ಸಾಗರ: ಅಂಬೇಡ್ಕರ್ ಹೇಳಿದ ಆತ್ಮಗೌರವ ಸಿಗಬೇಕಾದರೆ ನಾವು ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ನಾವು ಸ್ಪಂದಿಸದೆ ಹೋದಲ್ಲಿ ಅದಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
ಡಾ.ಅಂಬೇಡ್ಕರ್ ಮತ್ತು ಡಾ,ಬಾಬೂ ಜಗಜೀವನರಾಂ ಇಬ್ಬರೂ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಆಹಾರ ಭದ್ರತೆಗಾಗಿ ನೀಡಿದ ಕೊಡುಗೆ ಸ್ಮರಣೀಯ. ಸ್ತ್ರೀ ಸ್ವಾತಂತ್ರ್ಯ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ತುಂಬಿದ ಭಾರತೀಯ ಸಮಾಜವನ್ನು ಸಮ ಸಮಾಜವಾಗಿ ರೂಪಿಸುವಲ್ಲಿ ಡಾ.ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಮನುಧರ್ಮದ ಆಧಾರದ ಮೇಲೆ ಆಚಾರವಿಚಾರಗಳು ನಡೆಯುತ್ತಿರುವ ಸಂಕೀರ್ಣ ಕಾಲಘಟ್ಟದಲ್ಲಿ ಅಂಬೇಡ್ಕರ್ ನೀಡಿದ ಸಂವಿಧಾನ ಸಮಸಮಾಜದ ಕಲ್ಪನೆಗೆ ಪುಷ್ಟಿ ನೀಡಿತ್ತು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಉಮೇಶ್ ಕುಂಸಿ ವಿಶೇಷ ಉಪನ್ಯಾಸ ನೀಡಿದರು. ಯೋಗಪಟು ಕಾವ್ಯ ಕೆ. ಅವರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಸೀಲ್ದಾರ್ ಪ್ರದೀಪ್ ಆರ್., ಪೌರಾಯುಕ್ತ ಎಚ್.ಕೆ.ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಸಹನೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ ಕುಮಾರ್, ದಲಿತ ಸಂಘರ್ಷ ಸಮಿತಿಯ ಲಕ್ಷ್ಮಣ್ ಸಾಗರ್, ರೇವಪ್ಪ ಹೊಸಕೊಪ್ಪ, ನಾಗರಾಜ್, ಪ್ರೇಮಪ್ಪ, ಲಕ್ಷ್ಮಮ್ಮ, ಧರ್ಮರಾಜ್ ಹಾಜರಿದ್ದರು.