ಉತ್ಪಾದನಾ ವೆಚ್ಚ ಕಡಿತಗೊಂಡರೆ ರೈತರ ಆದಾಯ ದ್ವಿಗುಣ

KannadaprabhaNewsNetwork |  
Published : Sep 28, 2024, 01:31 AM IST
ಫೋಟೋ ವಿವರಣೆ : ದ್ಯಾಮಲಾಂಭ ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್‍ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಡಾ.ತಿಪ್ಪೇಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ರೈತರ ಆದಾಯ ದ್ವಿಗುಣವಾಗಬೇಕಾದರೆ ಉತ್ಪಾದನಾ ವೆಚ್ಚ ಕಡಿಮೆ ಮಾಡಬೇಕು. ಆಗ ಆದಾಯ ತಂತಾನೆ ಹೆಚ್ಚುತ್ತದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ತಿಪ್ಪೇಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ: ರೈತರ ಆದಾಯ ದ್ವಿಗುಣವಾಗಬೇಕಾದರೆ ಉತ್ಪಾದನಾ ವೆಚ್ಚ ಕಡಿಮೆ ಮಾಡಬೇಕು. ಆಗ ಆದಾಯ ತಂತಾನೆ ಹೆಚ್ಚುತ್ತದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ತಿಪ್ಪೇಸ್ವಾಮಿ ಹೇಳಿದರು.ದ್ಯಾಮಲಾಂಭ ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿ ಲಿ. ಇದರ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.ರೈತ ಉತ್ಪಾದಕ ಕಂಪನಿಗಳು ರೈತರಿಗೆ ಬೇಕಾಗಿರುವ ಪರಿಕರಗಳನ್ನು ಕಡಿಮೆ ಬೆಲೆಗೆ ಪೂರೈಸಬೇಕು. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ಮೊದಲು ತಡೆಗಟ್ಟಿ ರೈತ ಬೆಳೆದ ಬೆಳೆಗಳಿಗೆ ಹೆಚ್ಚಿನ ಲಾಭ ಸಿಗುವಂತೆ ಮಾಡಬೇಕು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಕೈಗೆಟುಕುವ ದರದಲ್ಲಿ ಸಿಗಬೇಕು. ಕುರಿ ಮೇಕೆ ಸಾಕಾಣಿಕೆಗೆ ಬೇಕಾದ ಮೇವು ಮತ್ತು ಕಾಲ ಕಾಲಕ್ಕೆ ಲಸಿಕೆ ಸಿಗುವಂತಾದಾಗ ರೈತರ ಜೀವನ ಮಟ್ಟ ಸುಧಾರಣೆಯಾಗಲು ಸಾಧ್ಯ ಎಂದು ತಿಳಿಸಿದರು.ಕೃಷಿ ಜತೆ ಹೈನುಗಾರಿಕೆ, ಕುರಿ ಮೇಕೆ ಸಾಕಾಣಿಕೆಯಲ್ಲಿ ತೊಡಗುವವರು ದೊಡ್ಡ ದೊಡ್ಡ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವುದು ಸೂಕ್ತ. ಕೃಷಿ ಪರಿಕರಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಬದಲು ನೇರವಾಗಿ ಕಂಪನಿಗಳಿಂದ ಖರೀದಿಸುವುದು ಒಳ್ಳೆಯದು. ಹಾಗಾಗಿ ರೈತರು ಸದಸ್ಯತ್ವವನ್ನು ಪಡೆದುಕೊಂಡು ಸವಲತ್ತುಗಳನ್ನ ಸದುಪಯೋಗಪಡಿಸಿಕೊಳ್ಳುವಂತೆ ಡಾ. ತಿಪ್ಪೇಸ್ವಾಮಿ ಮನವಿ ಮಾಡಿದರು.ದ್ಯಾಮಲಾಂಭ ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಲಕ್ಷ್ಮಿಕಾಂತ ಎಸ್. ಕುಂಚಿಗನಹಾಳ್ ಮಾತನಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಆದಾಯ ಹೆಚ್ಚಿಸುವುದೇ ಕಂಪನಿಯ ಉದ್ದೇಶ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಂಡು ಕಂಪನಿಯನ್ನು ಬಲಿಷ್ಟಗೊಳಿಸುವಂತೆ ರೈತರಿಗೆ ತಿಳಿಸಿದರು.ಕೃಷಿ ಜತೆ ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಂಡರೆ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡು ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಲಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಕಂಪನಿಗೆ ಮಾರಾಟ ಮಾಡಿದಾಗ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಹೆಚ್ಚಿನ ಲಾಭಾಂಶವನ್ನು ಪಡೆಯಲು ಸಹಕಾರಿಯಾಗಲಿದೆ. ಕೃಷಿ ಪರಿಕರಗಳು, ಬೀಜ, ರಸಗೊಬ್ಬರ ಹಾಗೂ ಕುರಿ ಮೇಕೆಗೆ ಬೇಕಾಗುವ ಮೇವು ಮತ್ತು ಔಷಧಿಗಳನ್ನು ಕಂಪನಿ ಮೂಲಕ ಖರೀದಿಸಿದಾಗ ಅನುಕೂಲವಾಗಲಿದೆ ಎಂದು ಹೇಳಿದರು.ಜಿಲ್ಲಾ ಸಂಯೋಜಕ ಡಾ. ಲೋಕೇಶ್ ಡಿ. ಕಾರ್ಯಕಾರಿ ಮಂಡಳಿ ಸದಸ್ಯರುಗಳು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!