ತುಳಿಯೋಕೆ ವೈರಿಗಳಿದ್ದರೆ ಬೆಳೆಸುವುದಕ್ಕೆ ಭಗವಂತ ಇರುತ್ತಾನೆ

KannadaprabhaNewsNetwork |  
Published : Aug 20, 2025, 01:30 AM IST
೧೯ಬಿಹೆಚ್‌ಆರ್ ೧: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ಸಂದರ್ಭದಲ್ಲಿ ಭೂಗರ್ಭ ಸಂಜಾತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರು ಬರೆದಿರುವ ಕಾಲ ಜ್ಞಾನ ಭವಿಷ್ಯವಾಣಿಯ ಅಮೂಲ್ಯ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಒಳ್ಳೆಯವರಿಗೆ ಇರುವಷ್ಟು ಶತ್ರುಗಳು ಕೆಟ್ಟವರಿಗೆ ಇರುವುದಿಲ್ಲ. ಕೆಟ್ಟವರಿಗೆ ಇರುವಷ್ಟು ಮಿತ್ರರು ಒಳ್ಳೆಯವರಿಗೆ ಇರುವುದಿಲ್ಲ. ತುಳಿಯೋಕೆ ವೈರಿಗಳಿದ್ದರೆ ಬೆಳೆಸುವುದಕ್ಕೆ ಭಗವಂತ ಇದ್ದೇ ಇರುತ್ತಾನೆ ಎಂದು ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

- ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಒಳ್ಳೆಯವರಿಗೆ ಇರುವಷ್ಟು ಶತ್ರುಗಳು ಕೆಟ್ಟವರಿಗೆ ಇರುವುದಿಲ್ಲ. ಕೆಟ್ಟವರಿಗೆ ಇರುವಷ್ಟು ಮಿತ್ರರು ಒಳ್ಳೆಯವರಿಗೆ ಇರುವುದಿಲ್ಲ. ತುಳಿಯೋಕೆ ವೈರಿಗಳಿದ್ದರೆ ಬೆಳೆಸುವುದಕ್ಕೆ ಭಗವಂತ ಇದ್ದೇ ಇರುತ್ತಾನೆ ಎಂದು ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಸೋಮವಾರ ನಡೆದ ಶ್ರಾವಣ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೀವನದಲ್ಲಿ ಹಸಿದಾಗ ಅನ್ನ ಕೊಟ್ಟವರನ್ನು ಸೋತಾಗ ನಮ್ಮ ಜೊತೆಗೆ ನಿಂತವರನ್ನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ವರನ್ನು ಯಾವತ್ತಿಗೂ ಮರೆಯಬಾರದು. ಆಸೆ ಬಿಟ್ಟು ಲೋಕವಿಲ್ಲ. ಆಸೆಯೆಂಬ ಸುಮಗಳ ಸುತ್ತ ಮನವೆಂಬ ಭ್ರಮರಗಳು ಸುತ್ತುತ್ತಲೇ ಇರುತ್ತವೆ. ಮೌನ ಮತ್ತು ಮುಗುಳ್ನಗೆ ಎರಡು ಶಕ್ತಿಶಾಲಿ ಸಾಧನಗಳು. ನಗು ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋರಿದರೆ ಮೌನ ಸಮಸ್ಯೆಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತದೆ.

ಹಸಿದು ಬಂದ ಜೀವಕ್ಕೆ ಒಂದು ತುತ್ತು ಅನ್ನ ಕೊಟ್ಟರೆ ಅದೇ ದೇವರಿಗೆ ಪ್ರಸಾದ. ದುಡ್ಡು ಕೊಟ್ಟು ಎಲ್ಲಿ ಬೇಕಾದರೂ ಜಾಗ ಖರೀದಿಸಬಹುದು. ಆದರೆ ಸ್ಮಶಾನದಲ್ಲಿ ಜೀವ ಕೊಟ್ಟೇ ಜಾಗ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಕಟು ಸತ್ಯವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಮೌಲ್ಯಾಧಾರಿತ ಜೀವನ ಸಂವರ್ಧನೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳು ಸಕಲರ ಬಾಳಿನಲ್ಲಿ ಬೆಳಕು ತುಂಬಿವೆ ಎಂದರು.

ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಜ್ಞಾನಕ್ಕಾಗಿ ಯಾರನ್ನಾದರೂ ಬೇಡು. ಆದರೆ ಅನ್ನಕ್ಕಾಗಿ ಯಾರನ್ನೂ ಬೇಡದಿರಿ. ಮುಖ ನೋಡಿ ಸ್ನೇಹ ಮಾಡುವ ಬಟ್ಟೆ ನೋಡಿ ಗೌರವ ಕೊಡುವ, ಹಣ ನೋಡಿ ಜನರಿಂದ ಸಂಬಂಧ ಬೆಳೆಸುವವರಿಗಿಂತ ಸ್ವಲ್ಪ ದೂರದಲ್ಲಿರುವುದೇ ಒಳ್ಳೆಯದು. ದುಷ್ಟ ಶಕ್ತಿಗಳನ್ನು ದಮನ ಮಾಡಿ ಸಾತ್ವಿಕ ಶಕ್ತಿ ಬೆಳೆಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.

ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು. ಬೆಂಗಳೂರಿನ ಬೀರೂರು ಶಿವಸ್ವಾಮಿ, ನಂದೀಶ ದಾಸರಹಳ್ಳಿ, ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ, ಹರಪನಹಳ್ಳಿ ಎಂ.ಕೊಟ್ರೇಶಪ್ಪ, ಬ್ಯಾಡಗಿ ರವೀಂದ್ರ, ಮಂಜುನಾಥ ಶಾಸ್ತ್ರಿ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ, ಶಿಕ್ಷಕ ವೀರೇಶ ಕುಲಕರ್ಣಿ ಹಾಜರಿದ್ದರು.

ಶ್ರೀ ಪೀಠದ ಎಲ್ಲ ದೈವಗಳಿಗೆ ಪೂಜೆ ನಡೆಯಿತು. ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಸದ್ಭಕ್ತರಿಗೆ ಶುಭ ಹಾರೈಸಿದರು.

ಪೂಜಾ ಸಂದರ್ಭದಲ್ಲಿ ಭೂಗರ್ಭ ಸಂಜಾತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರು ಬರೆದಿರುವ ಕಾಲ ಜ್ಞಾನ ಭವಿಷ್ಯವಾಣಿಯ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರು ಬಿಡುಗಡೆಗೊಳಿಸಿದರು. ೧೯ಬಿಹೆಚ್‌ಆರ್ ೧:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ಸಂದರ್ಭದಲ್ಲಿ ಭೂಗರ್ಭ ಸಂಜಾತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರು ಬರೆದಿರುವ ಕಾಲ ಜ್ಞಾನ ಭವಿಷ್ಯವಾಣಿಯ ಅಮೂಲ್ಯ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ