ಸಿರಿಗೆರೆ: ಕನ್ನಡಿಗರು ನಾಡು ಮತ್ತು ನುಡಿಯ ಬಗ್ಗೆ ನಿರಭಿಮಾನಿಗಳಾದರೆ ಒಂದು ಕಾಲಕ್ಕೆ ಕಾವೇರಿಯನ್ನೂ ಕಳೆದುಕೊಳ್ಳಬೇಕಾಗಬಹುದು ಎಂದು ಖ್ಯಾತ ಅನುವಾದಕ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಎಚ್.ಎಸ್.ಹರಿಶಂಕರ್ ಹೇಳಿದರು.ತರಳಬಾಳು ಜಗದ್ಗುರು ಬೃಹನ್ಮಠ ಹಾಗೂ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ತರಳಬಾಳು ನುಡಿಹಬ್ಬದ ಸಮಾರೋಪದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.ಭಾಷೆಯ ಬಗೆಗಿನ ಆಚರಣೆ ನವೆಂಬರ್ಗೆ ಮಾತ್ರವೇ ಸೀಮಿತವಾಗಬಾರದು. ಭಾಷೆಯ ಬಗ್ಗೆ ಹಲವು ಬಿಕ್ಕಟ್ಟುಗಳು ನಮ್ಮ ಮುಂದಿವೆ. ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಳೆಗನ್ನಡ ಓದುವುದರಿಂದ ದೂರವಾಗಿದ್ದಾರೆ. ೨೦ನೇ ಶತಮಾನದಲ್ಲಿ ಹಲವು ಪ್ರಮುಖ ಗ್ರಂಥಗಳು ಪ್ರಕಟಗೊಂಡಿದ್ದರೂ, ಅವು ಓದುಗರನ್ನು ತಲುಪಲು ಸಾಧ್ಯವಾಗಿಲ್ಲ. ಈಗಿನ ಲೇಖಕರು ಬೆಟ್ಟದಷ್ಟು ಬರೆದಿದ್ದಾರೆ. ಆದರೆ ಅದು ಓದುಗರಿಗೆ ಮುಟ್ಟುತ್ತಿಲ್ಲ ಎಂದು ವಿಷಾದಿಸಿದರು.ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ರಾಜಕಾರಣಿಗಳು, ಭಾಷಾಭಿಮಾನಿಗಳೂ, ಧರ್ಮಗುರುಗಳೂ ಸೇರಿದಂತೆ ಎಲ್ಲರೂ ಚರ್ಚೆ ಮಾಡಬೇಕಾದ ಅಗತ್ಯ ಇದೆ ಎಂದರು.ತರಳಬಾಳು ಶ್ರೀಗಳು ಏತನೀರಾವರಿ ಯೋಜನೆಗಳಿಗೆ ಶ್ರಮಿಸುತ್ತಿರುವುದನ್ನು ನಾಡಿನ ರೈತ ವರ್ಗ ಮುಕ್ತಕಂಠದಿಂದ ಪ್ರಶಂಸೆ ಮಾಡುತ್ತಿದೆ ಎಂದು ಶ್ಲಾಘಿಸಿದರು.ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಹಾಗೂ ಕೆ.ಎಂ.ಶಿವಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಮಾತನಾಡಿದರು.