ಸಾಂಘಿಕ ಹೋರಾಟ ಮರೆತರೆ ಶೋಷಣೆ ನಿರಂತರ

KannadaprabhaNewsNetwork |  
Published : Mar 29, 2025, 12:37 AM IST
25ಕೆಡಿವಿಜಿ4-ದಾವಣಗೆರೆಯಲ್ಲಿ ಮಂಗಳವಾರ ಡಿಎಸ್ಸೆಸ್ ಹಮ್ಮಿಕೊಂಡಿದ್ದ ಸಮಾರಂಭ‍ವನ್ನು ಡಾ.ಬಿ.ಆರ್.ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ದಲಿತರ ಮೊದಲ ಚಳವಳಿಯಾದ ಮಹಾಡ್ ಚಳವಳಿ ಘಟಿಸಿ ಶತಮಾನದ ಹೊಸ್ತಿಲಲ್ಲಿದ್ದರೂ ಇಂದಿಗೂ ದಲಿತರ ಹೋರಾಟ ನಿಂತಿಲ್ಲ. ಅಕ್ಷರಕ್ಕೆ ತೆರೆದುಕೊಳ್ಳದೇ, ಆಮಿಷಕ್ಕೊಳಗಾಗಿ ನಮ್ಮನ್ನು ನಾವು ಪ್ರಭುತ್ವಕ್ಕೆ ಮಾರಿಕೊಳ್ಳುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ಪ್ರೊ. ಎ.ಬಿ. ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

- ದಲಿತರಿಗೆ ಪ್ರೊ. ಎ.ಬಿ.ರಾಮಚಂದ್ರಪ್ಪ ಎಚ್ಚರಿಕೆ । ಮಹಾಡ್ ಸತ್ಯಾಗ್ರಹದ ಸ್ಮರಣಾರ್ಥ ಶೋಷಿತರ ಸಂಘರ್ಷ ದಿನಾಚರಣೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಲಿತರ ಮೊದಲ ಚಳವಳಿಯಾದ ಮಹಾಡ್ ಚಳವಳಿ ಘಟಿಸಿ ಶತಮಾನದ ಹೊಸ್ತಿಲಲ್ಲಿದ್ದರೂ ಇಂದಿಗೂ ದಲಿತರ ಹೋರಾಟ ನಿಂತಿಲ್ಲ. ಅಕ್ಷರಕ್ಕೆ ತೆರೆದುಕೊಳ್ಳದೇ, ಆಮಿಷಕ್ಕೊಳಗಾಗಿ ನಮ್ಮನ್ನು ನಾವು ಪ್ರಭುತ್ವಕ್ಕೆ ಮಾರಿಕೊಳ್ಳುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ಪ್ರೊ. ಎ.ಬಿ. ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹದ ನೆನಪಿನ ಶೋಷಿತರ ಸಂಘರ್ಷದ ದಿನಾಚರಣೆ ಅಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 1927ರ ಮಹಾಡ್ ಚಳವಳಿ ದಲಿತರ ಮೊದಲ ಚಳವಳಿಯಾಗಿದೆ ಎಂದರು.

ಸಂಘಟನೆ ಎನ್ನುವುದು ನಮ್ಮಲ್ಲಿ ಅರಿವನ್ನು ವಿಸ್ತರಿಸಲು ಬೇಕು. ಆದರೆ, ಈಚಿನ ದಿನಗಳಲ್ಲಿ ಸಂಘಟನೆ ಎನ್ನುವುದು ವೈಯಕ್ತಿಕ ಸ್ವಾರ್ಥಕ್ಕಾಗಿ ಕಟ್ಟಲಾಗುತ್ತಿದೆ. ಸಂಘಟನೆಗಳು ಸಾಂಘಿಕವಾಗಿ ಹೋರಾಡದಿದ್ದರೆ ನಮ್ಮ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇರುತ್ತವೆ. ಇದೇ ಸ್ಥಿತಿ ಮುಂದುವರಿದರೆ ಭಾರತದ ವಸ್ತುಸ್ಥಿತಿ ಅರಿವಾಗುವುದಿಲ್ಲ ಎಂದು ತಿಳಿಸಿದರು.

ಅಂಬೇಡ್ಕರ್ ಹೋರಾಟಗಳು ಎಲ್ಲ ಸಮುದಾಯದ ಹಿತಬಯಸಿದ ಹೋರಾಟವಾಗಿದ್ದವು. ಮಹಾತ್ಮ ಗಾಂಧೀಜಿ 21 ದಿನ ಉಪವಾಸ ಸತ್ಯಾಗ್ರಹ ಮಾಡಿದರೂ, ದಲಿತರ ಹಕ್ಕುಗಳಿಗಾಗಿ ಒಂದೇ ಒಂದು ಸತ್ಯಾಗ್ರಹವನ್ನೂ ಮಾಡಲಿಲ್ಲ. ಸರ್ವೋದಯ, ಸಮಗ್ರ ಭಾರತದ ಕನಸ್ಸನ್ನು ಕಟ್ಟಿದ್ದರು. ಅಂಬೇಡ್ಕರ್ ಸರ್ವಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ಹೋರಾಡಿದ್ದರು. ಆದರೂ, ಅಂಬೇಡ್ಕರ್‌ ಅವರದು ದಲಿತಪರ ಹೋರಾಟವೆಂಬ ಹಣೆಪಟ್ಟಿ ಹಚ್ಚುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನಿಂದಲೂ ಸ್ಪೃಶ್ಯರು ಶೋಷಣೆಗಾಗಿ ಶಿಕ್ಷಣವನ್ನೇ ಆಯುಧವಾಗಿ ಮಾಡಿಕೊಂಡು, ದಲಿತರ ವಿದ್ಯೆ, ಅವಕಾಶವನ್ನೇ ಕಸಿದರು. ಶಿಕ್ಷಣ‍ ಪಡೆಯಲು ಎಲ್ಲರಿಗೂ ಇಂದು ಅವಕಾಶ ಇದ್ದದೆ. ಆದರೆ, ಪ್ರಭುತ್ವವು ಬೇರೆ ಬೇರೆ ರೀತಿಯಲ್ಲಿ ವಂಚಿಸುತ್ತಿದೆ. ಧರ್ಮ, ದೇವರು, ಸಂಸ್ಕೃತಿ ಹೆಸರಿನಲ್ಲಿ ಸಾವಿರಾರು ವರ್ಷ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಲೈಂಗಿಕವಾಗಿ ಶೋಷಣೆ ಮಾಡಲಾಗಿದೆ. ಇಂದಿಗೂ ನಮ್ಮ ಯುವಕರಿಗ ಇದೆಲ್ಲಾ ಗೊತ್ತಾಗುತ್ತಿಲ್ಲ. ಒಂದು ಬಾಟಲಿ, ಒಂದು ಬಿರಿಯಾನಿಗಾಗಿ ಮಾರಾಟವಾಗುತ್ತಿದ್ದು, ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಪ್ರೊ. ಎ.ಬಿ. ರಾಮಚಂದ್ರಪ್ಪ ತಾಕೀತು ಮಾಡಿದರು.

ಡಿಎಸ್‌ಎಸ್‌ ಜಿಲ್ಲಾ ಪ್ರಧಾನ ಸಂಚಾಲಕ ಬಿ.ದುಗ್ಗಪ್ಪ ಕೆಟಿಜೆ ನಗರ ಅಧ್ಯಕ್ಷತೆ ವಹಿಸಿದ್ದರು. ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಡಿಎಸ್‌ಎಸ್‌ ಜಿಲ್ಲಾ ಖಜಾಂಚಿ ಬಿ.ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಜೆ. ಸತೀಶಕುಮಾರ, ಸಂಘಟನಾ ಸಂಚಾಲಕ ಎ.ಡಿ.ತ್ಯಾಗರಾಜ, ಕುರುವ ಮಂಜುನಾಥ, ಜಿಲ್ಲಾ ಉಪ ಪ್ರಧಾನ ಸಂಚಾಲಕ ನಾಗಪ್ಳ ಮಂಜನಾಥ ಇತರರು ಇದ್ದರು.

ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಡಿಎಸ್‌ಎಸ್‌ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

- - -

(ಬಾಕ್ಸ್‌) * ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ: ನಾಗರಾಜ

ಕಾರ್ಯಕ್ರಮ ಉದ್ಘಾಟಿಸಿದ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ ಮಾತನಾಡಿ, ಅಂಬೇಡ್ಕರ್ ಶಿಕ್ಷಣದ ಹೋರಾಟ, ಸಂಘಟನೆಯ ಮಂತ್ರವನ್ನು ಸಾರಿದರು. ಆದರೆ, ಈಗಿನವರು ಶಿಕ್ಷಣವನ್ನು ಬಿಟ್ಟು, ಉಳಿದೆರೆಡನ್ನು ಮಾತ್ರ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಅವಕಾಶ ಇದೆ. ಆದರೆ, ಹೋರಾಟಗಳು ನ್ಯಾಯ ಮಾರ್ಗದಲ್ಲಿ, ವ್ಯವಸ್ಥಿತವಾಗಿ ಸಾಗಿದಾಗ ಮಾತ್ರ ನಿಮ್ಮ ಹೋರಾಟಕ್ಕೆ ಶಕ್ತಿ ಬರುತ್ತದೆ. ಅಂತಹ ಹೋರಾಟಕ್ಕೆ ನಮ್ಮ ಸಹಕಾರವೂ ಇರುತ್ತದೆ ಎಂದರು.- - - -25ಕೆಡಿವಿಜಿ4.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಡಿಎಸ್‌ಎಸ್‌ ಹಮ್ಮಿಕೊಂಡಿದ್ದ ಸಮಾರಂಭ‍ವನ್ನು ಗಣ್ಯರು ಡಾ.ಅಂಬೇಡ್ಕರ್, ಪ್ರೊ. ಬಿ.ಕೃಷ್ಣಪ್ಪ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ