ ವೇದಿಕೆ ಸಿದ್ಧಪಡಿಸುವುದನ್ನು ಮರೆಮಾಚಿ ಇಂಗ್ಲಿಷ್ ಭ್ರಮೆಯಲ್ಲಿ ತೇಲಿಸುವ ವ್ಯವಸ್ಥೆಯು ಸೃಜನಾತ್ಮಕ ವ್ಯಕ್ತಿತ್ವ ನಾಶಮಾಡುತ್ತದೆ ಆತಂಕ ವ್ಯಕ್ತಪಟಿಸಿದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ದೇಶಕರಾಗಿ ಸರ್ಕಾರ ಇತ್ತೀಚೆಗೆ ನೇಮಕವಾದ ಹಿನ್ನೆಲೆ ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಘುರಾಮ ದೇವಾಡಿಗ, ನಮ್ಮ ಮಕ್ಕಳಿಗೆ ನಾವು ಕನ್ನಡ ಕಲಿಸುವಲ್ಲಿ ತೋರಿಸುವ ಅಸಡ್ಡೆ ಮನಗಾಣಬೇಕು ಎಂದರಲ್ಲದೆ ನಾಡು, ನುಡಿ ಸೇವೆಗಾಗಿ ಹಲವು ವರ್ಷಗಳಿಂದ ದುಡಿಯುತ್ತಿರುವ ಡಿ. ಮಂಜುನಾಥ ಅವರನ್ನು ಸರ್ಕಾರ ಗುರುತಿಸುವಲ್ಲಿ ವಿಫಲವಾಗಿದೆ ಎಂದು ವಿಷಾದಿಸಿದರು.ಗಾಯಿತ್ರಿ ಸುರೇಂದ್ರ ಅವರು ರಚಿಸಿದ ಕವನ ಧಾರೆ ಕೃತಿ ಲೋಕಾರ್ಪಣೆ ಮಾಡಲಾಯಿತು. ಡಾ. ಹಸೀನಾ ಅವರು ಪುಸ್ತಕ ಕುರಿತು ಮಾತನಾಡಿ, 65 ಕವನಗಳಿರುವ ಎಪ್ಪತ್ತು ಪುಟಗಳ ಈ ಪುಸ್ತಕ ಎಲ್ಲಾ ಭಾವ ತುಂಬಿ ಬರೆಯಲಾಗಿದೆ. ತಾಯಿ ಮಮತೆ, ಪ್ರೀತಿ ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದರು.
ಕಥೆಗಾರ ಡಾ. ಕಲೀಮ್ ಉಲ್ಲಾ, ಗಾಯಿತ್ರಿ ಸುರೇಂದ್ರ ಕಥೆ ಹೇಳಿದರು. ಗಾಯಕರಾದ ನೀಲೇಶ್, ಕು. ಸಂಪ್ರೀತ್ ಜಿ., ಪ್ರಕಾಶ್, ಗಿರಿಕುಮಾರ್, ಪುಷ್ಪಾ ಪ್ರಕಾಶ್ ಹಾಡು ಹೇಳಿದರು. ಶಿಕ್ಷಕರು, ದೂರದರ್ಶನ ಕಲಾವಿದರಾದ ಮೋಹನ್ ಕುಮಾರ್ ಹಾಸ್ಯ, ಕವಿಗಳಾದ ಡಿ. ಗಣೇಶ್ ನಮ್ಮ ಪ್ರಜಾಪ್ರಭುತ್ವ, ಎಂ. ನವೀನ್ ಕುಮಾರ್ ಅವರು ಆಸ್ಪತ್ರೆಯಲ್ಲಿ ಒಂದು ಸುತ್ತು, ಕು. ಗೌರಿಶ್ರೀ ಅವರು ಮರಳಿನ ಹೆಜ್ಜೆ ಕವನ ವಾಚಿಸಿದರು. ಡಾ. ಹಸೀನಾ ಅವರು ಹನಿಗವನ ವಾಚಿಸಿದರು.
ವೇದಿಕೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಮಹಾದೇವಿ, ಹಿಂದಿನ ಸಾಹಿತ್ಯ ಹುಣ್ಣಿಮೆ ಆತಿಥ್ಯ ನೀಡಿದ್ದ ಸ್ವಾಮಿ ವಿವೇಕಾನಂದ ಯೋಗಕೇಂದ್ರದ ಅಧ್ಯಕ್ಷ ಭೈರಾಪುರ ಶಿವಪ್ಪಮೇಸ್ಟ್ರು, ಕುವೆಂಪು ಕ್ಷೇಮಾಭಿವೃದ್ಧಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಎಂ. ರಾಮಪ್ಪ, ಖಜಾಂಚಿ ಎ. ಎಸ್. ನಾರಾಯಣ, ಸೊರಬ ತಾಲೂಕು ಕಸಾಸಾಂ ವೇದಿಕೆ ಅಧ್ಯಕ್ಷರಾದ ಶಂಕರ್ ಶೇಟ್ ಉಪಸ್ಥಿತರಿದ್ದರು.ಸಂಪ್ರೀತ್ ಪ್ರಾರ್ಥನೆ ಹಾಡಿದರು. ಆರ್. ಗೀತಾ ಸ್ವಾಗತಿಸಿದರು. ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಮಂಜಪ್ಪ ನಿರೂಪಿಸಿದರು.