ನಾವೆಲ್ಲ ಒಂದೇ ಎಂಬ ಭಾವನೆ ಬೆಳೆದರೆ ಕೋಮುದ್ವೇಷ ದೂರ: ಪಠಾಣ

KannadaprabhaNewsNetwork |  
Published : Aug 10, 2025, 01:32 AM IST
ಪೋಟೋ ಶೀರ್ಷಿಕೆ 09ಎಸ್‌ವಿಆರ್‌01ವಿ,ಕೃ.ಗೋಕಾಕರ ರಾಷ್ಟೀಯ  ಸ್ಮಾರಕ ಟ್ರಸ್ಟ ಹಾವೇರಿ, ತಾಲೂಕಾ ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಸವಣೂರ ಇವರುಗಳ ಸಹಯೋಗದಲ್ಲಿ ಶನಿವಾರ ಪಟ್ಟಣದ ವಿ,ಕೃ.ಗೋಕಾಕರ ಭವನದಲ್ಲಿ ಜರುಗಿದ ವಿ,ಕೃ.ಗೋಕಾಕರ 116 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಶಾಸಕ ಯಾಸೀರಹಮ್ಮದಖಾನ ಪಠಾಣ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಹಾವೇರಿಯ ವಿ.ಕೃ. ಗೋಕಾಕ ರಾಷ್ಟೀಯ ಸ್ಮಾರಕ ಟ್ರಸ್ಟ್‌, ಸವಣೂರು ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು ಸವಣೂರು ತಾಲೂಕು ಘಟಕದ ಸಹಯೋಗದಲ್ಲಿ ಶನಿವಾರ ಸವಣೂರು ಪಟ್ಟಣದ ವಿ.ಕೃ. ಗೋಕಾಕ ಸಭಾಭವನದಲ್ಲಿ ವಿ.ಕೃ. ಗೋಕಾಕ ಅವರ 116ನೇ ಜನ್ಮ ದಿನಾಚರಣೆ ನಡೆಯಿತು.

ಸವಣೂರು: ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರ ಸಾಕಷ್ಟು ಸಾಧು, ಸಂತರು ಜನಿಸಿದ ಹಾಗೂ ವಾಸಿಸಿದ ಪುಣ್ಯ ಕರ್ಮಭೂಮಿಯಾಗಿದೆ ಎಂದು ಶಾಸಕ ಯಾಸೀರ ಅಹ್ಮದ್‌ ಖಾನ್‌ ಪಠಾಣ ಹೇಳಿದರು.

ಹಾವೇರಿಯ ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಸಹಯೋಗದಲ್ಲಿ ಶನಿವಾರ ಪಟ್ಟಣದ ವಿ.ಕೃ. ಗೋಕಾಕ ಸಭಾಭವನದಲ್ಲಿ ಜರುಗಿದ ವಿ.ಕೃ. ಗೋಕಾಕ ಅವರ 116ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಾಡಗೀತೆಯಲ್ಲಿ ಹೇಳಿರುವಂತೆ ಜಯ ಹೇ ಭಾರತ ಮಾತೆ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಯಾವುದೇ ಜಾತಿ, ಮತ, ಪಂಥ ಇಲ್ಲದೇ ಎಲ್ಲರೂ ಒಂದೆ ತಾಯಿಯ ಮಕ್ಕಳು ಎಂಬ ಭಾವನೆ ಬೆಳೆಸಿಕೊಂಡಲ್ಲಿ ಮಾತ್ರ ಯಾವುದೇ ರೀತಿ ಕೋಮು ದ್ವೇಷ ಇರುವುದಿಲ್ಲ ಎಂದು ಹೇಳಿದರು.ಇನ್ನೂ ಇತಿಹಾಸ ಅಧ್ಯಯನ ಕೈಗೊಂಡಾಗ ಇಲ್ಲಿನ ನವಾಬರು ಸತ್ಯಬೋಧರ ಆಶೀರ್ವಾದ ಪಡೆದುಕೊಂಡು ಮುಂದೆ ಹೋಗುತ್ತಿದ್ದರು ಎನ್ನುವುದು ತಿಳಿಯುತ್ತದೆ. ಸವಣೂರಿನ ಕೀರ್ತಿ ಪತಾಕಿಯನ್ನು ಡಾ. ವಿ.ಕೃ. ಗೋಕಾಕ ಅವರು ದೇಶಾದ್ಯಂತ ಹರಡಿರುವುದು ಹೆಮ್ಮೆಯ ವಿಷಯವಾಗಿದೆ. ಆದ್ದರಿಂದ ಡಾ. ವಿ.ಕೃ. ಗೋಕಾಕ ಅವರ ಇತಿಹಾಸವನ್ನು ಈ ವಿಧಾನಸಭಾ ಕ್ಷೇತ್ರ ಪ್ರತಿಯೊಂದು ಮನೆಯಲ್ಲಿ ತಿಳಿಯುವಂತೆ ಪುಸ್ತಕ ನೀಡಬೇಕಿದೆ. ಅವರ ಪರಿಚಯ ಪುಸ್ತಕ ವೆಚ್ಚವನ್ನು ನಾನೇ ಭರಿಸುತ್ತೇನೆ. ಸದ್ಯದಲ್ಲೇ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ನವಾಬರ ಹಳೆಯ ಕಟ್ಟಡಗಳನ್ನು ನವೀಕರಣ ಮಾಡಲು ₹5.70 ಲಕ್ಷ ಬಿಡುಗಡೆ ಮಾಡಲಾಗುವುದು. ನವೀಕರಣಗೊಂಡ ಹಳೆಯ ಕಟ್ಟಡದಲ್ಲಿ ನವಾಬರ ಇತಿಹಾಸ ಸಾರುವ ಮ್ಯೂಸಿಯಂ ನಿರ್ಮಿಸಲಾಗುವುದು ಎಂದರು.

ಗೋಕಾಕರ ಜನ್ಮ ದಿನಾಚರಣೆ ಅಂಗವಾಗಿ ಜರುಗಿದ ರಕ್ತದಾನ ಶಿಬಿರದಲ್ಲಿ 15 ಜನ ರಕ್ತದಾನ ಮಾಡಿದರು. ಸೃಜನಿ ನಾಟ್ಯ ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು. ನಿವೃತ್ತ ಉಪನ್ಯಾಸಕ ಎಂ.ಆರ್. ಚೂರಿ ವಿ.ಕೃ. ಗೋಕಾಕ ಅವರ ಕುರಿತು ಉಪನ್ಯಾಸ ನೀಡಿದರು.

ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ತಹಸೀಲ್ದಾರ್‌ ರವಿಕುಮಾರ ಕೊರವರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ಬ್ಲಾಕ್ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಎಂ.ಜೆ. ಮುಲ್ಲಾ, ಕೆಡಿಪಿ ಸದಸ್ಯ ರವಿ ಕರಿಗಾರ, ಪುರಸಭೆ ಉಪಾಧ್ಯಕ್ಷ ಖಮರುನ್ನಿಸಾ ಪಟೇಲ್, ವಿ.ಕೃ. ಗೋಕಾಕ ಟ್ರಸ್ಟ್‌ ಸದಸ್ಯರಾದ ಸತೀಶ ಕುಲಕರ್ಣಿ, ಪರಶುರಾಮ ಇಳಗೇರ, ಕಸಾಪ ಅಧ್ಯಕ್ಷ ಚಂದ್ರಗೌಡ ಪಾಟೀಲ, ಲಕ್ಷ್ಮಣ ಕನವಳ್ಳಿ, ನಾಗಪ್ಪ ತಿಪ್ಪಕ್ಕನವರ, ಪಾಂಡಪ್ಪ ತಿಪ್ಪಕ್ಕನವರ, ಜೀಶಾನ ಪಠಾಣ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಗುಡ್ಡಪ್ಪ ಜಲದಿ, ಎಸ್.ಎಂ. ಮಣಕಟ್ಟಿ ಹಾಗೂ ವಿ,ಕೃ. ಗೋಕಾಕರ ಅಭಿಮಾನಿಗಳು ಪಾಲ್ಗೊಂಡಿದ್ದರು.

ಸಿ.ವಿ. ಗುತ್ತಲ ಹಾಗೂ ನಿವೃತ್ತ ಶಿಕ್ಷಕ ಕೋಳಿವಾಡ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ