ಸಂಸಾರದಲ್ಲಿ ಎಷ್ಟೇ ಕಲಹ ಬಂದರೂ ಸತಿ ಪತಿಗಳು ಕೊನೆವರೆಗೂ ಹೊಂದಿಕೊಂಡು ಹೋಗಬೇಕು. ಸಮಸ್ಯೆಗಳು ಸಾಂಸಾರಿಕರಿಗೆ ಬರುತ್ತವೆ, ಇನ್ನೊಬ್ಬರಿಗೆ ತೊಂದರೆ ಕೊಡದೆ ಇರುವುದೇ ನಿಜವಾದ ತಪಸ್ಸು ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದಾಂಪತ್ಯಕ್ಕೆ ಅಡಿಯಿಡುತ್ತಿರುವ ಜೋಡಿಗಳಲ್ಲಿ ಪರಸ್ಪರ ಪ್ರೀತಿ ಮೈದಳೆದರೆ ಬದರು ಸ್ವರ್ಗವಾಗುತ್ತದೆ ಎಂದು ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಬಸವಕೇಂದ್ರ ಮುರುಘಾಮಠದಲ್ಲಿ ಸೋಮವಾರ ನಡೆದ 34ನೇ ವರ್ಷದ ಎರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು ಸತಿ, ಪತಿ ಎಂಬ ಎರಡು ದೇಹವಿದ್ದರೂ ಮನಸ್ಸು ಮತ್ತು ಆಲೋಚನೆಗಳು ಒಂದೇ ಇರಬೇಕು ಎಂದರು.
ಸಂಸಾರದಲ್ಲಿ ಎಷ್ಟೇ ಕಲಹ ಬಂದರೂ ಸತಿ ಪತಿಗಳು ಕೊನೆವರೆಗೂ ಹೊಂದಿಕೊಂಡು ಹೋಗಬೇಕು. ಇನ್ನೊಬ್ಬರಿಗೆ ತೊಂದರೆ ಕೊಡದೆ ಇರುವುದೇ ನಿಜವಾದ ತಪಸ್ಸು. ಸಮಸ್ಯೆಗಳು ಸಾಂಸಾರಿಕರಿಗೆ ಬರುತ್ತವೆ. ಅವುಗಳನ್ನು ಮೆಟ್ಟಿ ನಿಲ್ಲುವ ಜಾಣ್ಮೆ ನಮ್ಮದಾಗಬೇಕು. ಸಮಸ್ಯೆಗಳು ಬಂದಾಗ ಸಮಚಿತ್ತದಿಂದ ಯೋಚಿಸಿ ತೀರ್ಮಾನ ಕೈಗೊಳ್ಳಬೇಕೆಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪುರ ಮಾತನಾಡಿ, 12ನೇ ಶತಮಾನದಂತೆ ಶ್ರೀಮುರುಘಾ ಮಠ ಹಿಂದುಳಿದವರಿಗೆ ಆಶಾಕಿರಣವಾಗಿದೆ. ಈ ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳು ನಮಗೆಲ್ಲ ಆದರ್ಶ. ಜಾತಿ ವಿಷಬೀಜ ಬಿತ್ತುವ ಇಂದಿನ ದಿನಮಾನಗಳಲ್ಲಿ ಶಾಂತಿ ನೆಲೆಸಲಿ. ನಮ್ಮ ನಾಡು ಶಾಂತಿಯ ಬೀಡು. ಸಾಮೂಹಿಕ ಕಲ್ಯಾಣದಂತಹ ಮಹತ್ಕಾರ್ಯಗಳು ನಿರಂತರವಾಗಿ ಎಲ್ಲೆಡೆ ನಡೆದರೆ ನಾವು ಒಂದು ಎನ್ನುವ ಭಾವನೆ ಬರುತ್ತದೆ. ನಮ್ಮದು ಉತ್ತಮ ಸಂಸ್ಕಾರವುಳ್ಳ ರಾಷ್ಟ್ರ. ಇಂತಹ ದೇಶದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. ನಾವು ಇನ್ನೊಬ್ಬರ ಶ್ರೇಯಸ್ಸನ್ನು ಬಯಸುತ್ತ ಬೆಳೆಯಬೇಕು, ಬೆಳೆಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 7 ಜೋಡಿಗಳು ದಾಂಪತ್ಯಕ್ಕೆ ಅಡಿ ಇಟ್ಟರು. ಬಸವಪ್ರಭು ಸ್ವಾಮೀಜಿ ಎಲ್ಲರಿಗೂ ಪುಷ್ಪವೃಷ್ಟಿಗೈದು ಶುಭ ಹಾರೈಸಿದರು. ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಮುರುಘೇಂದ್ರ ಸ್ವಾಮಿಗಳು, ಶ್ರೀ ಬಸವ ನಾಗಿದೇವ ಸ್ವಾಮಿಗಳು ಭಾಗವಹಿಸಿದ್ದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.ಶರಣರ ವಚನ ಆಧ್ಯಾತ್ಮಿಕ ಸಂಪತ್ತು: ಶಿವಯೋಗೀಶ್ವರಸಾಮೂಹಿಕ ವಿವಾಹ ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಗುಡ್ಡದಆನ್ವೇರಿ ವಿರಕ್ತಮಠದ ಶ್ರೀ ಶಿವಯೋಗೀಶ್ವರ ಸ್ವಾಮಿಗಳು ಮಾತನಾಡಿ, ಅನುಭವ ಮಂಟಪದ ಅನುಭವ ದೊಡ್ಡದು. ಅನೇಕ ಶಿವಶರಣರು ಅಲ್ಲಿ ಆಧ್ಯಾತ್ಮಿಕ ಅನುಭವ ಪಡೆದುಕೊಂಡು ವಚನ ರಚಿಸಿದರು. 12ನೇ ಶತಮಾನದೊಳಗೆ ಇವನಾರವ ಎಂದೆನಿಸದೆ ಇವ ನಮ್ಮವ ಎಂದವರು. ಶರಣರದು ದಾಸೋಹ, ಕಾಯಕಮಾರ್ಗ. ನೇಗಿಲಯೋಗಿಯಾದ ಒಕ್ಕಲಿಗ ಮುದ್ದಣ್ಣನನ್ನು ಅನುಭವ ಮಂಟಪಕ್ಕೆ ಕರೆದು ಶಿವಶರಣ ರನ್ನಾಗಿಸಿದವರು ಶರಣರು. ಯಾವುದೇ ಕಾಯಕವನ್ನು ಶ್ರೇಷ್ಠವೆಂದು ಕರೆದ ಶರಣರು ಭೌತಿಕ ಸಂಪತ್ತಿಗಿಂತ ಆಧ್ಯಾತ್ಮಿಕ ಸಂಪತ್ತು ಮುಖ್ಯ ಎಂದು ಭಾವಿಸಿದ್ದ ರೆಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.