ಕನ್ನಡ ಶಾಲೆ ಮುಚ್ಚಿದರೆ ಸಂಸ್ಕೃತಿ ನಾಶವಾದಂತೆ: ವಾಸರೆ

KannadaprabhaNewsNetwork |  
Published : Jun 28, 2026, 03:30 AM IST
ಜೋಯಿಡಾ 25 :- | Kannada Prabha

ಸಾರಾಂಶ

ಒಂದು ಕನ್ನಡ ಶಾಲೆ ಮುಚ್ಚಿದರೆ ಅಲ್ಲಿ ಸ್ವಾತಂತ್ರ್ಯೋತ್ಸವ ನಡೆಯುವುದಿಲ್ಲ, ಸ್ವಚ್ಛತಾ ಕಾರ್ಯಕ್ರಮ, ವನಮಹೋತ್ಸವ, ರಾಷ್ಟ್ರೀಯ ಕಾರ್ಯಕ್ರಮ ಯಾವುದೂ ನಡೆಯುವುದಿಲ್ಲ.

ಕನ್ನಡಪ್ರಭ ವಾರ್ತೆ ಜೋಯಿಡಾ

ಒಂದು ಕನ್ನಡ ಶಾಲೆ ಮುಚ್ಚಿದರೆ ಅಲ್ಲಿ ಸ್ವಾತಂತ್ರ್ಯೋತ್ಸವ ನಡೆಯುವುದಿಲ್ಲ, ಸ್ವಚ್ಛತಾ ಕಾರ್ಯಕ್ರಮ, ವನಮಹೋತ್ಸವ, ರಾಷ್ಟ್ರೀಯ ಕಾರ್ಯಕ್ರಮ ಯಾವುದೂ ನಡೆಯುವುದಿಲ್ಲ. ಕನ್ನಡ ರಾಜ್ಯೋತ್ಸವ ನಡೆಯುವುದಿಲ್ಲ. ಕನ್ನಡ ಶಾಲೆ ಮುಚ್ಚಿದರೆ ಆ ಊರಿನ ಸಂಸ್ಕೃತಿ ನಾಶವಾದಂತೆ, ಸಂಸ್ಕೃತಿ ನಾಶವಾದರೆ ಊರಿನ ಅಸ್ತಿತ್ವ ಕಳೆದುಕೊಂಡಂತೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.

ತಾಲೂಕಿನ ಬಾಪೇಲಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜೋಯಿಡಾ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡಕ್ಕೆ ನೂರಕ್ಕೆ ನೂರು ಅಂಕ ಪಡೆದ ೧೭ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಸರ್ಕಾರ, ಇಲಾಖೆಗಳು ಮಾಡಬೇಕಿದೆ. ಕನ್ನಡದಲ್ಲಿ ಪ್ರತಿಭೆ ತೋರಿದ ಮಕ್ಕಳಿಗೆ ಸರ್ಕಾರ, ಇಲಾಖೆ ಕನಿಷ್ಠ ಅಭಿನಂದನಾ ಪಾತ್ರವನ್ನಾದರೂ ನೀಡಿ ಪ್ರೋತ್ಸಾಹಿಸಬೇಕಿದೆ. ಮಕ್ಕಳಲ್ಲಿ ಕನ್ನಡ ಜಾಗೃತಿ ಬೀಜ ಬಿತ್ತಬೇಕೆನ್ನುವ ಕಾರಣಕ್ಕಾಗಿ ಈ ಅಭಿನಂದನಾ ಕಾರ್ಯಕ್ರಮ ಮಾಡುತ್ತಿದ್ದೇವೆ ಹೋರತು ಯಾವುದೇ ಲಾಭಕ್ಕಾಗಿ ಅಲ್ಲ. ಇಂದು ಅಭಿನಂದನೆ ಪಡೆದವರು ಮುಂದೆ ಸಾಧನೆ ಮಾಡಿ ಬಂದಮೇಲೆ ಕನ್ನಡ ಸಾಹಿತ್ಯ ಪರಿಷತ್ತನ್ನು ನೆನೆಸಿಕೊಂಡರೆ ಅದೇ ನಮ್ಮ ಶ್ರಮಕ್ಕೆ ಸಾರ್ಥಕತೆ ಸಿಕ್ಕಂತೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಾ ಪಂಚಾಯಿತಿ ಇಒ ಎನ್.ಭಾರತಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ನಾಡು ನುಡಿ, ಕನ್ನಡ ಪ್ರೀತಿ ಮಕ್ಕಳಲ್ಲಿ ಬೆಳೆಸುವ ಕ್ರಮ ಶ್ಲಾಘನೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹಮದ್ ಶೇಖ್ ಮಾತನಾಡಿ, ಜೋಯಿಡಾ ತಾಲೂಕು ಆಂಗ್ಲಮಾಧ್ಯಮದಿಂದ ದೂರ ಉಳಿದು ಕನ್ನಡವನ್ನೇ ಒಪ್ಪಿಕೊಂಡಿರುವ ತಾಲೂಕು. ಇಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಇದೆ ಎಂದರು.

ನಾಲ್ಕನೇ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷೆ ಸುಕನ್ಯಾ ದೇಸಾಯಿ ಮಾತನಾಡಿ, ಕನ್ನಡ ನೆಲ, ಜಲ, ಭಾಷೆ ಬಗ್ಗೆ ನಮಗೆ ಅಭಿಮಾನ ಇರಬೇಕು. ಕನ್ನಡವನ್ನು ಕಟ್ಟಿ ಬೆಳೆಸುವ ಕಾರ್ಯ ಮುಂದಿನ ದಿನಗಳಲ್ಲಿ ನಿಮ್ಮಿಂದ ಆಗಬೇಕಿದೆ ಎಂದು ಹೇಳಿದರು.

ಸಾಹಿತಿಗಳಾದ ಅಂತೋನಿ ಜಾನ್, ಸೀತಾ ದಾನಗೇರಿ, ಶ್ರೀಧರ ದಬಗಾರ, ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುಭಾಷ ನಾಯ್ಕ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಮೋಹನ ಮಾವಸ್ಕರ ಮುಂತಾದವರು ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಪಂ ಮಾಜಿ ಸದಸ್ಯರು ಉಪಸ್ಥಿತರಿದ್ದರು.

ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯದರ್ಶಿ ಭಾಸ್ಕರ ಗಾಂವ್ಕರ್ ಸ್ವಾಗತಿಸಿದರು. ಪ್ರೇಮಾನಂದ ವೇಳಿಪ ಸಂಘಟಿಸಿದರು. ಶಿಕ್ಷಕ ಶ್ರೀಕಾಂತ ಚಲವಾದಿ ವಂದಿಸಿದರು. ತಾಲೂಕಿನ ಒಟ್ಟು 17 ವಿದ್ಯಾರ್ಥಿಗಳಿಗೆ ನೋಟಬುಕ್, ಸಾಹಿತ್ಯ ಪುಸ್ತಕ, ಕನ್ನಡ ಶಾಲು ಹಾಕಿ ಸನ್ಮಾನಿಸಿ ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌನಾನುಷ್ಠಾನದಿಂದ ಆತ್ಮಬಲ ವೃದ್ಧಿ: ಬಸವಲಿಂಗ ಶ್ರೀಗಳು
ಪ್ರತಿಯೊಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ: ಡಾ. ನಿವಿಯಾ ಗೋಮ್ಸ