ನರಗುಂದ: ದೇಶಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರಗಳು ಬೆಲೆ ನೀಡದಿದ್ದರೆ, ಈ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ರೈತ ಸೇನೆ ಸದಸ್ಯ ಹನುಮಂತ ಸರನಾಯ್ಕರ ಹೇಳಿದರು.
ಬೆಳೆಗೆ ಬೆಂಬಲ ಬೆಲೆ, ಸರಿಯಾದ ಸಮಯಕ್ಕೆ ಬೆಳೆವಿಮೆ ನೀಡುವುದು, ಕೃಷಿ ಕಾನೂನು ತಿದ್ದುಪಡಿ ವಾಪಸ್ ಪಡೆಯುವುದು, ರೈತರ ಸಾಲ ಮನ್ನಾ ಇನ್ನಿತರ ಬೇಡಿಕೆ ಈಡೇರಿಸಬೇಕು ಎಂದು ಪಂಜಾಬ, ಹರಿಯಾಣ, ಉತ್ತರ ಪ್ರದೇಶದ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ರೈತರ ಬೇಡಿಕೆ ಈಡೇರಿಸದೇ ಅನ್ಯಾಯ ಮಾಡುತ್ತಿದೆ ಎಂದರು.
ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಹಲವು ಬಾರಿ ಸರ್ಕಾರಗಳಿಗೆ ಮನವಿ ನೀಡಲಾಗಿದೆ. ಆದರೆ ಪ್ರಯೋಜನವಾಗುತ್ತಿಲ್ಲ. ಸರ್ಕಾರ ದೇಶದಲ್ಲಿ ರೈತರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.ಈಗಲೂ ಕಾಲ ಮಿಂಚಿಲ್ಲ. ದೇಶದ ನೂರಾರು ನದಿಗಳ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿವೆ. ಆ ನೀರನ್ನು ಕೃಷಿ ಕಾರ್ಯಕ್ಕೆ ಉಪಯೋಗಿಸುವ ಯೋಜನೆ ರೂಪಿಸಬೇಕು. ಬಂಡವಾಳಶಾಹಿಗಳಿಂದ ದೇಶದ ಉದ್ಧಾರವಾಗುತ್ತದೆ ಎಂದು ತಿಳಿದಿದ್ದರೆ ತಪ್ಪು. ಕೃಷಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.