ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣ ಸದ್ಯ ತನಿಖಾ ಹಂತದಲ್ಲಿದೆ. ಈ ಪ್ರಕರಣದಲ್ಲಿ ಸಚಿವರು, ಶಾಸಕರು ಭಾಗಿಯಾಗಿದ್ದರೆ ಖಂಡಿತವಾಗಿ ಅದು ಕಳಂಕ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಸುವರ್ಣವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ವಾಲ್ಮೀಕಿ ಪ್ರಕರಣ ತನಿಖಾ ಹಂತದಲ್ಲಿದ್ದು, ದಾಖಲೆ ನೋಡಿದ ಮೇಲೆಯೇ ಸತ್ಯಾಂಶ ಗೊತ್ತಾಗಲಿದೆ. ತಕ್ಷಣಕ್ಕೆ ಹೀಗೆಯೇ ಎಂದು ಹೇಳಲು ಕಷ್ಟ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ. ಆಯಾ ಸಚಿವರು ತಮ್ಮ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಅದನ್ನು, ಬಿಟ್ಟು ತಮ್ಮ ಇಲಾಖೆ ಸಮಸ್ಯೆಯನ್ನು ಮುಖ್ಯಮಂತ್ರಿ ಮೇಲೆ ತರುವುದು ಸೂಕ್ತವಲ್ಲ. ನಮ್ಮ ಇಲಾಖೆಯನ್ನು ನಾವೇ ನೋಡಿಕೊಳ್ಳಬೇಕು. ಅದು ನಮ್ಮ ಜವಾಬ್ದಾರಿ. ಆದ್ದರಿಂದ ಮುಖ್ಯಮಂತ್ರಿಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.ಮುಡಾ ಮತ್ತು ವಾಲ್ಮೀಕಿ ನಿಗಮಕ್ಕೆ ಹೋಲಿಕೆ ಮಾಡಲು ಆಗದು. ಇಂತಹ ಪ್ರಕರಣಗಳು ರಾಜ್ಯದಲ್ಲಿ ಸಾಕಷ್ಟು ನಡೆದಿವೆ. ನಾವು ಕೂಡ ಸಾಕಷ್ಟು ನೋಡಿದ್ದೇವೆ. ಹಾಗಾಗಿ ಮುಡಾವನ್ನು ವಾಲ್ಮೀಕಿ ನಿಗಮಕ್ಕೆ ಹೋಲಿಸಲು ಆಗುವುದಿಲ್ಲ. ಅದು ಕ್ಲಸ್ಟಲ್ ಕ್ಲೇರ್ ಆಗಿದೆ. ಆದರೆ, ಮುಡಾ ಮಾತ್ರ ರಾಜಕೀಯ ಅಂತಾ ಹೇಳಬಹುದು ಎಂದರು.
ಕಾಂಗ್ರೆಸ್ ಆಂತರಿಕ ಜಗಳದಿಂದಲೇ ಮುಡಾ ಹಗರಣ ಹೊರಗೆ ಬಂದಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಮಾಡಿದರೂ ಎಂದಾದರೂ ಹೊರಗಡೆ ಬರಲೇಬೇಕು. ಅದರಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಆಂತರಿಕ ಜಗಳ ಅಂತ ಏನಿಲ್ಲ. ಯಾರೇ ತಪ್ಪು ಮಾಡಿದರೂ ಅದು ತಪ್ಪು ತಪ್ಪೇ ಎಂದ ಅವರು, ಒಂದು ಸುಳ್ಳು ಮುಚ್ಚಿಸಲು ಮತ್ತೆ ಹತ್ತು ಸುಳ್ಳು ಹೇಳುವ ಬದಲು ತಪ್ಪು ನಡೆದಾಗ ಎಸ್ ಎಂದು ಅಲ್ಲಿಗೆ ಫುಲ್ ಸ್ಟಾಪ್ ಹಾಕುವುದು ಒಳಿತು ಎಂದು ಹೇಳಿದರು.