ಪ್ರಕೃತಿ ಕಾಳಜಿ ನಿರ್ಲಕ್ಷಿಸಿದರೆ ಮನುಕುಲ ನಾಶ ಖಚಿತ: ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ

KannadaprabhaNewsNetwork | Published : Aug 23, 2024 1:03 AM

ಸಾರಾಂಶ

ಮನುಷ್ಯನ ಅತಿಯಾದ ಆಸೆಯಿಂದ ಪ್ರಕೃತಿ ಸಂಪತ್ತು ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ಪ್ರಕೃತಿ ಮೇಲೆ ಮನುಷ್ಯನ ದಬ್ಬಾಳಿಕೆ ಹೀಗೇ ಮುಂದುವರಿದರೆ ಮುಂದೊಂದು ದಿನ ಮನುಷ್ಯ ಸಂಕುಲವೇ ವಿನಾಶವಾಗುವುದು ಖಚಿತ ಎಂದು ಕನ್ನಡ ನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಚನ್ನಗಿರಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಚನ್ನಗಿರಿ ಸರ್ಕಾರಿ ಕಾಲೇಜು ಆವರಣದಲ್ಲಿ ವನಮಹೋತ್ಸವ - - -

ಚನ್ನಗಿರಿ: ಮನುಷ್ಯನ ಅತಿಯಾದ ಆಸೆಯಿಂದ ಪ್ರಕೃತಿ ಸಂಪತ್ತು ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ಪ್ರಕೃತಿ ಮೇಲೆ ಮನುಷ್ಯನ ದಬ್ಬಾಳಿಕೆ ಹೀಗೇ ಮುಂದುವರಿದರೆ ಮುಂದೊಂದು ದಿನ ಮನುಷ್ಯ ಸಂಕುಲವೇ ವಿನಾಶವಾಗುವುದು ಖಚಿತ ಎಂದು ಕನ್ನಡ ನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕನ್ನಡನಾಡು ಹಿತರಕ್ಷಣಾ ಸಮಿತಿ ನಗರ ಘಟಕ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಕೃತಿಯು ಮನುಷ್ಯನ ಜೀವಕ್ಕೆ ಬೇಕಾದ ನೀರು, ಗಾಳಿ, ಬೆಳಕನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಉಚಿತವಾಗಿ ನೀಡುತ್ತಿದೆ. ಆದರೆ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯಲ್ಲಿನ ಗಿಡ-ಮರಗಳನ್ನು ಕಡಿಯುತ್ತಾ ಸಾಗುತ್ತಿರುವುದು ದುರಂತ ಎಂದರು.

ಈ ದಿನದಿಂದ ನಮ್ಮ ಸಮಿತಿ ವತಿಯಿಂದ ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳ ಆವರಣದಲ್ಲಿ, ಶಾಲಾ-ಕಾಲೇಜುಗಳು, ಸ್ಮಶಾನಗಳಲ್ಲಿ ಒಟ್ಟು ಐದು ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಈ ಗಿಡಗಳಿಗೆ ಕನ್ನಡ ನಾಡು-ನುಡಿಗಾಗಿ ಹೋರಾಟ ಮಾಡಿದ ಮಹಾನೀಯರು, ಕನ್ನಡ ಕವಿಗಳ ಹೆಸರುಗಳನ್ನು ಇಟ್ಟು ಪೋಷಣೆ ಮಾಡಲಾಗುವುದು ಎಂದರು.

ಸಮಿತಿ ನಗರ ಘಟಕದ ಅಧ್ಯಕ್ಷ ನಟರಾಜ ರಾಯ್ಕರ್ ಮಾತನಾಡಿ, ಸಮಿತಿಯ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಪಟ್ಟಣ ಪ್ರದೇಶದಲ್ಲಿ ಸಮಿತಿ ವತಿಯಿಂದ 5 ಸಾವಿರ ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಪ್ರತಿದಿನ ಸಂಜೆ ಸಮಿತಿಯ ಸದಸ್ಯರುಗಳೊಂದಿಗೆ ದಿನಕ್ಕೆ 50 ಗಿಡಗಳನ್ನು ನೆಡಲಾಗುವುದು ಎಂದರು.

ಈ ಸಂದರ್ಭ ಸಮಿತಿಯ ತಾಲೂಕು ಗೌರವ ಅಧ್ಯಕ್ಷ ಸರ್ದಾರ್, ಅಧ್ಯಕ್ಷ ಎಂ.ಅಣ್ಣೋಜಿರಾವ್ ಪವಾರ್, ವಾಸಿಕ್ ಆಹಮದ್, ನಾಗರತ್ನ, ಸುಹೇಬ್, ಮಂಜುಳಾ, ಜಿಲಾನಿ, ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

- - - -21ಕೆಸಿಎನ್‌ಜಿ3:

ಚನ್ನಗಿರಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ವನಮಹೋತ್ಸವದಲ್ಲಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಗಿಡವನ್ನು ನೆಟ್ಟು, ಭುವನೇಶ್ವರಿ ಎಂದು ನಾಮಕರಣ ಮಾಡಿದರು.

Share this article