ಗೆಜ್ಜಲಗೆರೆ ಗ್ರಾಪಂ ನಗರಸಭೆಗೆ ಸೇರ್ಪಡೆ ಆದೇಶ ವಾಪಸ್ ಪಡೆಯದಿದ್ದರೆ ಬೆಂಗಳೂರಿಗೆ ಪಾದಯಾತ್ರೆ

KannadaprabhaNewsNetwork |  
Published : Mar 01, 2026, 02:00 AM IST
28ಕೆಎಂಎನ್ ಡಿ21 | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ಜನ ಪಕ್ಷಾತೀತವಾಗಿ ನನ್ನನ್ನು ಗೆಲ್ಲಿಸಿದ್ದಾರೆ. ಆ ಋಣದ ಬಾರ ನನ್ನ ತಲೆ ಮೇಲಿದೆ. ನಾನು ಬದುಕಿರುವವರೆಗೆ ಜಿಲ್ಲೆಯನ್ನು ಮರೆಯುವುದಿಲ್ಲ. ಹಲವು ಕಾರಣಗಳಿಂದ ಚುನಾವಣೆ ನಂತರ ನಿಮ್ಮನ್ನು ಪದೇ ಪದೇ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೂ ಸಹ ಜಿಲ್ಲೆಯ ಜನರು ಅಭಿಮಾನ, ಪ್ರೀತಿ, ಗೌರವವನ್ನು ನನ್ನ ಮೇಲೆ ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಅನ್ನು ನಗರಸಭೆಗೆ ಸೇರ್ಪಡೆ ಮಾಡುವ ನಿರ್ಣಯವನ್ನು ವಾಪಸ್ ಪಡೆಯದಿದ್ದಲ್ಲಿ ಮಂಡ್ಯದಿಂದ ರಾಜಧಾನಿ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಸೇರಿದಂತೆ ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಸೇರ್ಪಡೆ ವಿರೋಧಿಸಿ ಜನಪ್ರತಿನಿಧಿಗಳು, ರೈತರು ಮತ್ತು ಗ್ರಾಮಸ್ಥರೊಂದಿಗೆ ಕಳೆದ 69 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಪಾಲ್ಗೊಂಡು ಮಾತನಾಡಿದರು.

ಮದ್ದೂರು ನಗರಸಭೆ ವ್ಯಾಪ್ತಿಗೆ ನಾಲ್ಕು ಗ್ರಾಪಂಗಳನ್ನು ಸೇರ್ಪಡೆ ಮಾಡಿರುವುದು ಸರಿಯಾದ ಕ್ರಮವಲ್ಲ. ರಾಜ್ಯ ಸರ್ಕಾರ ಈ ಕೂಡಲೇ ನಿರ್ಧಾರದಿಂದ ವಾಪಸ್ಸು ಪಡೆದಿದ್ದರೆ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.

ಅನಾರೋಗ್ಯ ನಿಮಿತ್ತ ಪೂರ್ಣ ಪ್ರಮಾಣದ ಪಾದಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಸ್ವಲ್ಪ ದೂರ ನಿಮ್ಮೊಂದಿಗೆ ಹೆಜ್ಜೆ ಹಾಕುತ್ತೇನೆ. ಪಾದಯಾತ್ರೆ ಸಂಪೂರ್ಣ ಜವಾಬ್ದಾರಿಯನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಜವಾಬ್ದಾರಿಗೆ ವಹಿಸುತ್ತೇನೆ ಎಂದರು.

ಮಂಡ್ಯ ಜಿಲ್ಲೆಯ ಜನ ಪಕ್ಷಾತೀತವಾಗಿ ನನ್ನನ್ನು ಗೆಲ್ಲಿಸಿದ್ದಾರೆ. ಆ ಋಣದ ಬಾರ ನನ್ನ ತಲೆ ಮೇಲಿದೆ. ನಾನು ಬದುಕಿರುವವರೆಗೆ ಜಿಲ್ಲೆಯನ್ನು ಮರೆಯುವುದಿಲ್ಲ. ಹಲವು ಕಾರಣಗಳಿಂದ ಚುನಾವಣೆ ನಂತರ ನಿಮ್ಮನ್ನು ಪದೇ ಪದೇ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೂ ಸಹ ಜಿಲ್ಲೆಯ ಜನರು ಅಭಿಮಾನ, ಪ್ರೀತಿ, ಗೌರವವನ್ನು ನನ್ನ ಮೇಲೆ ಹೊಂದಿದ್ದಾರೆ ಎಂದರು.

ಶಾಸಕರಾಗಿ ಮುಂದೆ ಉಳಿಯಬೇಕಾದರೆ ಇನ್ನೂ ಕಾಲ ಮಿಂಚಿಲ್ಲ. ಮತದಾರರ ಮನಸ್ಸಿಗೆ ನೋವು ಮಾಡಿದರೆ ಜನಪ್ರತಿನಿಧಿಯಾಗಲು ನೈತಿಕತೆ ಇರುವುದಿಲ್ಲ. ಮತದಾರರು ದೇವರ ಸಮಾನ ಎನ್ನುವುದನ್ನು ಅರಿತುಕೊಳ್ಳಿ. ದುರಂಕಾರ ಮನೋಭಾವ ಇದ್ದರೆ ಅದನ್ನು ಬಿಡಬೇಕು. ಇಲ್ಲವಾದರೆ ಜನರೇ ತಕ್ಕ ಪಾಠ ಕಲಿಸುವ ಮೂಲಕ ಚುನಾವಣೆಯಲ್ಲಿ ತಮ್ಮನ್ನು ಧೂಳೀಪಟ ಮಾಡುತ್ತಾರೆ ಎಂದು ಶಾಸಕ ಉದಯ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ನಗರಸಭೆ ಸೇರ್ಪಡೆ ಮಾಡುವ ಸಂದರ್ಭದಲ್ಲಿ ಮೊದಲು ಜನಾಭಿಪ್ರಾಯವನ್ನು ಕೇಳಿ ಸರ್ಕಾರಕ್ಕೆ ವರದಿ ಕೊಟ್ಟು ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ಶಾಸಕರು ಜನರನ್ನು ದುಡ್ಡಿನಲ್ಲಿ ಕೊಂಡುಕೊಳ್ಳುವ ಭಾವನೆಯಲ್ಲಿದ್ದಾರೆ. ಮದ್ದೂರು ನಗರಸಭೆಯಲ್ಲಿ 150 ಸಿಬ್ಬಂದಿಗಳ ಕೊರತೆ ಇದೆ. ಸಿಬ್ಬಂದಿಗಳಿಗೆ ಸಂಬಳ ಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ನಗರಸಭೆಗೆ ಸೇರ್ಪಡೆ ಮಾಡುವುದು ತರವಲ್ಲ ಎಂದು ಸಲಹೆ ನೀಡಿದರು.

ಗೆಜ್ಜಲಗೆರೆ ಗ್ರಾಮಕ್ಕೆ ತನ್ನದೇ ಆದ ಇತಿಹಾಸ ಇದೆ. ಈ ಗ್ರಾಮದ ಜನರು ಗೌರವ ಕೊಟ್ಟರೆ, ಗೌರವ ನೀಡಿದ ವ್ಯಕ್ತಿಯನ್ನು ಮೆರೆಸುತ್ತಾರೆ. ತಮ್ಮ ವಿರುದ್ಧ ಸೆಟೆದು ನಿಂತರೆ ಅವರಿಗೆ ತಕ್ಕ ಪಾಠ ಕಲಿಸುವುದೂ ಸಹ ಈ ಗ್ರಾಮದ ಜನರಿಗೆ ಗೊತ್ತು. ಹಿಂದಿನ ಹೋರಾಟದ ಇತಿಹಾಸಗಳನ್ನು ಗಮನಿಸಿ ನಿರ್ಧಾರ ಕೈಗೊಳ್ಳಬೇಕು. ಯಡವಟ್ಟು ಮಾಡಿಕೊಂಡರೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಎಚ್ಚರಿಸಿದರು.

ಗ್ರಾಪಂಯನ್ನು ನಗರಸಭೆಗೆ ಸೇರಿಸುವ ನಿರ್ಧಾರವನ್ನು ವಾಪಸ್ಸು ಪಡೆದು ಗ್ರಾಮ ಪಂಚಾಯಿತಿಯನ್ನಾಗಿ ಮುಂದುವರಿಸುವುದು ಒಳ್ಳೆಯದ್ದು. ಈ ಬಗ್ಗೆ ನಾನೂ ಸಹ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚನೆ ಕೊಟ್ಟಿದ್ದೇನೆ. ನಮ್ಮ ಎಲ್ಲಾ ಪ್ರಯತ್ನ ವಿಫಲವಾದಲ್ಲಿ ಮಾ. 10ರ ನಂತರ ಮಂಡ್ಯದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವುದು ನಿಶ್ಚಯ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಹಿಳಾ ಘಟಕದ ಅಧ್ಯಕ್ಷ ದಿವ್ಯ ರಾಮಚಂದ್ರಶೆಟ್ಟಿ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ತಾಲೂಕು ಘಟಕದ ಅಧ್ಯಕ್ಷ ಎಚ್.ಎಲ್. ತಿಮ್ಮೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಮುಖಂಡರಾದ ರಾಜಣ್ಣ, ಪುರಸಭೆ ಮಾಜಿ ಸದಸ್ಯ ಮಹೇಶ್, ಸುನಂದಾ ಜಯರಾಂ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲಾನಂದನಾಥ ಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ
ಭಾರತೀಯ ವಿಜ್ಞಾನಿಗಳ ಕೊಡುಗೆ ಗೌರವಿಸಿ: ಮಜ್ಜಿಗೆಪುರ ಕೆ.ಶಿವರಾಮು