ಕೆರೆಗಳಿಗೆ ಒಳಹರಿವಿನ ತೊಂದರೆಯಿದ್ದಲ್ಲಿ ಪರಿಹರಿಸಿ: ಮನೋಜ್ ಕುಮಾರ್ ಮೀನಾ

KannadaprabhaNewsNetwork |  
Published : Sep 30, 2025, 12:00 AM IST
29ಕೆಎಂಎನ್‌ಡಿ-6ಮಂಡ್ಯದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ ಮೀನಾ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್‌.ನಂದಿನಿ ಹಾಜರಿದ್ದರು.  | Kannada Prabha

ಸಾರಾಂಶ

ಸಾಮಾಜಿಕ ಪಿಂಚಣಿಗಳನ್ನು ಪಾವತಿ ಮಾಡುವ ಸಂದರ್ಭದಲ್ಲಿ ಮರಣ ಹೊಂದಿರುವವರ ಮರಣ ಪ್ರಮಾಣ ಪತ್ರ ಪಡೆದು ಈ ಜನ್ಮ ಸಾಫ್ಟ್‌ವೇರ್‌ನಲ್ಲಿ ಅಪ್ ಲೋಡ್ ಮಾಡಿಸಿ ಪಿಂಚಣಿ ಪಾವತಿ ನಿಲ್ಲಿಸಲು ಕ್ರಮ ವಹಿಸಬೇಕು. ಅನ್ನಭಾಗ್ಯ ಹಾಗೂ ಗೃಹ ಲಕ್ಷ್ಮಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್ ಜಲಾಶಯ ತುಂಬಿದ್ದು, ಕೆರೆಗಳಿಗೆ ನೀರು ತುಂಬಿಸುವ ಕೆಲಸ ಪ್ರಗತಿಯಲ್ಲಿದ್ದರೂ ಕೆಲವು ಕೆರೆಗಳು ತುಂಬಿರುವುದಿಲ್ಲ. ಕೆರೆಗಳಿಗೆ ಒಳಹರಿವಿಗೆ ತೊಂದರೆಯಿದ್ದಲ್ಲಿ ಪರಿಶೀಲಿಸಿ ಪರಿಹರಿಸುವಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ ಮೀನಾ ತಿಳಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಶೇ.100ರಷ್ಟು ಕೆರೆಗಳನ್ನು ತುಂಬಿಸಿದರೆ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ. ಕೆರೆಗಳ ಒತ್ತುವರಿ, ಹೂಳು ತೆಗೆಯುವುದು, ಒಳಹರಿವಿನ ತೊಂದರೆಗಳನ್ನು ಪರಿಹರಿಸಲು ಯೋಜನೆ ರೂಪಿಸಿಕೊಳ್ಳಬೇಕು ಎಂದರು.

ಸಾಮಾಜಿಕ ಪಿಂಚಣಿಗಳನ್ನು ಪಾವತಿ ಮಾಡುವ ಸಂದರ್ಭದಲ್ಲಿ ಮರಣ ಹೊಂದಿರುವವರ ಮರಣ ಪ್ರಮಾಣ ಪತ್ರ ಪಡೆದು ಈ ಜನ್ಮ ಸಾಫ್ಟ್‌ವೇರ್‌ನಲ್ಲಿ ಅಪ್ ಲೋಡ್ ಮಾಡಿಸಿ ಪಿಂಚಣಿ ಪಾವತಿ ನಿಲ್ಲಿಸಲು ಕ್ರಮ ವಹಿಸಬೇಕು. ಅನ್ನಭಾಗ್ಯ ಹಾಗೂ ಗೃಹ ಲಕ್ಷ್ಮಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಅನರ್ಹರನ್ನು ಕೈಬಿಡಬೇಕು ಎಂಬ ಉದ್ದೇಶದಿಂದ ಸರ್ಕಾರದಿಂದ ಸಲಹೆ ಹಾಗೂ ಸೂಚನೆ ನೀಡಲಾಗಿದೆ‌. ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚನೆ ನೀಡಿದರು.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 7136 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಅವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಯುವನಿಧಿ ಪ್ಲಸ್ ಯೋಜನೆ ಜಾರಿಗೆ ತರಲಾಗಿದೆ. 7136 ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆಯ ಆಧಾರದ ಮೇಲೆ ಎಂಜಿನಿಯರಿಂಗ್, ಪದವಿ, ಐಟಿಐ ಗುಂಪು ಮಾಡಿ ಅವರಿಗೆ ಉದ್ಯೋಗ ದೊರಕುವ ಕ್ಷೇತ್ರ ಗುರುತಿಸಿ ತರಬೇತಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಉತ್ತಮವಾಗಿದ್ದರೂ ಲಿಂಗಾನುಪಾತದ ವ್ಯತ್ಯಾಸ ಹೆಚ್ಚಿರುತ್ತದೆ. ಇದು ಸಮಾಜದಲ್ಲಿ ಹಾನಿಕಾರಕ ಬೆಳವಣಿಗೆಯಾಗಿದೆ. ಎಲ್ಲಾ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಹೆಣ್ಣು ಭ್ರೂಣ ಹತ್ಯೆ ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಪ್ರಾಥಮಿಕ‌ ಹಂತದಲ್ಲೇ ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ನೀಡಬೇಕು. ಅಂಗನವಾಡಿ ಹಾಗೂ ಶಾಲಾ ಕೊಠಡಿಗಳು ಬೀಳುವ ಹಂತದಲ್ಲಿದ್ದರೆ ತಕ್ಷಣ ಬೇರೆ ವ್ಯವಸ್ಥೆ ಮಾಡಿ ಕೊಠಡಿ ದುರಸ್ತಿಯ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು 24 ಗಂಟೆಗಳ ಕಾಲ ವಸತಿ ಶಾಲೆಗಳಲ್ಲಿರುತ್ತಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬರುವಂತೆ ಯೋಜನೆ ರೂಪಿಸುವಂತೆ ತಿಳಿಸಿದರು.

ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸೆ.30 ಕೊನೆಯ ದಿನಾಂಕವಾಗಿದ್ದು, 16 ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಹೆಸರು ನೊಂದಾಯಿಸಿಕೊಳ್ಳಬಹುದು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸಭೆಗೆ ಮಳೆಯ ಪ್ರಮಾಣ, ಬಿತ್ತನೆ ಬೀಜ, ಬೆಳೆ ಹಾನಿ, ಮನೆ ಹಾನಿ ಪ್ರಕರಣ, ರಸಗೊಬ್ಬರ, ಆಧಾರ್ ಸೀಡಿಂಗ್, ಭೂ ಸುರಕ್ಷಾ ಯೋಜನೆ ಹಾಗೂ ಮಿಮ್ಸ್‌ನಲ್ಲಿ ಕೈಗೊಳ್ಳಬೇಕಿರುವ ಕೆಲಸಗಳ ಬಗ್ಗೆ ಸಭೆಗೆ ವಿವರಿಸಿದರು.

ಜಿಲ್ಲಾ ಪಂಚಾಯ್ತಿಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಸಭೆಗೆ ಮನರೇಗಾ, ಜಲ್ ಜೀವನ್ ಮಿಷನ್, ಬಹು ಗ್ರಾಮ‌ ಕುಡಿಯುವ ನೀರಿನ ಯೋಜನೆ ಕುರಿತಂತೆ ಸಭೆಗೆ ವಿವರಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ