ಸ್ವಾತಂತ್ರ್ಯ ಬಂದು 78 ವರ್ಷವಾದರೂ ಅಸಮಾನತೆ, ಭ್ರಷ್ಟಾಚಾರ, ದೌರ್ಜನ್ಯ, ಮಹಿಳೆಯರ ಹತ್ತಿಕ್ಕುವ ಪ್ರಯತ್ನ, ದಾಳಿ ಇಂತಹ ಪ್ರಯತ್ನಗಳು ಇನ್ನು ಜೀವಂತವಾಗಿರುವುದು ವಿಷಾದದ ಸಂಗತಿ ಎಂದು ಶಾಸಕ ಎ .ಆರ್. ಕೃಷ್ಣಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸ್ವಾತಂತ್ರ್ಯ ಬಂದು 78 ವರ್ಷವಾದರೂ ಅಸಮಾನತೆ, ಭ್ರಷ್ಟಾಚಾರ, ದೌರ್ಜನ್ಯ, ಮಹಿಳೆಯರ ಹತ್ತಿಕ್ಕುವ ಪ್ರಯತ್ನ, ದಾಳಿ ಇಂತಹ ಪ್ರಯತ್ನಗಳು ಇನ್ನು ಜೀವಂತವಾಗಿರುವುದು ವಿಷಾದದ ಸಂಗತಿ ಎಂದು ಶಾಸಕ ಎ .ಆರ್. ಕೃಷ್ಣಮೂರ್ತಿ ಹೇಳಿದರು.ನ್ಯಾಷನಲ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ವೀರರನ್ನು ಸ್ಮರಿಸಿ ನಮನ ಸಲ್ಲಿಸುವ ದಿನ ಇದಾಗಿದೆ. ಭಾರತೀಯರಾದ ನಾವು ಇಂದು 78ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತ ಹಕ್ಕಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ.
ತಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಕೂಡದು, ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತೆ ಅಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ನಾಡಿನ ಅಭಿವೃದ್ಧಿಗೂ ಪೂರಕವಾಗುವ ಜೊತೆ ಜೊತೆಗೆ ಕುಟುಂಬದ ಅಭಿವೃದ್ಧಿಯಾಗಲಿದೆ. ಸ್ವಾತಂತ್ರ್ಯ ಬಂದು 78 ವರುಷಗಳಾದರೂ ಹಲವು ಕಡೆ ಇನ್ನು ಕೂಡ ಅಸಮಾನತೆ, ದೌರ್ಜನ್ಯ ತಾಂಡವವಾಡುತ್ತಿರುವುದು ತಲೆತಗ್ಗಿಸುವ ವಿಚಾರ ಎಂದರು.
ರಾಜ್ಯ ಸರ್ಕಾರ ಜನರ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ಸಂವಿಧಾನ ಆಶಯವನ್ನು ಎತ್ತಿಹಿಡಿದಿದೆ. ತಮ್ಮ ಸ್ವಾತಂತ್ರ್ಯವನ್ನು ಇತರರ ಸ್ವಾತಂತ್ರಕ್ಕೆ ಅಡ್ಡಿಯಾಗದಂತೆ ನಾವೆಲ್ಲರೂ ನೋಡಿಕೊಂಡರೆ ಸ್ವಾತಂತ್ರ್ಯ ದಿನಾಚರಣೆಗೆ ನೈಜ ಅರ್ಥ ಬರಲಿದೆ ಎಂದರು.
ಪಟ್ಟಣದ ನ್ಯಾಷನಲ್ ಶಾಲಾ ಮೈದಾನದಲ್ಲಿ ಇಂದು ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಪವಿಭಾಗಾಧಿಕಾರಿ ಮಹೇಶ್ ಅವರು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು. ಪೊಲೀಸ್ ತಂಡ ಹಾಗೂ ಎಲ್ಲ ಶಾಲಾ ತಂಡದಿಂದ ಪಥಸಂಚಲನ ನಡೆಯಿತು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮೂವರು ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು. ಎಸ್.ವಿ.ಕೆ ಶಾಲೆಯ ಶಿಕ್ಷಕ ಮದ್ದೂರು ದೊರೆಸ್ವಾಮಿ, ಉಗ್ರಾಣ ನಿಗಮ ಅಧ್ಯಕ್ಷ ಜಯಣ್ಣ, ತಹಸೀಲ್ದಾರ್ ಮಂಜುಳಾ, ತಾಪಂ ಇಒ ಶಿವಪ್ರಕಾಶ್, ಡಿವೈಎಸ್ಪಿ ಧರ್ಮೇಂದ್ರ, ಬಿಇಒ ಮಂಜುಳಾ, ನಗರಸಭೆ ಪೌರ ಆಯುಕ್ತ ರಮೇಶ್ ಇನ್ನಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.